ತಮ್ಮ ತಪ್ಪನ್ನು ಮುಚ್ಚಿಡಲು ಸಿಎಂ ಬಿಎಸ್ವೈ ವಿರುದ್ದ ದೂರು ಕೊಟ್ಟರೇ ಈಶ್ವರಪ್ಪ
ತಮ್ಮ ಹಳೆಯ ಮಿತ್ರ, ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಗ್ರಾಮೀಣಾಭಿವೃದ್ದಿ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ದೂರದ ಹೈಕಮಾಂಡ್ ಗೆ ಮತ್ತು ರಾಜ್ಯಪಾಲರಿಗೆ ದೂರು ನೀಡಲು ಅಸಲಿ ಕಾರಣ ಏನು ಎನ್ನುವುದೀಗ ಬಿಜೆಪಿಯಲ್ಲಿ ಚರ್ಚೆಯ ವಿಷಯವಾಗಿದೆ.
ರಮೇಶ್ ಜಾರಕಿಹೊಳಿ ಪ್ರಕರಣದಿಂದ ಜರ್ಝರಿತವಾಗಿರುವ ಪಕ್ಷದ ಇಮೇಜಿಗೆ ಈಶ್ವರಪ್ಪ ನೀಡಿದ ದೂರು ಇನ್ನಷ್ಟು ಕಳಂಕ ತಂದಿತೇ ಎನ್ನುವುದಿಲ್ಲಿ ಪ್ರಶ್ನೆ. ಈಶ್ವರಪ್ಪನವರು ಇಟ್ಟ ಈ ಹೆಜ್ಜೆಗೆ ರಾಜ್ಯದ ಉಸ್ತುವಾರಿ ಕೂಡಾ ಬೇಸರ ವ್ಯಕ್ತ ಪಡಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಈಶ್ವರಪ್ಪ ಪತ್ರ
ಈಶ್ವರಪ್ಪ ಇದ್ದಕ್ಕಿದ್ದಂತೆಯೇ ಯಡಿಯೂರಪ್ಪನವರ ವಿರುದ್ದ ರೆಬೆಲ್ ಆಗುವುದು ಇದೇನು ಹೊಸದಲ್ಲ. ಈ ಹಿಂದೆ, ಹಲವು ಬಾರಿ ಈ ರೀತಿಯ ವಿದ್ಯಮಾನಗಳು ನಡೆದಿದ್ದವು. ರಾಯಣ್ಣ ಬ್ರಿಗೇಡ್ ಕಟ್ಟಿದ್ದು, ಮೊನ್ನೆಮೊನ್ನೆ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದು ಇತ್ಯಾದಿ..
ಹಸ್ತಕ್ಷೇಪ ವಿಷಯವಾಗಿ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು: ಸಚಿವ ಈಶ್ವರಪ್ಪ ಹೇಳಿದ್ದೇನು?
ಆದರೆ, ತಮ್ಮದೇ ಪಕ್ಷದ ಮುಖ್ಯಮಂತ್ರಿ ವಿರುದ್ದ ಸಂಪುಟದ ಸದಸ್ಯರೊಬ್ಬರು ರಾಜ್ಯಪಾಲರಿಗೆ ದೂರು ನೀಡಿರುವುದು ಗಂಭೀರ ವಿಚಾರವೇ ಸರಿ. ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮತ್ತು ಅನುದಾನದ ವಿಚಾರವೇ ಈಶ್ವರಪ್ಪನವರು ದೂರು ನೀಡಲು ಕಾರಣವೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂದು ಅವಲೋಕಿಸಿದಾಗ, ವಿಚಾರ ಇನ್ನೊಂದು ಮಗ್ಗಲಿಗೂ ಉರುಳುತ್ತದೆ.
ಈಶ್ವರಪ್ಪ ದೂರು ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ
ಈಶ್ವರಪ್ಪ ದೂರು ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ, ಮುಖ್ಯಮಂತ್ರಿಗಳು ಇದಕ್ಕೆ ಇದುವರೆಗೆ ಪ್ರತಿಕ್ರಿಯೆ ನೀಡಲಿಲ್ಲ. ರಾಜ್ಯಪಾಲರಿಗೆ ದೂರು ನೀಡಿದ ಪ್ರತಿಯನ್ನು ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಈಶ್ವರಪ್ಪ ಕಳುಹಿಸಿದ್ದಾರೆ. ಆ ಮೂಲಕ, ಪಕ್ಷದೊಳಗೆ ಇನ್ನೊಂದು ಸುತ್ತಿನ ಬಿಕ್ಕಟ್ಟಿಗೆ ಇದು ನಾಂದಿ ಹಾಡಿದಂತಾಗಿದೆ.
ಈಶ್ವರಪ್ಪ ಕಾರ್ಯವೈಖರಿಯ ಬಗ್ಗೆ ದೂರು
ಏಕಾಏಕಿ ಈಶ್ವರಪ್ಪನವರು ಸಿಎಂ ವಿರುದ್ದ ದೂರು ನೀಡಲು ಕಾರಣವೇನು ಎಂದಾಗ, ಇತ್ತೀಚೆಗೆ ಹಲವು ಶಾಸಕರು ಯಡಿಯೂರಪ್ಪನವರನ್ನು ಭೇಟಿಯಾಗಿದ್ದು. ಸುಮಾರು ಅರವತ್ತು ಶಾಸಕರು ಬಿಎಸ್ವೈ ಭೇಟಿಯಾಗಿ ಅವರ ವಿರುದ್ದ ಮತ್ತು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯವೈಖರಿ ಬಗ್ಗೆ ದೂರು ನೀಡಿದ್ದರು.
ಸಿಎಂ ಬಿಎಸ್ವೈ ಭೇಟಿಯಾಗಿದ್ದ ಅರವತ್ತು ಶಾಸಕರು
ಸಿಎಂ ಬಿಎಸ್ವೈ ಭೇಟಿಯಾಗಿದ್ದ ಅರವತ್ತು ಶಾಸಕರು, ನಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ನಮ್ಮ ಮಾತಿಗೆ ಮನ್ನಣೆ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ನಮಗೆ ಇದು ಸಮಸ್ಯೆಯಾಗುತ್ತಿದೆ. ನೀವೇ ನೇರವಾಗಿ ಮಧ್ಯಪ್ರವೇಶಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
ತಪ್ಪನ್ನು ಮುಚ್ಚಿಡಲು ಬಿಎಸ್ವೈ ವಿರುದ್ದ ದೂರು ಕೊಟ್ಟರೇ ಈಶ್ವರಪ್ಪ
ಈ ಬೆಳವಣಿಗೆ ನಡೆದ ಮರುದಿನವೇ ಈಶ್ವರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಬಿಎಸ್ವೈ ವಿರುದ್ದ ಪತ್ರ ಬರೆದಿದ್ದರು ಎಂದು ಹೇಳಲಾಗುತ್ತಿದೆ. ಬಿಜೆಪಿಯ ಒಂದು ಮೂಲಗಳ ಪ್ರಕಾರ, ಅರವತ್ತು ಶಾಸಕರು ಒತ್ತಡ ಹೇರಿದ್ದರಿಂದ ಸಿಎಂ ಇಲಾಖೆಯಲ್ಲಿ ಮಧ್ಯಪ್ರವೇಶಿಸಿದರು. ಈಶ್ವರಪ್ಪನವರು ಶಾಸಕರ ಮನವಿಗೆ ಸ್ಪಂದಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಅದನ್ನು ಬಿಟ್ಟು, ಸಿಎಂ ವಿರುದ್ದ ದೂರು ನೀಡುವುದು ಎಷ್ಟು ಸರಿ ಎನ್ನುವ ಮಾತೂ ಕೇಳಿಬರುತ್ತಿದೆ.
Recommended Video
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ