ಸಿದ್ದರಾಮಯ್ಯ ಹಾಗೆ ಹೇಳಿದ್ದಾದರೂ ಏಕೆ? ಕಾರಣಗಳು ಬೇಕೆ?
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಕೇವಲ 24 ಗಂಟೆಗಳು ಬಾಕಿಯಿರುವಂತೆ, ರಾಜಕೀಯದಂಗಳ ಚಟುವಟಿಕೆಯ ಜೇನಿನ ಗೂಡಾಗಿದೆ, ಸ್ಪರ್ಧಾಳುಗಳ ಹೊಟ್ಟೆಯಲ್ಲಿ ಪಾತರಗಿತ್ತಿಗಳು ಓಡುಡುತ್ತಿವೆ, ಕೆಲವರು ರೆಸಾರ್ಟ್ ಸೇರಿದ್ದಾರೆ, ಕೆಲವರು ಹೃದಯ ಬಡಿತ ಗಟ್ಟಿಯಾಗಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.
ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಬಂದಿರುವ ಚುನಾವಣೋತ್ತರ ಸಮೀಕ್ಷೆಗಳು ವಿಧಾನಸಭೆ ಚುನಾವಣೆಯನ್ನು ಮತ್ತಷ್ಟು ರೋಚಕವಾಗಿಸಿದೆ. ನಾಳೆ ಪ್ರಕಟವಾಗುವ ಫಲಿತಾಂಶ, ನಂತರ ನಡೆಯಲಿರುವ ಸಂಭವನೀಯ ಮೈತ್ರಿಗಳು, ರಾಜಕೀಯ ಹುನ್ನಾರಗಳು, ಷಡ್ಯಂತ್ರಗಳು ಬಹುಶಃ ಗುಜರಾತ್ ಚುನಾವಣೆಯನ್ನೂ ಮೀರಿಸಲಿವೆ.
ದಲಿತರಿಗೆ ಸಿಎಂ ಪಟ್ಟ: ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಸೂಚನೆ?!
ಈ ಎಲ್ಲದರ ನಡುವೆ ಭಾರೀ ಗಮನ ಸೆಳೆದಿದ್ದು ಮತ್ತು ಕುತೂಹಲ ಮೂಡಿಸಿದ್ದು, ಸಿದ್ದರಾಮಯ್ಯನವರ ಅನಿರೀಕ್ಷಿತ ಹೇಳಿಕೆ. 'ನಾನು ದಲಿತ ಅಭ್ಯರ್ಥಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಲು ಸಿದ್ಧನಿದ್ದೇನೆ' ಎಂದು ಹೇಳಿರುವುದು ಕಾಂಗ್ರೆಸ್ಸಿಗರನ್ನು ದಂಗುಬಡಿಸಿರುವುದು ಮಾತ್ರವಲ್ಲ, ಅವರ ವಿರೋಧಿಗಳನ್ನೂ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ರಾಜಕೀಯ ಅಂದ್ರೆ ಇದೇ ಅಲ್ಲವೆ? ಅಧಿಕಾರಕ್ಕಾಗಿ ಕಚ್ಚಾಡುವುದು, ಅವರಿವರೊಂದಿಗೆ ಅನೈತಿಕ ಮೈತ್ರಿ ಮಾಡಿಕೊಳ್ಳುವುದು, ಅವರನ್ನು ಬೀಳಿಸಲಿಕ್ಕಾಗಿ ಇವರ ಕಾಲೆಳೆಯುವುದು, ಶತ್ರು ಶತ್ರುಗಳೇ ಮಿತ್ರರಾಗುವುದು, 'ಆಪರೇಷನ್'ಗಳಾಗುವುದು... ಒಟ್ಟಿನಲ್ಲಿ ತನ್ನ ವಿರೋಧಿ ಅಧಿಕಾರದ ಚುಕ್ಕಾಣಿ ಹಿಡಿಯಬಾರದು ಅಷ್ಟೇ.
ದಲಿತ ಮುಖ್ಯಮಂತ್ರಿಗೆ ಕುರ್ಚಿ ಬಿಟ್ಟುಕೊಡಲು ಹೊರಟ ಸಿದ್ದರಾಮಯ್ಯ!
ಈ ಚದುರಂಗದಾಟಕ್ಕೆ, ರಾಜಕೀಯ ಪಲ್ಲಟಗಳಿಗೆ ಬಲವಾದ ಕಾರಣಗಳಿಲ್ಲದಿಲ್ಲ. ನಾಳೆಯ ಫಲಿತಾಂಶ ಮತ್ತು ನಂತರ ನಡೆಯುವ ಬೆಳವಣಿಗೆಗಳು ಕರ್ನಾಟಕದ ರಾಜಕೀಯ ದಿಕ್ಕನ್ನೇ ಬದಲಿಸಬಹುದು ಅಥವಾ ಜನರ ಆಶೋತ್ತರಗಳನ್ನು ಧ್ವಂಸ ಮಾಡಿಬಿಡಬಹುದು. ಏನೇ ಆಗಲಿ, ಪ್ರಜಾಪ್ರಭುತ್ವ ಬಲಿಯಾಗದಿದ್ದರೆ ಸಾಕು ಅಷ್ಟೇ.
ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಹಾಗೆ ಹೇಳಿದ್ದು ಏಕೆ?
ಭಾರೀ ವಿಶ್ವಾಸದಿಂದಿದ್ದ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ, ನಾನು ದಲಿತ ಅಭ್ಯರ್ಥಿಗೆ ಮುಖ್ಯಮಂತ್ರಿ ಪದವಿ ಬಿಟ್ಟುಕೊಡಲು ಸಿದ್ಧ ಎಂದು ಹೇಳಲು ಕಾರಣವಾದರೂ ಏನು? ಚುನಾವಣೋತ್ತರ ಸಮೀಕ್ಷೆಯಂತೆ ಭಾರತೀಯ ಜನತಾ ಪಕ್ಷದ ಕೈ ತುಸು ಮೇಲಾಗಿರುವುದರಿಂದ, ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಬಾರದು ಎಂಬ ಕಾರಣದಿಂದಾಗಿ ಕಾಂಗ್ರೆಸ್ ಹೈಕಮಾಂಡ್ ನಿಂದ ಹೀಗೆ ಹೇಳಿಕೆ ನೀಡಲು ಸೂಚನೆ ಬಂದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
'ದಲಿತ ಎಂಬ ಕಾರಣಕ್ಕೆ ಸಿಎಂ ಪದವಿಗೇರಲು ಇಷ್ಟವಿಲ್ಲ'
ಸೋಲುವ ಭಯ ಕಾಡುತ್ತಿದೆಯೆ ಸಿದ್ದರಾಮಯ್ಯನವರಿಗೆ?
ಎರಡನೆಯದಾಗಿ, ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮತ್ತು ಬಾಗಲಕೋಟೆಯ ಬಾದಾಮಿ ಕ್ಷೇತ್ರಗಳಲ್ಲಿ ಸೋಲುವ ಭೀತಿ ಅವರನ್ನು ಕಾಡುತ್ತಿದೆಯೆ? ಅವರು ಎರಡರಲ್ಲಿಯೂ ಸೋಲಲಿದ್ದಾರೆ ಎಂದು ನಟ ಅಂಬರೀಶ್ ಹೇಳಿದ್ದು ಮಾತ್ರವಲ್ಲ, ರಾಜಕೀಯ ವಲಯದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚಾಮುಂಡೇಶ್ವರಿಯಲ್ಲಿ ಅವರು ಜೆಡಿಎಸ್ ನ ಪ್ರಬಲ ಹುದ್ದರಿ, ಒಕ್ಕಲಿಗರ ನಾಯಕ, ಮಾಜಿ ಕಾಂಗ್ರೆಸ್ ಧುರೀಣ ಜಿಟಿ ದೇವೇಗೌಡ ವಿರುದ್ಧ ಸ್ಪರ್ಧಿಸಿದ್ದರೆ, ಬಾದಾಮಿಯಲ್ಲಿ ವಾಲ್ಮಿಕಿ ಜನಾಂಗದ ನಾಯಕ ಬಿ ಶ್ರೀರಾಮುಲು ಅವರಿಗೆ ಟಕ್ಕರ್ ನೀಡಿದ್ದಾರೆ. ತಕ್ಕಡಿ ಯಾವ ಕಡೆಯೂ ತೂಗುವ ಸಾಧ್ಯತೆಗಳಿವೆ.
ತ್ರಿಶಂಕು ಫಲಿತಾಂಶ : ಮಲ್ಲಿಕಾರ್ಜುನ ಖರ್ಗೆ ಬಾಯಿಗೆ ಲಡ್ಡು?
ಸಿದ್ದು ಮುಖ್ಯಮಂತ್ರಿಯಾಗುವುದನ್ನು ಗೌಡರು ಒಪ್ಪಲ್ಲ
ಒಂದು ವೇಳೆ ಅಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್ಸಿಗೆ, ಬಿಜೆಪಿಯನ್ನು ಹೊರಗಿಡುವ ದೃಷ್ಟಿಯಿಂದ ಜೆಡಿಎಸ್ ಪಕ್ಷವನ್ನು ಕೈಹಿಡಿಯುವುದು ಅನಿವಾರ್ಯವಾದರೆ, ಸಹಜವಾಗಿ ಸಿದ್ದರಾಮಯ್ಯನವರು ಪಕ್ಕಕ್ಕೆ ಸರಿಯಲೇಬೇಕಾಗುತ್ತದೆ. ಸಿದ್ದರಾಮಯ್ಯನವರು ಎರಡರಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದರೂ ಕೂಡ ಈ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿಯಾಗುವುದನ್ನು ಜೆಡಿಎಸ್ ಸುಪ್ರೀಮೋ ಎಚ್ ಡಿ ದೇವೇಗೌಡ ಅವರು ಸುತಾರಾಂ ಒಪ್ಪುವುದಿಲ್ಲ. ನಾನೇ ಮುಖ್ಯಮಂತ್ರಿ ಅಂತ ಅವರು ಹಠ ಹಿಡಿದು ಕೂತರೆ ವಿರೋಧ ಪಕ್ಷದ ಸ್ಥಾನದಲ್ಲಿ ಅವರು ವಿರಾಜಮಾನರಾಗಬೇಕಾಗುತ್ತದೆ. ಬಿಜೆಪಿಯನ್ನು ಹೊರಗಿಡುವ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಪಟ್ಟ ನೀಡಿದರೂ ಅಚ್ಚರಿಯಿಲ್ಲ.
ಕಾಂಗ್ರೆಸ್ ಮುಕ್ತ ಭಾರತಕ್ಕೆ ಪ್ರತಿತಂತ್ರ
ಇಲ್ಲಿ ಎಲ್ಲಕ್ಕಿಂತ ಪ್ರಮುಖವಾದದ್ದು ಭಾರತೀಯ ಜನತಾ ಪಕ್ಷವನ್ನು, ಯಾವುದೇ ತಂತ್ರಗಾರಿಕೆಯಿಂದಲಾದರೂ ಸರಿ ಅಧಿಕಾರದಿಂದ ದೂರವಿಡಬೇಕು. ಅಮಿತ್ ಶಾ ಅವರಾಗಲಿ, ನರೇಂದ್ರ ಮೋದಿಯವರಾಗಲಿ, ಯಡಿಯೂರಪ್ಪನವರಾಗಲಿ ತಮ್ಮ ಪ್ರತಿ ಪ್ರಚಾರ ಸಭೆಯಲ್ಲಿ ಭಾರತವನ್ನು 'ಕಾಂಗ್ರೆಸ್ ಮುಕ್ತ' ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಲೇ ಬಂದಿದ್ದಾರೆ. ಇದನ್ನು ಸಿದ್ದರಾಮಯ್ಯ ಪ್ರತಿ ಪ್ರಚಾರ ಸಭೆಯಲ್ಲಿ ಕಟುವಾಗಿ ಟೀಕಿಸುತ್ತಾ ಬಂದಿದ್ದರು. ಹೀಗಾಗೆ ಇದು ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ಸಿಗೆ ಭಾರೀ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಅವಕಾಶ ನೀಡಲೇಬಾರದು ಎಂಬ ಛಲ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಮೂಡಿದೆ.
ನನಗೂ ಮುಖ್ಯಮಂತ್ರಿಯಾಗಲು ಅರ್ಹತೆಯಿದೆ
ಮೇಲ್ನೋಟಕ್ಕೆ ಕಾಂಗ್ರೆಸ್ ಒಗ್ಗಟ್ಟಾಗಿದೆ, ಎಲ್ಲ ಘಟಾನುಘಟಿ ನಾಟಕರು ಸಿದ್ದರಾಮಯ್ಯ ಹಿಂದಿದ್ದಾರೆ ಎಂದು ಕಂಡರೂ, ಆಂತರಿಕವಾಗಿ ಹಾಗಿಲ್ಲದಿರುವುದು ರಹಸ್ಯವಾಗೇನೂ ಉಳಿದಿಲ್ಲ. ನಾನು ಕೂಡ ಮುಖ್ಯಮಂತ್ರಿಯಾಗಲು ಸಿದ್ಧ ಅಥವಾ ನಾನೇಕೆ ಮುಖ್ಯಮಂತ್ರಿಯಾಗಬಾರದು ಅಥವಾ ನನಗೂ ಮುಖ್ಯಮಂತ್ರಿಯಾಗಲು ಅರ್ಹತೆಯಿದೆ ಎಂದು ಅರ್ಧ ಡಜನ್ ನಾಯಕರು ತಮ್ಮ ಮನದಾಳದ ಇಂಗಿತವನ್ನು ಈಗಾಗಲೆ ಹರಿಯಬಿಟ್ಟಿದ್ದಾರೆ. ಎಂಬಿ ಪಾಟೀಲ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ಆರ್ ವಿ ದೇಶಪಾಂಡೆ ಮುಂತಾದವರು ಸಿದ್ಧರಾಗಿಯೇ ಕುಳಿತಿದ್ದಾರೆ.
ದಲಿತರನ್ನು ತುಳಿದಿದೆ ಎಂಬ ಮೋದಿ ಮಾತು
ಇದೆಲ್ಲದರ ಜೊತೆಗೆ ಕಾಂಗ್ರೆಸ್ ಮೊದಲಿನಿಂದಲೂ ದಲಿತ ನಾಯಕರನ್ನು ತುಳಿದಿದೆ ಎಂದು ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ಸನ್ನು ತಿವಿದಿದ್ದು, ಕಾಂಗ್ರೆಸ್ಸಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಆ ದೃಷ್ಟಿಯಿಂದ, ನಾವು ದಲಿತರ ಪರವಾಗಿಯೇ ಇದ್ದೇವೆ ಎಂದು ತೋರಿಸಲಾದರೂ ದಲಿತ ನಾಯಕನನ್ನು ಮುಖ್ಯಮಂತ್ರಿ ಪದವಿಯ ಮೇಲೆ ಕೂಡಿಸಬೇಕು ಎಂಬ ಹಠ ಹಿಡಿದಿದೆ. ಅಲ್ಲದೆ, ಹಲವಾರು ದಶಕಗಳಿಂದ ದಲಿತ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಗಗನಕುಸುಮವಾಗುತ್ತಲೇ ಬಂದಿದೆ. ಈ ಬಾರಿಯಾದರೂ ಒಲಿಯುವುದಾ? ಫಲಿತಾಂಶ ಬಂದ ನಂತರವಷ್ಟೇ ಈ ಚರ್ಚೆಗಳಿಗೆ ಚಾಲನೆ ದೊರೆಯಲಿದೆ.