Jagadish Shettar: ಧಾರವಾಡ, ಹಾವೇರಿ ಎಲ್ಲೂ ಸಿಗಲಿಲ್ಲ ಟಿಕೆಟ್; ಜಗದೀಶ್ ಶೆಟ್ಟರ್ ರಾಜಕೀಯ ಜೀವನ ಅಂತ್ಯ!?
ಬೆಂಗಳೂರು, ಮಾರ್ಚ್ 14: ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಪ್ರಕಟಿಸಿದ್ದು, ರಾಜ್ಯದ 20 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದಲ್ಲೇ ಭಿನ್ನಮತ, ಅಸಮಾಧಾನದ ಹೊಗೆಯಾಡುತ್ತಿದೆ. ಇದರ ಜೊತೆಗೆ ಕೆಲ ರಾಜಕೀಯ ನಾಯಕರ ವೃತ್ತಿಜೀವನ ಅಂತ್ಯವಾಗುವ ಲಕ್ಷಣಗಳಿವೆ. ಅದರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಒಬ್ಬರು.
ಹೌದು.. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸೇರಿ ಎಂಎಲ್ಸಿ ಆಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮರಳಿ ಗೂಡಿಗೆ ಬಂದಿದ್ದಾರೆ. ಕಾಂಗ್ರೆಸ್ಗೆ ಗುಡ್ಬೈ ಹೇಳಿ ರಾಷ್ಟ್ರರಾಜಕಾರಣ ಪ್ರವೇಶಿಸುವ ಹಂಬಲ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧಾರವಾಡ ಹಾಗೂ ಹಾವೇರಿಯಿಂದ ಬಿಜೆಪಿ ಟಿಕೆಟ್ ಕೈ ತಪ್ಪಿ ಹತಾಶರಾಗಿದ್ದಾರೆ.

ಜಗದೀಶ್ ಶೆಟ್ಟರ್ ಅವರಿಗೆ ಈಗ ಇರುವುದು ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲಿನ ಭರವಸೆ ಮಾತ್ರ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಅದು ಸಿಗುವುದು ಅಸಂಭವ ಎನಿಸುತ್ತಿದೆ. ಬಿಜೆಪಿಯ ಮೂಲಗಳ ಪ್ರಕಾರ, ಜಗದೀಶ್ ಶೆಟ್ಟರ್ ಅವರನ್ನು ಲೋಕಸಭಾ ಚುನಾವಣೆಗೆ ಪರಿಗಣಿಸದಿರುವುದು ಅವರ ಚುನಾವಣಾ ರಾಜಕೀಯದ ಅಂತ್ಯವನ್ನು ಸೂಚಿಸುತ್ತದೆ ಎನ್ನುತ್ತವೆ.
''ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ಪಕ್ಷ ಒಲವು ತೋರಿದ್ದರೆ ಬುಧವಾರ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ಅವರ ಹೆಸರು ಇರುತ್ತಿತ್ತು. ಆದರೆ, ಚಿಕ್ಕೋಡಿಯಿಂದ ಲಿಂಗಾಯತ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಕಣಕ್ಕಿಳಿಸಿರುವುದರಿಂದ ಬೆಳಗಾವಿಯಲ್ಲಿ ಒಬಿಸಿ ಅಥವಾ ಕುರುಬ ಸಮುದಾಯದ ಜನರೊಂದಿಗೆ ಸಂಪರ್ಕ ಹೊಂದಿರುವ ಪ್ರಬಲ ಅಭ್ಯರ್ಥಿಯನ್ನು ಬಿಜೆಪಿ ವರಿಷ್ಠರು ಹುಡುಕುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಜಿ ಮುಖ್ಯಮಂತ್ರಿಗೆ ನೋವುಂಟು ಮಾಡಬಾರದು. ಈಗಾಗಲೇ ಪಕ್ಷವು ಅವರಿಗೆ ಎಲ್ಲಾ ಸ್ಥಾನಗಳನ್ನು ಮತ್ತು ಸರ್ಕಾರವನ್ನು ನೀಡಿಎಂದು ಪಕ್ಷದ ನಾಯಕ ಮತ್ತು ಮಾಜಿ ಸಚಿವ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ ನಂತರ ಲೋಕಸಭೆ ಚುನಾವಣೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಹಾವೇರಿ ಅಥವಾ ಧಾರವಾಡದಿಂದ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಬಿಜೆಪಿಯ ಒಂದು ವರ್ಗದ ಹಿರಿಯರು ಅವರ ಜೊತೆಗೆ ನಿಂತಿದ್ದರು.

ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಹೊಂದಿದ್ದು, ಅಲ್ಲಿನ ಜನ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದರು. ಆದರೆ, ಕಳೆದ 15 ದಿನಗಳಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ 'ಗೋ ಬ್ಯಾಕ್ ಶೆಟ್ಟರ್' ಅಭಿಯಾನದಿಂದಾಗಿ ಅವರ ನಿರೀಕ್ಷೆ ಹುಸಿಯಾಗತೊಡಗಿತ್ತು.
"ರಾಜಕೀಯವಾಗಿ ಮತ್ತೆ ಮೇಲೆಳಲು ಬಯಸುತ್ತಿರುವ ಜಗದೀಶ್ ಶೆಟ್ಟರ್ ಅವರಿಗೆ ಹಾವೇರಿ ಸುರಕ್ಷಿತ ಸ್ಥಾನವಾಗುತ್ತಿತ್ತು. ಅವಿಭಜಿತ ಧಾರವಾಡ ಜಿಲ್ಲೆಗೆ ಹೋಲಿಸಿದರೆ ಬೆಳಗಾವಿಯ ರಾಜಕೀಯ ಸಂಪೂರ್ಣ ಭಿನ್ನವಾಗಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ಗೆ ಹೆಚ್ಚಿನ ಬೆಂಬಲ ಇಲ್ಲದಿರುವುದರಿಂದ ಮತ ಪಡೆಯುವುದು ಕಷ್ಟ. ಮಾಜಿ ಸಿಎಂಗೆ ಟಿಕೆಟ್ ಸಿಕ್ಕರೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತರುವ ಮತಗಳ ಮೇಲೆ ಇಲ್ಲಿ ಜಗದೀಶ್ ಶೆಟ್ಟರ್ ಭವಿಷ್ಯ ನಿಂತಿದೆ" ಎಂದು ಹಿರಿಯ ರಾಜಕೀಯ ವೀಕ್ಷಕರನ್ನು ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿದೆ.
ಜಗದೀಶ್ ಶೆಟ್ಟರ್ ಅವರು ಧಾರವಾಡಕ್ಕೆ ಸಮೀಪವಿರುವ ಗದಗ ಮತ್ತು ಹಾವೇರಿಯಲ್ಲಿ ಜನಪ್ರಿಯ ಲಿಂಗಾಯತ ನಾಯಕರಾಗಿದ್ದಾರೆ. ಹಾಗಾಗಿ ಅಲ್ಲಿ ಅವರು ಉತ್ತಮ ಪೈಪೋಟಿ ನೀಡುವ ಅವಕಾಶಗಳು ಹೆಚ್ಚಾಗಿದ್ದವು. ಆದರೆ, ಎರಡೂ ಕ್ಷೇತ್ರಗಳಿಂದ ಅವರಿಗೆ ಟಿಕೆಟ್ ಘೋಷಣೆ ಮಾಡದೇ ಅವರ ರಾಜಕೀಯ ಜೀವನ ಅಂತ್ಯ ಮಾಡಲು ಬಿಜೆಪಿ ಹೊರಟಿದೆ ಎನ್ನುತ್ತಾರೆ ಅವರ ಬೆಂಬಲಿಗರು.












Click it and Unblock the Notifications