ಜೆಡಿಎಸ್ ಮೈತ್ರಿಗೆ ಕಾಂಗ್ರೆಸ್ ಲಿಂಗಾಯತ ನಾಯಕರು ಫುಲ್ ಗರಂ
'ಲಿಂಗಾಯತ' ಎನ್ನುವುದು ಕಾಂಗ್ರೆಸ್ ಪಾಲಿಗೆ ಕೇವಲ ಧರ್ಮವಾಗಿರಲಿಲ್ಲ, ಕೇವಲ ಸಮುದಾಯವಾಗಿರಲಿಲ್ಲ. ಅದು ಮತಬೇಟೆಗಿಳಿದಿದ್ದ ಕಾಂಗ್ರೆಸ್ಸಿಗೆ ಚುನಾವಣಾ ಟ್ರಂಪ್ ಕಾರ್ಡ್ ಆಗಿತ್ತು. ಲಿಂಗಾಯತರೇ ಹೆಚ್ಚಿರುವ ಮುಂಬೈ ಕರ್ನಾಟಕ ಮತ್ತು ಕೇಂದ್ರ ಕರ್ನಾಟಕದಲ್ಲಿ ಧೂಳೊಬ್ಬಿಸುವ ಹುಮ್ಮಸ್ಸಿನಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ಸಿಗೆ 'ಲಿಂಗಾಯತ' ಚಳವಳಿ ಶಾಪವಾಗಿ ಪರಿಣಮಿಸಿದೆ.
ಭಾರೀ ಮಹತ್ವಾಕಾಂಕ್ಷೆಯಿಂದ ಶುರು ಮಾಡಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬಳುವಳಿಯನ್ನು ನೀಡಿಲ್ಲ ಎನ್ನುವುದು ಚುನಾವಣೆ ಫಲಿತಾಂಶದಲ್ಲಿ ಸಾಬೀತಾಗಿದೆ. ಲಿಂಗಾಯತರು ಕೊಟ್ಟ ಹೊಡೆತದಿಂದಾಗಿ 122ರಿಂದ ನೇರವಾಗಿ 78ಕ್ಕೆ ಕಾಂಗ್ರೆಸ್ ಇಳಿದಿದ್ದರೆ, ಬಿಜೆಪಿ 40ರಿಂದ 104ಕ್ಕೆ ತನ್ನ ಸ್ಥಾನಗಳನ್ನು ಏರಿಸಿಕೊಂಡಿದೆ.
ಈ ಸಂಗತಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಕೈಕೊಟ್ಟಿದ್ದು ಮಾತ್ರವಲ್ಲ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರವೂ ಕಾಂಗ್ರೆಸ್ಸಿಗೆ ಭಾರೀ ಹೊಡೆತ ಕೊಡುವ ಲಕ್ಷಣ ತೋರುತ್ತಿದೆ. ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿದ್ದ ವಿನಯ್ ಕುಲಕರ್ಣಿ (ಧಾರವಾಡ ಗ್ರಾಮೀಣ), ಶರಣ ಪ್ರಕಾಶ್ ಪಾಟೀಲ (ಸೇಡಂ) ಮತ್ತು ಬಸವರಾಜ ರಾಯರೆಡ್ಡಿ (ಯಲಬುರ್ಗಾ) ಚುನಾವಣೆಯಲ್ಲಿ ಮಣ್ಣುಮುಕ್ಕಿದ್ದರೆ, ಗೆದ್ದವರು ಕೂಡ ಅಸಮಾಧಾನ ಹೊರಹಾಕುತ್ತಿದ್ದಾರೆ.

ಚಾಮುಂಡೇಶ್ವರಿ ಕದನವನ್ನೇ ತೆಗೆದುಕೊಳ್ಳಿ. ತಮ್ಮ ಹೋರಾಟದ ಫಲವಾಗಿ ಚಾಮುಂಡೇಶ್ವರಿಯಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದವರು ತಮ್ಮ ಪರವಾಗಿ ನಿಂತುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಎಣಿಸಿದ್ದರು. ಆದರೆ, ಒಕ್ಕಲಿಗರ ಮುಖಂಡ, ಜೆಡಿಎಸ್ ನಾಯಕ ಜಿಟಿ ದೇವೇಗೌಡ ಅವರ ವಿರುದ್ಧ 36,042 ಮತಗಳಿಂದ ಸಿದ್ದರಾಮಯ್ಯನವರು ಸೋತು ಮುಖಭಂಗ ಅನುಭವಿಸಿದ್ದಾರೆ.
ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದರಿಂದ ಬಹುತೇಕ ಲಿಂಗಾಯತ ನಾಯಕರು ರೊಚ್ಚಿಗೆದ್ದಿದ್ದಾರೆ. ಒಂದು ಕಡೆ ಶೇ.60ಕ್ಕಿಂತ ಹೆಚ್ಚು ಲಿಂಗಾಯತರು ಬಿಜೆಪಿಗೆ ಮತ ಹಾಕಿದ್ದರೆ, ಮತ್ತೊಂದೆಡೆ ಹಿಂದೆಮುಂದೆ ನೋಡದೆ ಜಾತ್ಯತೀತ ಜನತಾದಳಕ್ಕೆ ಕಾಂಗ್ರೆಸ್ ನಾಯಕರು ಬೆಂಬಲ ನೀಡಿರುವುದು ಅವರ ಭುಗಿಲೇಳುತ್ತಿರುವ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಒಕ್ಕಲಿಗರ ನಾಯಕರಾಗಿರುವ ಎಚ್ ಡಿ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿರುವುದರಿಂದ ಲಿಂಗಾಯತರು ಕಾಂಗ್ರೆಸ್ ಪಕ್ಷದಿಂದ ಮತ್ತಷ್ಟು ದೂರ ಹೋಗುತ್ತಾರೆ ಎಂಬ ಹೆದರಿಕೆ ಮನೆಮಾಡಿದೆ. ಈಗಾಗಲೆ ಆನಂದ್ ಸಿಂಗ್, ರಾಜಶೇಖರ ಪಾಟೀಲ, ನಾಗೇಂದ್ರ ಮತ್ತು ಎಂವೈ ಪಾಟೀಲರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ಲಿಂಗಾಯತರು ಶೇ.17ರಷ್ಟು ಇರುವುದರಿಂದ ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೆಗೆದುಕೊಂಡಿರುವ ಈ ನಿರ್ಣಯ ಮತ್ತಷ್ಟು ಹೊಡೆತ ನೀಡಿದರೂ ಅಚ್ಚರಿಯಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೇ ಕನಿಷ್ಠ 90ರಿಂದ 100 ಸೀಟುಗಳು ಲಿಂಗಾಯತರಿಂದಲೇ ನಿರ್ಣಯವಾಗುತ್ತವೆ. ಹೀಗಿರುವಾಗ ಲಿಂಗಾಯತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಹೇಗೆ?
ಮುಂಬೈ ಕರ್ನಾಟಕ ಭಾಗದಲ್ಲಿ 2013ರಲ್ಲಿ 31 ಸೀಟುಗಳನ್ನು ಗಳಿಸಿದ್ದ ಕಾಂಗ್ರೆಸ್ 2018ರಲ್ಲಿ 17ಕ್ಕೆ ಇಳಿದಿದೆ. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಾತಿ ಸಮೀಕರಣ ಸಂಪೂರ್ಣ ತಪ್ಪಾಗಿದೆ ಎಂದು ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಎತ್ತಿ ತೋರಿಸಿದ್ದಾರೆ. ಚುನಾವಣಾ ಪ್ರಚಾರ ಸಮಯದಲ್ಲಿ ಲಿಂಗಾಯತ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಸ್ತಾಪವನ್ನೇ ಮಾಡಿಲ್ಲ. ಹಿಂದೂ ಸಮುದಾಯವನ್ನು ಒಡೆಯಲೆಂದೇ ಕಾಂಗ್ರೆಸ್ ಹುನ್ನಾರ ನಡೆಸಿದ್ದೆಂದು ತಿಳಿಯಲು ಲಿಂಗಾಯತರಿಗೆ ಹೆಚ್ಚು ಸಮಯ ಬೇಕಾಗಿಲ್ಲ. ಹೀಗಾಗಿಯೇ ತಕ್ಕ ಉತ್ತರ ನೀಡಿದ್ದಾರೆ.












Click it and Unblock the Notifications