ಅಳಿಯನ ಆತ್ಮಹತ್ಯೆಗೂ ಮುನ್ನ ಮಾಜಿ ಸಚಿವ ಬಿಸಿ ಪಾಟೀಲ್ ಪೊಲೀಸರಿಗೆ ಹೇಳಿದ್ದೇನು?
ಮಾಜಿ ಸಚಿವ ಬಿಸಿ ಪಾಟೀಲ್ ಅವರ ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಬಿಸಿ ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯಾ ಪಾಟೀಲ್ ಅವರ ಪತಿ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಡೆದಿದೆ. ವಿಷವನ್ನು ಸೇವಿಸಿ ಬಿಸಿ ಪಾಟೀಲ್ ಅವರ ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಕ್ಷಣ ಪ್ರತಾಪ್ ಅವರನ್ನು ಶಿವಮೊಗ್ಗಾದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿ ಪಾಟೀಲ್ ಅವರ ಅಳಿಯ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಬಿಸಿ ಪಾಟೀಲ್ ಹೇಳಿದ್ದೇನು?
ತಮ್ಮ ಮಗಳ ಪತಿ ಆತ್ಮ ಹತ್ಯೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾಗಿದ್ದ ಮಾಜಿ ಸಚಿವ ಬಿಸಿ ಪಾಟೀಲ್, ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು. ಅಲ್ಲದೆ ಕೂಡಲೇ ಅಳಿಯನನ್ನು ಪತ್ತೆ ಹಚ್ಚವಂತೆ ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿಕೊಂಡರು. ಕೊಂಚ ಸಮಯದ ಬಳಿಕ ಶಿವಮೊಗ್ಗ ಪೊಲೀಸರು ಬಿಸಿ ಪಾಟೀಲ್ ಅಳಿಯನ ಕಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಟ್ರೇಸ್ ಮಾಡಿದ್ದಾರೆ.
ರಸ್ತೆಯ ಮಧ್ಯದಲ್ಲಿ ಸಾವು
ಜೋಳಕ್ಕೆ ಹಾಕುವ ಔಷಧ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಮುಂದಾಗಿದ್ದ ಪ್ರತಾಪ್ ಕುಮಾರ್ ಅವರನ್ನು ದಾವಣಗೆರೆ ಶಿಫ್ಟ್ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಶಿವಮೊಗ್ಗ ಹತ್ತಿರವಾಗುವುದರಿಂದ ಅಲ್ಲಿಗೆ ಶಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಲ್ಲದೆ ಶಿಕಾರಿಪುರ ಹತ್ತರಿ ಬರುವಾಗಲೇ ಪ್ರತಾಪ್ ಕುಮಾರ್ ಜೀವ ಹೋಗಿತ್ತು ಎಂದು ಅಧಿಕಾರಿಗಳು ತಿಳಿಸಿದರು ಎಂದು ಮಾಜಿ ಸಚಿವ ಬಿಸಿ ಪಾಟೀಲ್ ತಿಳಿಸಿದ್ದಾರೆ.

ಮಕ್ಕಳ ವಿಚಾರದಲ್ಲಿ ಅವರಿಗೆ ಕೊರಗಿತ್ತು. ಡಿ ಅಡಿಕ್ಷನ್ ಸೆಂಟರ್ನಲ್ಲಿ ಎರಡು ತಿಂಗಳೂ ಸಹ ಇದ್ದರು. ಆಗ ಅವರು ಸರಿ ಹೋಗಿದ್ದರು. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೆ ನೋಡಿಕೊಳ್ಳುತ್ತಿದ್ದರು. 16 ವರ್ಷಗಳ ಹಿಂದೆ ಮದುವೆ ಆಗಿದೆ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.
ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯ್ತು. ನಾಳೆ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮಾಜಿ ಸಚಿವರು ತಿಳಿಸಿದ್ದಾರೆ.












Click it and Unblock the Notifications