21ದಿನದಲ್ಲಿ ಪೊಲೀಸ್ ದಾಖಲೆ ಪರಿಶೀಲನೆ: ಡಿಜಿಪಿ ಪ್ರವೀಣ್ ಸೂದ್
ಬೆಂಗಳೂರು, ಅಕ್ಟೋಬರ್ 04: ಕಳೆದು ಹೋದ ದಾಖಲೆಗಳ ಬಗ್ಗೆ ಪ್ರತಿಕ್ರಿಯೆ ಮತ್ತು ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ವಿಳಂಬ ಕುರಿತು ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಇನ್ನುಮುಂದೆ 21ದಿನದಲ್ಲಿ ಎಲ್ಲ ದಾಖಲೆ ಪರಿಶೀಲಿಸುವುದಾಗಿ ಡಿಜಿಪಿ ಭರವಸೆ ನೀಡಿದ್ದಾರೆ.
ಹೌದು, ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಭರವಸೆ ನೀಡಿದ್ದಾರೆ. ಕಳೆದು ಹೋಗಿರುವ ದಾಖಲೆಗಳ ಬಗ್ಗೆ ಪರಿಶೀಲಿಸಿದಾಗ ಆ ಬಗ್ಗೆ ಪೊಲೀಸರಿಂದ ಪ್ರತಿಕ್ರಿಯೆ ಬರುತ್ತಿಲ್ಲ. ಅಲ್ಲದೇ ಪಾಸ್ಪೋರ್ಟ್ ಮಾಡಿಸುವ ವೇಳೆ ದಾಖಲೆ, ಇತ್ಯಾದಿ ಪರಿಶೀಲನೆ ವಿಳಂಬವಾಗುತ್ತಿದೆ. ಹೀಗೆಂದು ಪದೇ ಪದೆ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಇನ್ನು ಮುಂದೆ ದಾಖಲೆ ಪರಿಶೀಲನೆ ಪ್ರಕ್ರಿಯೆ ಬಹುಬೇಗ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಕುರಿತು ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಅರ್ಜಿ ಸಲ್ಲಿಕೆಯಾಗುವ 21 ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿವೆ. ಒಂದು ವೇಳೆ 21ದಿನದಲ್ಲಿ ಅರ್ಜಿ ದಾರರಿಗೆ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೆ, ಅರ್ಜಿದಾರರು ಮೌಖಿಕವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಲು ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿ ಪೊಲೀಸ್ ಪರಿಶೀಲನೆ ತ್ವರಿತ ಗತಿಯಲ್ಲಿ ಮುಗಿಸಲು ಕ್ರಮ ಕೈಗೊಳ್ಳುತ್ತೇವೆ. ಕಾನೂನು ತೊಡಕು ಇರುವುಗಳನ್ನು ಬಿಟ್ಟು ಉಳಿದ ಪಾಸ್ಪೋರ್ಟ್ ಪೊಲೀಸ್ ಪರಿಶೀಲನೆ ಪ್ರಕ್ರಿಯೆನ್ನು ನಾವು ಸುಮಾರು 7 ದಿನಗಳಲ್ಲಿ ಮುಗಿಸುತ್ತೇವೆ. ಈ ಬಗ್ಗೆ ನೀವು 21 ದಿನಗಳೊಳಗೆ ಉತ್ತರವನ್ನು ಸ್ವೀಕರಿಸುತ್ತೀರಿ ಎಂದು ಹೇಳಿದರು.
ಇ-ಲಾಸ್ಟ್ ಅಪ್ಲಿಕೇಶನ್ ಮೂಲಕವೇ ದೂರು ಸಲ್ಲಿಸಿ
ಮುಂದಿನ ದಿನಗಳಲ್ಲಿ ರಾಜ್ಯದ ಜನರು ಕಾಣೆಯಾದ ದಾಖಲೆಗಳ ಬಗ್ಗೆ ದೂರನ್ನು ನೀಡಲು ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡುವ ಅಗತ್ಯವಿಲ್ಲ. ಇಂತಹ ದೂರುಗಳನ್ನು ಇ-ಲಾಸ್ಟ್ ಅಪ್ಲಿಕೇಶನ್ ಮೂಲಕವೇ ಆನ್ಲೈನ್ ಮೂಲಕ ದೂರು ತೆಗೆದುಕೊಳ್ಳುತ್ತೇವೆ. ಇದರಿಂದ ಠಾಣೆಗೆ ಭೇಟಿ ನೀಡುವುದು ತಪ್ಪಲಿದೆ. ಪೊಲೀಸರು ದೂರನ್ನು ಸ್ವೀಕರಿಸಲು ಮತ್ತು ಡಿಜಿಟಲ್ ಸಹಿಯೊಂದಿಗೆ ಸ್ವೀಕೃತಿಯನ್ನು ದೂರುದಾರರಿಗೆ ನೀಡುತ್ತಾರೆ. ಅದಕ್ಕಾಗಿ ಇರುವ ಮೊಬೈಲ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಅನೇಕ ಸಂಸ್ಥೆಗಳು ಪೊಲೀಸ್ ಸ್ವೀಕೃತಿಯನ್ನು ಪಡೆದ ನಂತರವೇ ನಕಲಿ ದಾಖಲೆಗಳನ್ನು ಸಲ್ಲಿಸುವುದರಿಂದ ಇದು ಜಗಳವಿಲ್ಲದೇ ಪ್ರಕರಣದ ಇತ್ಯರ್ಥಕ್ಕೆ ನೆರವಾಗುತ್ತದೆ. ದಾಖಲೆಗಳ ಪರಿಶೀಲನೆಯಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನರು ರಾಜ್ಯದ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬೇಕಾದ ಕಿರಿಕಿರಿಯು ತಪ್ಪಲಿದೆ ಎಂದರು. ಅಲ್ಲದೇ ಇತ್ತೀಚೆಗೆ ಪೊಲೀಸ್ ಇಲಾಖೆಯಿಂದ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.












Click it and Unblock the Notifications