ಗ್ಯಾರಂಟಿ ಸರ್ಕಾರದ ವಿರುದ್ದ ವಿಪಕ್ಷಗಳ ಬತ್ತಳಿಕೆಯಲ್ಲಿರುವ ಅಸ್ತ್ರಗಳೇನು? ಸಿಎಂ ವಿರುದ್ದ ಮುಗಿಬಿಳಲು ಕಮಲ-ದಳ ಪ್ಲಾನ್!
ಬೆಂಗಳೂರು, ಜುಲೈ03: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಗೆಲುವಿಗೆ ಕಾರಣವಾಗಿದ್ದ ಗ್ಯಾರಂಟಿ ಯೋಜನೆಗಳ ಜಾರಿಯೇ ದೊಡ್ಡ ಸವಾಲಾಗಿದ್ದು, ಇಂದಿನಿಂದ (ಸೋಮವಾರ) ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು,ಸರ್ಕಾರದ ವಿರುದ್ದ ಪ್ರತಿಪಕ್ಷಗಳ ಜಟಾಪಟಿಗೆ ವೇದಿಕೆ ಸಿದ್ಧವಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಲವು ವಿವಾದಿತ ವಿಧೇಯಕಗಳನ್ನು ಹಿಂಪಡೆಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಹಾಗೂ ಗ್ಯಾರಂಟಿ ಅನುಷ್ಠಾನದಲ್ಲಿನ ಗೊಂದಲ ಮತ್ತು ಷರತ್ತುಗಳ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಹಾಗೂ ಜೆಡಿಎಸ್ ಹಲವು ಅಸ್ತ್ರಗಳನ್ನ ಪ್ರಯೋಗಿಸಲು ಪ್ಲಾನ್ ಹಾಕಿಕೊಂಡಿವೆ.

ಸೋಮವಾರದಂದು ಉಭಯ ಸದನವನ್ನು ಉದ್ದೇಶಿಸಿ ರಾಜ್ಯರಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಿದ್ದು, ಸಂತಾಪ ಸೂಚನೆಯ ಬಳಿಕ ಸಭೆ ಮುಂದೂಡಲ್ಪಡುತ್ತಾರೆ. ಆದರೆ ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ. ಗ್ಯಾರಂಟಿ ಘೋಷಣೆಯಲ್ಲಾಗುತ್ತಿರುವ ಗೊಂದಲ ಹಾಗೂ ವರ್ಗಾವಣೆ ದಂಧೆ ಆರೋಪ ಸೇರಿದಂತೆ ಹತ್ತು ಹಲವು ಅಸ್ತ್ರಗಳನ್ನ ವಿಪಕ್ಷಗಳು ಬತ್ತಳಿಕೆಯಲ್ಲಿಟ್ಟುಕೊಂಡಿದ್ದು, ಹಲವು ತಂತ್ರಗಳಿಗೆ ಮುಂದಾಗಲಿವೆ.
ಇನ್ನೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಕುರಿತು ಈಗಾಗಲೇ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗುತ್ತದೆ. ಆದರೆ ಮಸೂದೆ ಮಂಡನೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಲಿದೆ. ಈ ಕುರಿತು ಬಿಜೆಪಿ ನಾಯಕರು ಈಗಾಗಲೇ ನಿರ್ಧಾರವನ್ನು ಕೈಗೊಂಡಿದ್ದಾರೆ.
ಇನ್ನೂ ಕಾಂಗ್ರಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಗಳಲ್ಲಿ ಒಂದಾಗಿರುವ ಐದು ಗ್ಯಾರಂಟಿ ಘೋಷಣೆಗಳ ಪೈಕಿ ಶಕ್ತಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಜಾರಿಗೊಂಡಿದೆ. ಇನ್ನು ಆಗಸ್ಟ್ ತಿಂಗಳಿಂದ ಗೃಹ ಜ್ಯೋತಿ ಕೂಡಾ ಜಾರಿಗೊಳ್ಳಲಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆ ಇನ್ನೂ ಜಾರಿಗೊಂಡಿಲ್ಲ. ಈ ನಡುವೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಇತ್ತ ಗ್ಯಾರಂಟಿ ಘೋಷಣೆಗಳು ಜಾರಿಯಾಗುವ ಕುರಿತು ಬಿಜೆಪಿ ಸದನದ ಹೊರಗು ಹಾಗೂ ಒಳಗು ಆಡಳಿತ ಸರ್ಕಾರದ ವಿರುದ್ದ ಧರಣಿ ನಡೆಸಲು ಸಜ್ಜಾಗಿದೆ.
ಇನ್ನೂ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಯ ಆರಂಭದಿಂದಲೂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಈ ಬಾರಿಯ ಸದನಕ್ಕೆ ಸಜ್ಜಾಗಿದ್ದು, ಜೆಡಿಎಸ್ ಕೂಡಾ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಜೆಡಿಎಸ್ ವರ್ಗಾವಣೆ ದಂಧೆ ವಿರುದ್ದ ಪ್ರಶ್ನಿಸಿದ್ದು, ಸಿಎಂ ಕಚೇರಿಯಲ್ಲೇ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಈ ಮೂಲಕ ಸದನದಲ್ಲಿ ವರ್ಗಾವಣೆ ದಂಧೆ ಆರೋಪದ ಬಗ್ಗೆ ಪ್ರಸ್ತಾಪ ಮಾಡಲು ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ.
ಇತ್ತ ಕಾಂಗ್ರೆಸ್ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಹಾಗೂ ಬಿಜೆಪಿ ಹಲವು ತಂತ್ರಗಾರಿಕೆ ನಡೆಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಆರೋಪಗಳಿಗೆ ಸಿದ್ದರಾಮಯ್ಯ ಹೇಗೆ ಉತ್ತರ ನೀಡಲಿದ್ದಾರೆ ಎಂಬುವುದು ಕಾದುನೋಡಬೇಕಿದೆ.












Click it and Unblock the Notifications