ಸಂಕಷ್ಟಕ್ಕೆ ಸಿಲುಕಿದ ತೆಂಗು ಬೆಳೆಗಾರರು: ಕೊಬ್ಬರಿ ಬೆಂಬಲ ಬೆಲೆ ಘೋಷಿಸಿದ ಸಿದ್ದರಾಮಯ್ಯ- ಎಷ್ಟು ಗೊತ್ತಾ?
ಬೆಂಗಳೂರು, ಜನವರಿ 22: ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಹೆಚ್ಚಳ ಮಾಡಿ ಆದೇಶಿಸಿತ್ತು. ಆದರೆ ಇದುವರೆಗೆ ಯಾವುದೇ ಘೋಷಣೆ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 12000 ರೂ.ಗಳೊಂದಿಗೆ 1500 ರೂ. ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಒಟ್ಟು ನಮ್ಮ ಸರ್ಕಾರದಿಂದ ಕ್ವಿಂಟಾಲಿಗೆ 1500 ರೂ.ಗಳನ್ನು ಒದಗಿಸಲಾಗುವುದು. 3000 ರೂ.ಗಳಿಗೆ ಬೇಡಿಕೆ ಇದ್ದರೂ ಸರ್ಕಾರದ ತನ್ನ ಶಕ್ತ್ಯಾನುಸಾರ ಬೆಂಬಲ ಬೆಲೆ ನೀಡುತ್ತಿದ್ದು, ಎಂ.ಎಸ್.ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದರು. ಕೇಂದ್ರ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ರಾಜ್ಯ ಸರ್ಕಾರ ಕೊಬ್ಬರಿ ಬೆಳೆಗಾರರಿಗೆ 1500 ಹೆಚ್ಚಾಗಿ ನೀಡಲಿದೆ ಎಂದು ಹೇಳಿದರು.

ಹಿಂದಿನ ಸರ್ಕಾರ ಜನವರಿ 21 ನ್ನು ದಾಸೋಹ ದಿನ ಎಂದು ಆಚರಿಸಲು ಘೋಷಣೆ ಮಾಡಿದ್ದರ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಯಾವಾಗ ಮಾಡಿದರು, ಯಾವ ಸಂದರ್ಭದಲ್ಲಿ ಹಾಗೂ ಯಾಕಾಗಿ ಮಾಡಿದರು ಎಂದು ನನಗೆ ತಿಳಿದಿಲ್ಲ , ವಿಚಾರ ಮಾಡಲಾಗುವುದು ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಾಗುತ್ತಿದ್ದು ಮುಜರಾಯಿ ಇಲಾಖೆ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ ದೇವಸ್ಥಾನವನ್ನು ಉದ್ಘಾಟಿಸುತ್ತಿರುವುದಾಗಿ ತಿಳಿಸಿದರು.
ತಮಿಳುನಾಡಿನಲ್ಲಿ ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ನೆರಪ್ರಸಾರವನ್ನು ನಿಷೇಧ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ತಮಿಳುನಾಡಿನ ಬಗ್ಗೆ ನಾನು ಯಾಕೆ ಮಾತನಾಡಲಿ. ಇಲ್ಲಿ ಹಾಗೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಟಿಪ್ಪು ಸುಲ್ತಾನರ ಕಾಲದ ಕುಣಿಗಲ್ ಸ್ಟಡ್ ಫಾರಂನ್ನು ಸರ್ಕಾರ ಮುಚ್ಚುತ್ತಿದೆ ಎಂಬ ವಿಚಾರವಾಗಿ ಮಾತನಾಡಿ, ಬೆಂಗಳೂರಿನ ಹೃದಯ ಭಾಗದಲ್ಲಿ ರೇಸ್ ಕೋರ್ಸ್ ಇದ್ದು, ಅಲ್ಲಿಗೆ ಸ್ಥಳಾಂತರ ಮಾಡಿ ಎಂದು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು. ಕುಣಿಗಲ್ ನಲ್ಲಿ 400 ಏಕರೆಯಷ್ಟು ಜಮೀನು ಇದ್ದು, ಇಲ್ಲಿ 80 ಏಕರೆ ಯಷ್ಟಿದೆ. ಅಲ್ಲಿ ಸ್ಥಳ ನೀಡುವುದಾಗಿ ಹೇಳಿದ್ದೇನೆ ಎಂದರು.












Click it and Unblock the Notifications