Breaking; ಬಿ. ಶ್ರೀರಾಮುಲು ರೆಡ್ಡಿ ಪಕ್ಷ ಸೇರುವುದು ಯಾವಾಗ?
ಬೆಂಗಳೂರು, ಡಿಸೆಂಬರ್ 26; ಮಾಜಿ ಸಚಿವ ಜನಾರ್ದನ ರೆಡ್ಡಿ 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಹೊಸ ಪಕ್ಷಕ್ಕೆ ಬಿಜೆಪಿಯ ಯಾವ ನಾಯಕರು ಹೋಗುತ್ತಾರೆ? ಎಂಬ ಚರ್ಚೆ ಆರಂಭವಾಗಿದೆ.
ಕರ್ನಾಟಕದ ಪ್ರತಿಪಕ್ಷ ಕಾಂಗ್ರೆಸ್ ಈ ಕುರಿತು ಟ್ವೀಟ್ ಮಾಡಿದೆ. ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ಜನಾರ್ದನ ರೆಡ್ಡಿ ಅವರ ಪಕ್ಷವನ್ನು ಸೇರುವುದು ಯಾವಾಗ? ಎಂದು ಪ್ರಶ್ನೆ ಮಾಡಿದೆ.
ಹೊಸ ಪಕ್ಷ ಘೋಷಣೆ, ಜನಾರ್ದನ ರೆಡ್ಡಿ ಭೇಟಿಯಾದ ಬಿಜೆಪಿ ನಾಯಕ!
ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ, 'ಗೆಳೆಯನ ಅಸಮಾಧಾನವನ್ನು ಹೈಕಮಾಂಡ್ ಜೊತೆ ಮಾತಾಡಿ ನ್ಯಾಯ ಒದಗಿಸುತ್ತೇನೆ ಎಂದಿದ್ದ ತಾವು ವಿಫಲರಾದಿರಾ ಅಥವಾ ಅಧಿಕಾರದ ರುಚಿ ಕಂಡಮೇಲೆ ರಾಜಕೀಯ ಜೀವನ ರೂಪಿಸಿಕೊಟ್ಟ ಗೆಳೆಯನನ್ನೇ ಮರೆತಿರಾ ಬಿ. ಶ್ರೀರಾಮುಲು ಅವರೇ?. ಜನಾರ್ದನ ರೆಡ್ಡಿಯವರ ಹೊಸ ಪಕ್ಷಕ್ಕೆ ಶ್ರೀರಾಮುಲು ಹೋಗುವುದು ಯಾವಾಗ?. ಸ್ನೇಹ ಮುಖ್ಯವೋ ಅಧಿಕಾರ ಮುಖ್ಯವೋ?' ಎಂದು ಕಾಂಗ್ರೆಸ್ ಕೇಳಿದೆ.
Breaking; ಜನಾರ್ದನ ರೆಡ್ಡಿ ಸ್ಪರ್ಧೆ ಮಾಡುವ ಕ್ಷೇತ್ರ ಘೋಷಣೆ!
ಬಿ. ಶ್ರೀರಾಮುಲು ಪ್ರತಿಕ್ರಿಯೆ; ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾತನಾಡಿದ್ದ ಬಿ. ಶ್ರೀರಾಮುಲು, "ಜನಾರ್ದನ ರೆಡ್ಡಿ ಬುದ್ಧಿವಂತರು. ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಘೋಷಣೆ ಮಾಡಿರುವ ಹೊಸ ಪಕ್ಷ ಒಳ್ಳೆಯದೋ ಕೆಟ್ಟದ್ದೋ ಎಂಬುದನ್ನು ನಾನು ವಿಮರ್ಶೆ ಮಾಡಲು ಹೋಗಲ್ಲ" ಎಂದು ಹೇಳಿದ್ದರು.
Janardhana Reddy; ಹೊಸ ಪಕ್ಷ ಘೋಷಣೆ, ಪತ್ರಿಕಾಗೋಷ್ಠಿ highlights
"ರಾಜಕಾರಣ ಮತ್ತು ಸ್ನೇಹ ಬೇರೆ. ಸ್ನೇಹಿತರಾಗಿ ನಾವು ಮುಂದುವರೆಯುತ್ತೇವೆ. ನನ್ನ ಪ್ರಾಣ ಸ್ನೇಹಿತ ರೆಡ್ಡಿ ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದರು. ಅವರಿಗೂ ಪಕ್ಷ ಶಕ್ತಿಯಾಗಿ ನಿಂತಿತ್ತು" ಎಂದು ತಿಳಿಸಿದ್ದರು.
ಜನಾರ್ದನ ರೆಡ್ಡಿ ಭಾನುವಾರ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. "ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ. ನಾನು ಮುಂದಿನ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ" ಎಂದು ಹೇಳಿದ್ದರು.
ಮಾಜಿ ಸಚಿವ ಜನಾರ್ದನ ರೆಡ್ಡಿ, "ಮುಂದಿನ 15 ದಿನದೊಳಗೆ ಪಕ್ಷದ ಲಾಂಛನ ಬಿಡುಗಡೆ ಮಾಡುತ್ತೇನೆ. ಪಕ್ಷದ ಕಚೇರಿ ಉದ್ಘಾಟನೆ ಮಾಡುತ್ತೇನೆ. ಪತ್ನಿಯೂ ನನ್ನ ಜೊತೆ ಇರುತ್ತಾರೆ, ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳಲಿದ್ದಾರೆ" ಎಂದು ಏಕಾಂಗಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಹಲವಾರು ಬಿಜೆಪಿ ನಾಯಕರು ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಈ ಕುರಿತು ಪ್ರಶ್ನೆ ಮಾಡಿದ್ದವು. ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ ಎಂದಾಗ, "ಮಾಡಲಿ ಅದರ ಬಗ್ಗೆ ನೋ ಕಮೆಂಟ್" ಎಂದು ಹೇಳಿದ್ದರು.