14 ಶಾಸಕರ ಅನರ್ಹತೆ : ಎಚ್. ವಿಶ್ವನಾಥ್ ಹೇಳಿದ್ದೇನು?
ಬೆಂಗಳೂರು, ಜುಲೈ 28 : ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ 14 ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. "ಇದು ಅವಸರದ ತೀರ್ಮಾನ" ಎಂದು ಎಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದರು.
ಭಾನುವಾರ ಕರ್ನಾಟಕ ವಿಧಾನಸಭೆ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿದರು. 11 ಕಾಂಗ್ರೆಸ್ ಶಾಸಕರು ಮತ್ತು 3 ಜೆಡಿಎಸ್ ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಿ ಆದೇಶ ಹೊರಡಿಸಿದರು.
ಗುರುವಾರ ರಮೇಶ್ ಕುಮಾರ್ ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ, ಆರ್. ಶಂಕರ್ರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈಗ ಉಳಿದ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಸದನದಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ.
ಕಾಂಗ್ರೆಸ್ನ ಶ್ರೀಮಂತ ಪಾಟೀಲ್ (ಕಾಗವಾಡ), ಪ್ರತಾಪಗೌಡ ಪಾಟೀಲ್ (ಮಸ್ಕಿ), ಬಿ. ಸಿ. ಪಾಟೀಲ್ (ಹಿರೇಕೆರೂರು), ಶಿವರಾಮ್ ಹೆಬ್ಬಾರ್ (ಯಲ್ಲಾಪುರ), ಎಸ್. ಟಿ. ಸೋಮಶೇಖರ್ (ಯಶವಂತಪುರ), ಬೈರತಿ ಬಸವರಾಜು (ಕೆ. ಆರ್. ಪುರ), ಆನಂದ್ ಸಿಂಗ್ (ವಿಜಯನಗರ), ಆರ್.ರೋಷನ್ ಬೇಗ್ (ಶಿವಾಜಿನಗರ), ಮುನಿರತ್ನ (ರಾಜರಾಜೇಶ್ವರಿ ನಗರ), ಕೆ. ಸುಧಾಕರ್ (ಚಿಕ್ಕಬಳ್ಳಾಪುರ), ಎಂ.ಟಿ.ಬಿ. ನಾಗರಾಜ್ (ಹೊಸಕೋಟೆ) ಅನರ್ಹಗೊಳಿಸಿ ಆದೇಶ ನೀಡಿದರು.
ಜೆಡಿಎಸ್ ಪಕ್ಷ ನೀಡಿದ್ದ ದೂರಿನ ಅನ್ವಯ ಎಚ್. ವಿಶ್ವನಾಥ್ (ಹುಣಸೂರು), ಕೆ. ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ನಾರಾಯಣ ಗೌಡ (ಕೆ. ಆರ್. ಪೇಟೆ) ಅವರನ್ನು ಅನರ್ಹಗೊಳಿಸಿದರು.

ಪ್ರತಿವಾದಿಗಳ ಮನವಿ ಪರಿಗಣಿಸಿಲ್ಲ
"ಸ್ಪೀಕರ್ ರಮೇಶ್ ಕುಮಾರ್ ಕೇವಲ ಸಿದ್ದರಾಮಯ್ಯ, ಕುಮಾರಸ್ವಾಮಿ ದೂರನ್ನು ಮಾತ್ರ ಪರಿಗಣಿಸಿದ್ದಾರೆ. ಪ್ರತಿವಾದಿಗಳ ಮನವಿಯನ್ನು ಪರಿಗಣನೆ ಮಾಡಿಲ್ಲ. ಯಾವ-ಯಾವ ಸಂದರ್ಭದಲ್ಲಿ ಏನಾಯಿತು, ಮೈತ್ರಿ ಸರ್ಕಾರ ಹೇಗೆ ನಡೆದುಕೊಂಡಿತ್ತು ಎಂಬುದನ್ನು ಜನ ಗಮನಿಸಿದ್ದಾರೆ. ನಮ್ಮ ರಾಜೀನಾಮೆ ವಿಚಾರವನ್ನು ಸ್ಪೀಕರ್ ಗಮನಿಸಿಲ್ಲ," ಎಂದು ಎಚ್. ವಿಶ್ವನಾಥ್ ದೂರಿದರು.

ಇದು ಹುಡುಗಾಟದ ವಿಚಾರವಲ್ಲ
"ಸ್ಪೀಕರ್ ರಮೇಶ್ ಕುಮಾರ್ ಅವಸರದ ತೀರ್ಮಾನ ಕೈಗೊಂಡಿದ್ದಾರೆ. ನಮ್ಮ ರಾಜೀನಾಮೆ ಕುರಿತು ಯಾವ ಚರ್ಚೆ ಮಾಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಸಂಸಾರ ಸರ್ಕಾರ ನೋಡಿ ರಾಜೀನಾಮೆ ನೀಡಿದ್ದೆವು. ಮೂರು ಸಚಿವರು ರಾಜೀನಾಮೆ ನೀಡಿರುವುದು ಹುಡುಗಾಟದ ವಿಷಯವಲ್ಲ" ಎಂದು ವಿಶ್ವನಾಥ್ ಹೇಳಿದರು.

ಎಚ್. ಕೆ. ಪಾಟೀಲ್ ಮೇಲೆ ಏಕೆ ಕ್ರಮವಿಲ್ಲ
"ಎಚ್. ಕೆ. ಪಾಟೀಲ್ ಜಿಂದಾಲ್ ವಿಚಾರದಲ್ಲಿ ಸರ್ಕಾರದ ವಿರುದ್ದ ಬಹಿರಂಗ ಪತ್ರ ಬರೆದಿದ್ದರು. ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ನನಗೆ ಕಾನೂನಿನ ಅರಿವಿದೆ. ಸರ್ಕಾರದ ನಡವಳಿಕೆಗೆ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದರು. ಅದನ್ನು ಏಕೆ ಪರಿಗಣಿಸಿಲ್ಲ?" ಎಂದು ಎಚ್. ವಿಶ್ವನಾಥ್ ಪ್ರಶ್ನಿಸಿದರು.

ಕ್ಷೇತ್ರದ ಜನರ ಕ್ಷಮೆ ಕೇಳುತ್ತೇವೆ
"ನಾವೆಲ್ಲ ಶಾಸಕರು ಕಾನೂನು ಹೋರಾಟ ಮಾಡಿ ಗೆಲ್ಲುತ್ತೇವೆ. ಕ್ಷೇತ್ರದ ಜನರಲ್ಲಿ ಕ್ಷಮೆ ಯಾಚಿಸುತ್ತೇವೆ. ನಾವು ಹಣ ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಹೇಸಿಗೆ ಸರ್ಕಾರದ ದುರಾಡಳಿತದ ವಿರುದ್ದ ರಾಜೀನಾಮೆ ನೀಡಿದ್ದೇವೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಮನವಿ ಮಾಡಿದರು.

ತುರ್ತು ತೀರ್ಮಾನದ ಅಗತ್ಯವೇನಿತ್ತು?
"ಸರ್ಕಾರಿ ರಜಾ ದಿನವನ್ನೂ ಲೆಕ್ಕಿಸದೆ ಸ್ಪೀಕರ್ ನಮ್ಮೆಲ್ಲರ ಅನರ್ಹತೆ ಆದೇಶ ಮಾಡಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ. ಇದು ಅವಸರದ ತೀರ್ಮಾನ. ಕೇವಲ ಅನರ್ಹತೆ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಇಂತಹ ತುರ್ತ ನಿರ್ಧಾರದ ಅಗತ್ಯವೇನಿತ್ತು?" ಎಂದು ಪ್ರಶ್ನಿಸಿದರು.












Click it and Unblock the Notifications