ಲೋಕ ಸಮರಕ್ಕೆ ದಳಪತಿಗಳ ಮಾಸ್ಟರ್ ಪ್ಲಾನ್! ಪ್ರಜ್ವಲ್, ನಿಖಿಲ್, ಭವಾನಿಗೂ ಇಲ್ಲ ಟಿಕೆಟ್ !? ಏನಿದು ದಳಪತಿಗಳ ಲೆಕ್ಕಾಚಾರ!?
ಬೆಂಗಳೂರು, ಜೂನ್ 23: 2024 ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲುವ ತಂತ್ರಗಾರಿಕೆಯನ್ನ ನಡೆಸಿದ್ದು, ಹೀನಾಯವಾಗಿ ಸೋತ ಬಿಜೆಪಿಯೂ ಲೋಕಸಮರಕ್ಕೆ ಎಚ್ಚೆತ್ತುಕೊಂಡಿದೆ.
ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕುಟುಂಬ ರಾಜಕಾರಣದ ಕಳಂಕ ಮುಕ್ತಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ.

ಹೌದು, 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯಾಗಲಿದೆ ಎಂಬ ಚಿಂತನೆ ನಡೆದಿದ್ದು, ಇತ್ತ ಈ ಬಾರಿಯ ಲೋಕಸಭಾ ಚುನಾವಣೆಗೆ ಗೌಡರ ಕುಟುಂಬದಿಂದ ಯಾರ ಸ್ಪರ್ಧೆಯೂ ಮಾಡಲ್ಲ ಎಂದು ಮಾಜಿ ಮುಖ್ಯಮಂನತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಕುಟುಂಬ ರಾಜಕಾರಣದ ಕಳಂಕದ ಹಣೆ ಪಟ್ಟಿಯನ್ನ ಹೊತ್ತುಕೊಂಡಿರುವ ಜೆಡಿಎಸ್ ನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದಿರಲು ಚಿಂತನೆ ನಡೆಸಿದ್ದು, ಕಠಿಣ ನಿರ್ಧಾರಕ್ಕೆ ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಬಾರೀ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಹೊಸ ಸೂತ್ರ ವರ್ಕೌಟ್ ಆಗುತ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದ್ದು, ಹಲವು ವರ್ಷಗಳಿಂದ ಇರುವ ಕುಟುಂಬ ರಾಜಕಾರಣ ದ ಹಣೆಪಟ್ಟಿ ಕಳಚಿಕೊಳ್ಳಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ.

ಇನ್ನೂ ಕುಮಾರಸ್ವಾಮಿ ಅವರ ಈ ನಿರ್ಧಾರದಿಂದ ದೇವೇಗೌಡರ ಕುಟುಂಬ ದಲ್ಲಿ ಸಂಚಲನ ಸೃಷ್ಟಿಯಾಗಲಿದೆ. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನ ಟಿಕೆಟ್ ವಿಚಾರವಾಗಿ ರೇವಣ್ಣ ಹಾಗೂ ಕುಮಾರಸ್ವಾಮಿ ನಡುವೆ ಪೈಪೋಟಿ ಏರ್ಪಟ್ಟಿದ್ದು, ಮತ್ತೆ ಅದೇ ಸಂಘರ್ಷ ಕುಮಾರಸ್ವಾಮಿ ಅವರ ನಿರ್ಧಾರದಿಂದ ಎದುರಾಗಲಿದೆ. ಲೋಕಸಭಾ ಚುನಾವಣೆಗೆ ಗೌಡರ ಕುಟುಂಬ ದಿಂದ ಯಾರೂ ನಿಲ್ಲುವುದಿಲ್ಲ ಎಂಬ ನಿರ್ಧಾರಕ್ಕೆ ಕುಮಾರಸ್ವಾಮಿ ಮುಂದಾಗಿದ್ದು, ಇದರ ನೇರ ಪರಿಣಾಯ ಹಾಸನ ಕ್ಷೇತ್ರದ ಮೇಲೆ ಆಗಲಿದೆ.
ಮೊದಲ ಬಾರಿಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಗೆಲುವು ಸಾಧಿಸಿದ್ದ ಪ್ರಜ್ವಲ್ ರೇವಣ್ಣ ಸಂಸದರಾಗಿ ತಮ್ಮ ಅವಧಿಯನ್ನ ಮುಗಿಸಿದ್ದು, ಲೋಕಸಭಾ ಚುನಾವಣೆಯ ತಯಾರಿಯನ್ನ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಈ ನಿರ್ಧಾರದಿಂದ ಪ್ರಜ್ವಲ್ ರೇವಣ್ಣ ಅವರ ಮುಂದಿನ ರಾಜಕೀಯ ಭವಿಷ್ಯ ಏನು ಎನ್ನುವ ಪ್ರಶ್ನೆ ಉದ್ಭವಿಸಿದೆ. ಇತ್ತ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ್ದ ಭವಾನಿ ರೇವಣ್ಣ ಅವರು ಸಹ ಚುನಾವಣಾ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಪ್ರಜ್ವಲ್, ನಿಖಿಲ್ ಸೇರಿದಂತೆ ಯಾರೂ ಕೂಡಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋದು ಬೇಡ ಎಂದು ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಹಾಸನ ಟಿಕೆಟ್ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಭವಾನಿಗೆ ಮುಂದೆ ಸೂಕ್ತ ಸ್ಥಾನ ನೀಡುವ ಭರವಸೆ ನೀಡಿ ಸ್ವರೂಪ್ ಗೆ ಟಿಕೆಟ್ ನೀಡಲಾಗಿತ್ತು. ವಿಧಾನ ಪರಿಷತ್ ಅಥವಾ ಲೋಕಸಭೆಗೆ ಭವಾನಿಗೆ ಅವಕಾಶ ನೀಡುವ ಚರ್ಚೆ ಗಳು ಆಗ ಹುಟ್ಟಿಕೊಂಡಿದ್ದವು. ಆದರೆ ಈ ಎಲ್ಲಾ ಲೆಕ್ಕಾಚಾರಗಳು ಇದೀಗ ಉಲ್ಟಾ ಆಗಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಂದುಕೊಂಡಷ್ಟು ಸ್ಥಾನ ಪಡೆಯಲಿಲ್ಲ. ಇದೀಗ ಲೋಕಸಭಾ ಚುನಾವಣೆಗೆ ಕುಮಾರಸ್ವಾಮಿ ಹೊಸ ಸೂತ್ರ ಮತ್ತೆ ಸಂಚಲನ ಮೂಡಿಸುವ ಸಾಧ್ಯತೆ ಇದೆ.
ಹಾಸನದಲ್ಲಿ ಜೆಡಿಎಸ್ ನದ್ದೇ ಪ್ರಾಬಲ್ಯ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸಂಸದರಾಗಿದ್ದ ಕ್ಚೇತ್ರ, ಈ ಹಿಂದೆ ಮೊಮ್ಮಗ ಪ್ರಜ್ವಲ್ ಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ದೇವೇಗೌಡರು. ಇದೀಗ ಕುಮಾರಸ್ವಾಮಿ ನಿರ್ಧಾರದಿಂದ ಪ್ರಜ್ವಲ್ ರಾಜಕೀಯ ಭವಿಷ್ಯ ಮಂಕಾಗಲಿದೆ. ಇತ್ತ ಲೋಕಸಭಾ ಚುನಾವಣೆಯಲ್ಲಿ ಭವಾನಿ ರೇವಣ್ಣ ಕೂಡಾ ಸ್ಪರ್ಧೆ ಮಾಡುವಂತಿಲ್ಲ. ಅತ್ತ ರಾಮನಗರದಲ್ಲಿ ಸೋತ ನಿಖಿಲ್ ಕೂಡಾ ಲೋಕಸಭೆಗೆ ಸ್ಪರ್ಧೆ ಮಾಡುವಂತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೇವೇಗೌಡರು ಕೂಡಾ ಸ್ಪರ್ಧೆ ಮಾಡಲ್ಲ. ಹಾಗಾದ್ರೆ ನಿಖಿಲ್, ಪ್ರಜ್ವಲ್, ಭವಾನಿ ಮುಂದಿನ ಭವಿಷ್ಯ ದ ಕಥೆ ಏನು ಎನ್ನುವ ಚರ್ಚೆ ಹುಟ್ಟಿಕೊಂಡಿದೆ.
ಇನ್ನೂ ಈ ಮಹತ್ವದ ನಿರ್ಧಾರದ ಬಗ್ಗೆ ಶೀಘ್ರದಲ್ಲೇ ಕಾರ್ಯಕರ್ತರ ಜೊತೆ ಸಭೆ ನಡೆಸಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮುಂದಾಗಲಿದ್ದು, ಈ ವಿಚಾರವಾಗಿ ದೇವೇಗೌಡರ ಜೊತೆಗೂ ಚರ್ಚೆ ಮಾಡಿ ಮನವೊಲಿಸಲಿರುವ ಕುಮಾರಸ್ವಾಮಿ ತಿರ್ಮಾನಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications