ಲಿಂಗಾಯತರು, ಒಕ್ಕಲಿಗರು ಹಾಗೂ ದಲಿತ ಸಮುದಾಯದವರೇ ಸಿದ್ದರಾಮಯ್ಯನವರನ್ನ ಸೋಲಿಸುತ್ತಾರೆ: ಈಶ್ವರಪ್ಪ
ಶಿವಮೊಗ್ಗ, ಮಾರ್ಚ್23: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕಾಟವೇ ದೊಡ್ಡ ತಲೆನೋವಾಗಿದೆ. ಇಷ್ಟು ದಿನ ಕೋಲಾರದಲ್ಲಿ ಸ್ಪರ್ಧೆಗೆ ರೆಡಿಯಾಗಿದ್ದ ಸಿದ್ದರಾಮಯ್ಯ ಇದೀಗ ಹೈಕಮಾಂಡ್ ಕೊಟ್ಟ ಸಲಹೆ ಮೇರೆಗೆ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಇನ್ನೂ ಚುನಾವಣಾ ಪ್ರಚಾರದಲ್ಲಿರುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಕ್ಷೇತ್ರ ವಿಚಾರವಾಗಿ ಸಾಕಷ್ಟು ಟೀಕೆ ಟಿಪ್ಪಣಿಗಳು ಮುಂದುವರೆದಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ಕ್ಷೇತ್ರ ಗೊಂದಲ ಕುರಿತು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಗುರುವಾರ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲಿ ಎಲ್ಲಿಂದ ಸ್ಪರ್ಧೆ ಮಾಡಿದರೂ ಅವರ ಪಕ್ಷದವರೇ ಸೋಲಿಸುತ್ತಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಸೋಲಿಸಿದ್ದಕ್ಕೆ ದಲಿತರು ಸಿದ್ದರಾಮಯ್ಯನವರನ್ನು ಸೋಲಿಸುತ್ತಾರೆ. ಲಿಂಗಾಯಿತ ಸಮಾಜವನ್ನು ಒಡೆದಿದ್ದಕ್ಕೆ ಲಿಂಗಾಯಿತರು ಸೋಲಿಸುತ್ತಾರೆ.
ಹಾಗೂ ಒಕ್ಕಲಿಗರು ಕೂಡ ಸಿದ್ದರಾಮಯ್ಯನವರನ್ನು ಸೋಲಿಸುತ್ತಾರೆ ಎಂದು ಹೇಳಿದರು.
ಯಾವುದೇ ರಾಜಕಾರಣಿ ಸ್ವಕ್ಷೇತ್ರದಲ್ಲಿ ಸೋತರೂ ಅಲ್ಲೇ ಸ್ಪರ್ಧೆ ಮಾಡಿದರೆ ಜನರು ನಂಬುತ್ತಾರೆ. 224 ಕ್ಷೇತ್ರದಲ್ಲಿ ಬಿಜೆಪಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ ಎಂದು ಕಾಯುತ್ತಿದೆ, ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕು ನನಗೆ ಅವರನ್ನು ಸೋಲಿಸಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು. ಬಾದಾಮಿಯಿಂದ ಹಿಡಿದು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ನಿಗದಿ ಆಗದಿರುವುದು ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ. ಇಲ್ಲಿವರೆಗೂ ಪಕ್ಷದ ಹೈಕಮಾಂಡ್ ತೀರ್ಮಾನಿಸಿದವರು ನಿನ್ನೆ ತಮ್ಮ ಪತ್ನಿ, ಮಗ ತೀರ್ಮಾನ ಕೇಳುತ್ತೇನೆ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿಗೆ ಒಂದೇ ಒಂದು ಕ್ಷೇತ್ರ ಕೂಡ ಸಿಕ್ಕಿಲ್ಲ. ಬೇರೆ ಯಾರೋ ಒಂದು ಕ್ಷೇತ್ರ ಕೊಟ್ಟು ಗೆಲ್ಲಿಸುತ್ತಾರೆ ಎಂಬುವುದು ಪ್ರಶ್ನಾರ್ಥಕ ಚಿನ್ಹೆಯಾಗಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ನನ್ನನ್ನು ಸಿಎಂ ಮಾಡಿ ಎಂದು ಒಕ್ಕಲಿಗ ಸಮಾಜವನ್ನು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಮೀರಿ ಇಡೀ ದೇಶವೇ ತನ್ನದೇ ಕೆಲಸ ಮಾಡುವ ಮೋದಿ ನೇತೃತ್ವದ ಬಿಜೆಪಿಗೆ ರಾಜ್ಯದ ಜನ ಆಶೀರ್ವಾದ ಮಾಡುತ್ತಾರೆ. ರಾಷ್ಟ್ರೀಯವಾದಿಗಳಾದ ಬಿಜೆಪಿಯವರು ಕೋಮುವಾದಿಗಳು ಎಂದು ಟೀಕೆ ಮಾಡಿದ್ದಾರೆ. ಹಾಗಾಗಿ ನಾವು ಜಾತಿ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು.
ಸಿದ್ದರಾಮಯ್ಯ ತುದಿ-ಬುಡ ಇಲ್ಲದ ಬಸ್ ಪ್ರಯಾಣ ಆರಂಭಿಸಿದ್ದಾರೆ. ಚಾಮುಂಡೇಶ್ವರಿ ಬಾದಾಮಿ, ಬಾದಾಮಿಯಿಂದ ಕೋಲಾರ, ಕೋಲಾರದಿಂದ ವರುಣಾ ಹೀಗೆ ಹೋಗುತ್ತಿದ್ದಾರೆ. ಕ್ಷೇತ್ರ ಸಿಗದೇ ಸಿಎಂ ಆಗಿದ್ದ ಸಿದ್ದರಾಮಯ್ಯಗೆ ದಿಕ್ಕೇ ತೋಚದ ಹಾಗೆ ಆಗಿದೆ. ಬಸ್ ಯಾತ್ರೆ ಯಾವಾಗ ನಿಲ್ಲಿಸುತ್ತಿರಾ? ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿರಾ ಎಂದು ಸಿದ್ದರಾಮಯ್ಯ ಅವರನ್ನ ಈಶ್ವರಪ್ಪ ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿಯ ಐತಿಹಾಸಿಕ ಮಹಾ ಸಂಗಮ ದಾವಣಗೆರೆಯಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಮಹಾಸಂಗಮದಲ್ಲಿ ಪಾಲ್ಗೊಳ್ಳಲಿದ್ದಾರೆ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿರೀಕ್ಷೆ ಗೆ ಮೀರಿ ಯಶಸ್ವಿಯಾಗಿದೆ. ಐತಿಹಾಸಿಕ ಮಹಾಸಂಕಲ್ಪ ಸಮಾವೇಶದಲ್ಲಿ 10 ಲಕ್ಷ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇಷ್ಟು ದೊಡ್ಡ ಸಮಾವೇಶ ಯಾವುದೇ ರಾಜಕೀಯ ಪಕ್ಷ ಮಾಡಿಲ್ಲ. ಬಿಜೆಪಿಯೇ ಮುಂದೆ ಅಧಿಕಾರಕ್ಕೆ ಬರಲಿದೆ ಎಂಬುದು ಈ ಸಮಾವೇಶದಿಂದ ಸ್ಪಷ್ಟತೆ ಸಿಗಲಿದೆ ಎಂದರು.
ಆಯನೂರು ಮಂಜುನಾಥ್ ಫ್ಲೆಕ್ಸ್ ವಿಚಾರವನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಮಾತನಾಡುತ್ತಾರೆ. ಎದುರಾಳಿ ಬಗ್ಗೆ ಗಮನ ಇಟ್ಟುಕೊಂಡಿರುವ ರಾಜಕಾರಣಿ, ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ. ಕೇಂದ್ರ ಮತ್ತು ರಾಜ್ಯದ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನು ರಾಜಕೀಯದಲ್ಲಿ ಜನರ ಕೆಲಸವನ್ನು ಮನಸ್ಸು ತೃಪ್ತಿ ಆಗುವಂತೆ ಮಾಡಿದ್ದೇನೆ ಎಂದರು.












Click it and Unblock the Notifications