ಬಿಜೆಪಿಯಲ್ಲಿ ಹಿರಿಯರಿಗಿಂತ ಕಿರಿಯರಿಗೆ ಮನ್ನಣೆ; ಎಲ್ಲಕ್ಕೂ ಬಿ.ಎಲ್.ಸಂತೋಷ್ ಮಾಸ್ಟರ್ ಮೈಂಡ್?
ಬೆಂಗಳೂರು, ಏಪ್ರಿಲ್. 17: ರಾಜ್ಯ ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ. ಬರೋಬ್ಬರಿ 72 ಹೊಸ ಅಭ್ಯರ್ಥಿಗಳು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಈಗ ಹಿರಿಯರಿಗಿಂತ ಕಿರಿಯರಿಗೆ ಹೈಕಮಾಂಡ್ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ಕಾಣಿಸದಿರುವ ವಿಷಯವೇನಲ್ಲ. ಹಾಗಾದರೆ ಹಿರಿಯ ನಾಯಕರು ಸೈಡ್ ಲೈನ್ ಆಗುತ್ತಿದ್ದಾರೆ...?
ಹೌದು...ರಾಜ್ಯ ರಾಜಕೀಯದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಬಿಜೆಪಿ ಈ ಬಾರಿಯ ಚುನಾವಣೆಯನ್ನು ಪಣವಾಗಿ ಇಡುತ್ತಿದೆ. ಎಲ್ಲಾ ಸಾಂಪ್ರದಾಯಿಕ ನಾಯಕರನ್ನು ಬದಿಗೆ ಸರಿಸಿ, ಹೊಸ ಮುಖಗಳಿಗೆ ಮನ್ನಣೆ ನೀಡಿದೆ. ಇದರಿಂದ ಪಕ್ಷದಲ್ಲಿ ಉಂಟಾಗಿರುವ ಬಂಡಾಯ ಕಡಿಮೆಯೇನಲ್ಲ. ಪ್ರಬಲ ನಾಯಕರನ್ನು ಬಿಜೆಪಿ ಕಳೆದುಕೊಂಡಿದೆ. ಆದರೂ ಬಿಜೆಪಿ ಮಾತ್ರ ಇದಕ್ಕೆ ಜಗ್ಗುತ್ತಿಲ್ಲ.

ಕಳೆದ ಐದಾರು ಬಾರಿಯಿಂದ ಸತತವಾಗಿ ಬಿಜೆಪಿಯಿಂದಲೇ ಆರಿಸಿ ಬರುತ್ತಿರುವ ಹಿರಿಯ ಶಾಸಕರನ್ನು ಬಿಟ್ಟು ಹೊಸಬರನ್ನು ಅಲ್ಲಿಗೆ ಕೂರಿಸಿದೆ. ಇದನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಧಿಕ್ಕರಿಸಿ ಕಮಲ ಬಿಟ್ಟು ಕೈ ಹಿಡಿದಿದ್ದಾರೆ. ಆದರೆ, ಮಾಜಿ ಸಿಎಂ ಕೆ.ಎಸ್ ಈಶ್ವರಪ್ಪ, ಮಾಜಿ ಸಿಎಂ ಯಡಿಯೂರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿನಂತಹ ನಾಯಕರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೇ ಇವರುಗಳ ವಯಸ್ಸು. ವಯಸ್ಸಿನ ಕಾರಣಕ್ಕೆ ಹಲವರನ್ನು ದೂರವಿಟ್ಟರೇ, ಮತ್ತೆ ಕೆಲವರನ್ನು ಕಿರಿಯರಿಗೆ ಅವಕಾಶ ನೀಡಲು ದೂರ ಸರಿಸಲಾಗಿದೆ.
*ಕರುನಾಡಲ್ಲಿ ಗುಜರಾತ್ ಮಾಡಲ್*
ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಗುಜರಾತ್ ಚುನಾವಣಾಮಾಡೆಲ್ ಅನ್ನು ಜಾರಿಗೊಳಿಸಿದೆ. ಕಳೆದ ಗುಜರಾತ್ ಚುನಾವಣೆಯಲ್ಲಿ ಹಿರಿಯ ನಾಯಕರು, ಮಾಜಿ ಸಿಎಂಗಳಿಗೆ ಟಿಕೆಟ್ ನೀಡದೇ ಹೊಸಬರಿಗೆ ಮಣೆ ಹಾಕಲಾಗಿತ್ತು. ಇದು ಯಶಸ್ವಿ ಕೂಡ ಆಗಿತ್ತು. ಬಿಜೆಪಿಗೆ ಹೊಸ ನೀರು ಹರಿದು ಬಂದಂತೆ ಯುವ ನಾಯಕರ ಪಡೆ ನಿರ್ಮಾಣವಾಯಿತು. ಹೊಸ ಅಭ್ಯರ್ಥಿಗಳು ಚುನಾವಣೆಯನ್ನು ಗೆದ್ದು, ವಿಧಾನಸಭೆ ಪ್ರವೇಶಿಸಿದರು. ಇದನ್ನೇ ಕರ್ನಾಟಕದಲ್ಲೂ ಜಾರಿಗೊಳಿಸುತ್ತಿದೆ. ಆದರೆ, ದೊಡ್ಡ ಬಂಡಾಯವನ್ನೇ ಎದುರಿಸುತ್ತಿದೆ.

ಈ ಎಲ್ಲದರ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮಾಸ್ಟರ್ ಮೈಂಡ್ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಗಟ್ಟಿಯಾಗಿಯೇ ಕೇಳಿ ಬರುತ್ತಿವೆ. ರಾಜ್ಯ ರಾಜಕಾರಣದಲ್ಲಿ ಹೊಸಬರಿಗೆ ಅವಕಾಶ ನಿಡಬೇಕು. ವ್ಯಕ್ತಿಗಿಂತ ಪಕ್ಷಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಬೇಕು ಎಂಬ ಅಂಶದಲ್ಲಿ ಬಿ.ಎಲ್ ಸಂತೋಷ್ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹಿರಿಯರನ್ನು ರಾಜಕೀಯದಿಂದ ದೂರವಿಡಲಾಗುತ್ತಿದೆ ಎಂಬ ವದಂತಿಗಳು ಹರಡುತ್ತಿವೆ.
*ಯುವ ನಾಯಕರ ಪಡೆ ಕಟ್ಟಲು ಬಿಜೆಪಿ ಪ್ರಯತ್ನ*
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೆಗೆದುಕೊಳ್ಳುತ್ತಿರುವ ನಿರ್ಧಾರ ಈ ಬಾರಿ ಕೆಲಸ ಮಾಡದೇ ಇರಬಹುದು. ಕಾಂಗ್ರೆಸ್ ಸೇರಿರುವ ಬಿಜೆಪಿಯ ಹಿಎಇಯ, ಪ್ರಭಾವಿ ನಾಯಕರು ಬಿಜೆಪಿಯ ಮತಗಳನ್ನು ಕಾಂಗ್ರೆಸ್ಗೆ ತೆಗೆದುಕೊಂಡು ಹೋಗಬಹುದು. ಆದರೆ, ಭವಿಷ್ಯದಲ್ಲಿ ಬಿಜೆಪಿಯ ಪ್ರಯೋಗಕ್ಕೆ ಜಯ ಸಿಗಬಹುದು. ಹಳಬರನ್ನು ಬಿಟ್ಟು ಹೊಸ ಅಭ್ಯರ್ಥಿ ಪಕ್ಷದಿಂದ ಸ್ವರ್ಧಿಸಿದರೇ ಪಕ್ಷ ಮುಖ್ಯವಾಗುತ್ತದೆ. ಅದೇ ಐದಾರು ಬಾರಿ ಶಾಸಕರಾದವರನ್ನು ಕಣಕ್ಕಿಳಿಸಿದರೇ ಅದು ಅವರ ವ್ಯಕ್ತಿತ್ವದ ಜಯ ಎಂಬ ಹೆಸರು ಬರುತ್ತದೆ. ಇಲ್ಲಿ ಪಕ್ಷ ಗೌಣವಾಗುತ್ತದೆ ಎಂಬುದನ್ನು ಹೈಕಮಾಂಡ್ ಗಮನಿಸಿದೆ. ಈ ಎಲ್ಲಾ ಕಾರಣಕ್ಕೆ ಬಿಜೆಪಿ ಹಿರಿಯರಿಗಿಂತ ಕಿರಿಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ.












Click it and Unblock the Notifications