ಸಿದ್ದರಾಮಯ್ಯ, ಡಿಕೆಶಿ ವಿರುದ್ದ ವರಿಷ್ಠರಿಗೆ ಈ ಒಂದು ಕಾರಣಕ್ಕೆ ಸ್ವಪಕ್ಷೀಯರಿಂದಲೇ ದೂರು?
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಸೊರಗುತ್ತಿರುವುದು ಏಕೆ? ಪ್ರಬಲ ನಾಯಕತ್ವದ ಸಮಸ್ಯೆಯೇ, ಮುಖಂಡರ ನಡುವೆ ಹೊಂದಾಣಿಕೆ ಇಲ್ಲವೇ ಅಥವಾ ಬಿಜೆಪಿಯ ಆಕ್ರಮಣಕಾರಿ ರಾಜಕೀಯವನ್ನು ಎದುರಿಸಲು ಸಾಧ್ಯವಾಗುತ್ತಿಲ್ಲವೇ?
Recommended Video
ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತರಲ್ಲಿ ಕಾಡುತ್ತಿರುವ ಪ್ರಶ್ನೆಯಿದು. ಅದೇನೇ ತಲೆಹೋಗುವ ಕಾರಣವಿರಲಿ, ಪಕ್ಷದ ಸಂಸ್ಥಾಪನಾ ದಿನಾಚರಣೆಯೆಂದೇ ಎಐಸಿಸಿನ ಟಾಪ್ ಟು ಮುಖಂಡರು ಗೈರಾಗುತ್ತಾರೆ ಎಂದರೆ, ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಜಂಘಾಬಲಕ್ಕೇ ಏಟು ಬಿದ್ದಂತೆ.
ಕಾಂಗ್ರೆಸ್ಸಿನ ಹೈಕಮಾಂಡ್ ವಿಚಾರವನ್ನು ಬಿಟ್ಟಾಕೋಣ. ರಾಜ್ಯದ ವಿಚಾರಕ್ಕೆ ಬಂದಾಗ, ಇಲ್ಲೂ, ಆಯಕಟ್ಟಿನ ಮೊದಲ ಪಂಕ್ತಿಯ ಮುಖಂಡರ ನಡುವೆ ಸಮನ್ವಯವಿಲ್ಲವೇ, ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ಭೂತ ಇನ್ನೂ ಕೆಪಿಸಿಸಿಗೆ ಕಾಡುತ್ತಿದೆಯೇ ಎನ್ನುವುದಕ್ಕೆ ಕಾರಣ ಇಲ್ಲದಿಲ್ಲ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ವಿರುದ್ದ, ಸ್ವಪಕ್ಷೀಯರೇ ಹೈಕಮಾಂಡ್ ಗೆ ದೂರು ಸಲ್ಲಿಸಿದ್ದಾರೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಏನು?

ಪಕ್ಷದ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ
ಇತ್ತೀಚೆಗೆ ನಡೆದ ಕೆಪಿಸಿಸಿ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಎರಡೂ ಬಣಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. "ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದನ್ನು ನೋಡೋಣ, ಅದಾದ ಮೇಲೆ, ಮುಖ್ಯಮಂತ್ರಿ ಸಿದ್ದರಾಮಯ್ಯನೋ ಅಥವಾ ಡಿ.ಕೆ.ಶಿವಕುಮಾರೋ ಎನ್ನುವುದನ್ನು ತೀರ್ಮಾನಿಸೋಣ. ನಮ್ಮಲೇ ಈಗಲೇ ಈ ರೀತಿಯ ಗೊಂದಲ ಇರಬೇಕಾದರೆ, ಬಿಜೆಪಿಯನ್ನು ಎದುರಿಸುವುದಾದರೂ ಹೇಗೆ"ಎಂದು ಮುನಿಯಪ್ಪ ಹೇಳಿದ್ದರು.

ಮುಖ್ಯಮಂತ್ರಿ ಯಾರು ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ, ಸಾರ್ವಜನಿಕರ ಮುಂದೆ ಹೇಳುತ್ತಿದ್ದರೂ, ಇಬ್ಬರೂ ತಮ್ಮನ್ನು ತಾವು ಸಿಎಂ ಅಭ್ಯರ್ಥಿ ಎಂದು ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಮುಖಂಡ
ಸುಮಾರು ಒಂದು ತಿಂಗಳ ಹಿಂದೆ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಮುಖಂಡರೊಬ್ಬರು ಸಿದ್ದರಾಮಯ್ಯನವರನ್ನು ನಾವು ಮತ್ತೆ ಸಿಎಂ ಆಗಿ ನೋಡಲು ಬಯಸುತ್ತೇವೆ ಎನ್ನುವ ಬಹಿರಂಗ ಹೇಳಿಕೆಯನ್ನು ನೀಡಿದ್ದರು. ಇದು, ಡಿಕೆಶಿ ಬಣದ ಸಿಟ್ಟಿಗೆ ಕಾರಣವಾಗಿತ್ತು. ಈ ವಿಚಾರ, ಈಗ ಹೈಕಮಾಂಡ್ ಅಂಗಣಕ್ಕೆ ಹೋಗಿದೆ ಎನ್ನುವ ಮಾಹಿತಿಯಿದೆ.

ಸಿದ್ದರಾಮಯ್ಯ, ಡಿಕೆಶಿ ವಿರುದ್ದ ವರಿಷ್ಥರಿಗೆ ಸ್ವಪಕ್ಷೀಯರಿಂದಲೇ ಈ ಒಂದು ಕಾರಣಕ್ಕೆ ದೂರು?
ಹಾಗಾಗಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಪಕ್ಷದ ವರಿಷ್ಠರಿಗೆ ರಾಜ್ಯದ ಕೆಲವು ಮುಖಂಡರೇ ದೂರು ಸಲ್ಲಿಸಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ಆದರೆ, ಸದ್ಯಕ್ಕೆ ಸೊರಗಿದಂತಿರುವ ಕಾಂಗ್ರೆಸ್ ವರಿಷ್ಠರು ಇಬ್ಬರು ನಾಯಕರ ಮೇಲಾಟಕ್ಕೆ ಬ್ರೇಕ್ ಹಾಕಬಲ್ಲರೇ ಎನ್ನುವುದು ಪ್ರಶ್ನೆಯಾಗಿದೆ.












Click it and Unblock the Notifications