3-4 ತಲೆಮಾರಿಗೆ ಆಗುವಷ್ಟು ಸಂಪಾದಿಸಿದ್ದೇವೆ , ಈಗ ಋಣ ತೀರಿಸಬೇಕಿದೆ : ರಮೇಶ್ ಕುಮಾರ್
ಬೆಂಗಳೂರು ಜುಲೈ 21: "ಗಾಂಧಿ ಕುಟುಂಬವು ಸುಮಾರು ಏಳು ದಶಕ ಭಾರತವನ್ನು ಆಳಿದೆ. 3-4 ತಲೆಮಾರುಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡಿರುವ ನಾವೆಲ್ಲರೂ ಈಗ ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇದನ್ನು ವಿರೋಧಿಸಿ ಗುರುವಾರ ಬೆಂಗಳೂರಿನಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ರಮೇಶ್ ಕುಮಾರ್ ಮಾತನಾಡಿದರು.
"ಕಾಂಗ್ರೆಸ್ ಸುಮಾರು 70 ವರ್ಷ ದೇಶ ಆಳಿದೆ. ಕಾಂಗ್ರೆಸ್ನವರೇ ಆದ ನಾವೆಲ್ಲರೂ ಮುಂದಿನ ಮೂರ್ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಆಸ್ತಿ, ಹಣ ಗಳಿಸಿದ್ದೇವೆ. ಅಧಿಕಾರ ಅನುಭವಿಸಿದ್ದೇವೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರತ್ರಿಕೆ ಖರೀದಿ ಅವ್ಯವಹಾರ ಮತ್ತು ಹಣ ವರ್ಗಾವಣೆ ಆರೋಪ ಮೇಲೆ ವಿಚಾರಣೆ ನಡೆಯುತ್ತಿದೆ. ದೇಶ ಉಳಿಯಲು, ಕಾಂಗ್ರೆಸ್ ಉಳಿಸಲು ನಾವೆಲ್ಲರೂ ಒಟ್ಟಾಗಿ ಸೋನಿಯಾ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡಬೇಕು" ಎಂದು ಮನವಿ ಮಾಡಿದರು.
"ಗಾಂಧಿ ಕುಟುಂಬದ ಋಣ ತೀರಿಸದೇ ಹೋದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ. ಪಕ್ಷ ಕುಟುಂಬ ಇದ್ದಂತೆ, ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ಮನಸ್ತಾಪಗಳೆಲ್ಲವು ಸಹಜ. ಅವೆಲ್ಲವುಗಳನ್ನು ಬದಿಗೊತ್ತಿ ನಾವೆಲ್ಲರು ಒಂದಾಗಬೇಕು. ಸಂಕಷ್ಟದಲ್ಲಿರುವ ಸೋನಿಯಾ ಅವರೊಂದಿಗೆ ನಿಲ್ಲಬೇಕು. ಆಗ ಮಾತ್ರ ನಾವು ತಿನ್ನುವ ಎರಡು ಹೊತ್ತಿನ ಊಟಕ್ಕೆ ಸಾರ್ಥಕ ಬರುತ್ತದೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

Recommended Video
ಸೋನಿಯಾ ಗಾಂಧಿಯ ಇಡಿ ವಿಚಾರಣೆ ವಿರೋಧಿಸಿ ಕರ್ನಾಟಕದ ಬೆಂಗಳೂರು, ಕೇರಳ, ದೆಹಲಿ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ನಾಯಕರು ಪ್ರತಿಭಟಿಸುತ್ತಿದ್ದಾರೆ. ಕೆಪಿಸಿಸಿ ಕರೆಯ ಮೇರೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಬಟನೆಯಲ್ಲಿಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದಾರೆ.












Click it and Unblock the Notifications