ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ 53 ಅಡಿಗೆ ಏರಿಕೆ
ಬೆಂಗಳೂರು, ಸೆಪ್ಟೆಂಬರ್ 11 : ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ 53 ಅಡಿ ತಲುಪಿದೆ. ಈ ಜಲಾಶಯ 74 ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.
In Pics:ಬೆಂಗಳೂರನ್ನೇ ಹೊಳೆಯನ್ನಾಗಿ ಮಾಡಿದ ಕಂಡರಿಯದಂಥ ಮಳೆ!
ಅರ್ಕಾವತಿ, ಕುಮದ್ವತಿ ನದಿಗಳ ಸಂಗಮ ಪ್ರದೇಶವಾದ ಮಾಗಡಿಯಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯವಿದೆ. ಅಕ್ಟೋಬರ್ ಅಥವ ನವೆಂಬರ್ ತಿಂಗಳಿನಲ್ಲಿ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿತ್ತು. ಆದರೆ, ಈ ಬಾರಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಸೆಪ್ಟೆಂಬರ್ನಲ್ಲಿಯೇ ಏರಿಕೆಯಾಗಿದೆ.
ದೇವನಹಳ್ಳಿ, ದೊಡ್ಡಬಳ್ಳಾಪುರ, ಮಾಗಡಿ, ನೆಲಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶ ತಿಪ್ಪಗೊಂಡನಹಳ್ಳಿ ಜಲಾಶಯವ ವ್ಯಾಪ್ತಿಗೆ ಬರುತ್ತದೆ. ಈ ಬಾರಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಆದ್ದರಿಂದ, ನೀರಿನ ಮಟ್ಟ 53.10 ಅಡಿ ಗಳಿಗೆ ಏರಿಕೆಯಾಗಿದೆ.
ಜಲಾಶಯ 74 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಾವೇರಿ ಮೊದಲನೇ ಹಂತದ ಯೋಜನೆ ಅನುಷ್ಠಾನ ವಾಗುವ ತನಕ ಬೆಂಗಳೂರು ನಗರದ ವಿವಿಧ ಭಾಗಗಳಿಗೆ ಕುಡಿಯುವ ನೀರನ್ನು ಇಲ್ಲಿಂದ ಪೂರೈಕೆ ಮಾಡಲಾಗುತ್ತಿತ್ತು. 2012ರ ಬಳಿಕ ಜಲಾಶಯದಿಂದ ನಗರಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ.
1992ರಲ್ಲಿ ಜಲಾಶಯ ತುಂಬಿತ್ತು. 1997-98ರಲ್ಲಿ ನೀರಿನ ಮಟ್ಟ 71 ಅಡಿಗೆ ತಲುಪಿತ್ತು. ಜಲಾಶಯ ಭರ್ತಿಯಾದರೆ ನೀರನ್ನು ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಿ, ಅಲ್ಲಿಂದ ತಾವರೆಕೆರೆ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ಆದರೆ, ಜಲಾಶಯದಲ್ಲಿ ಮಾಲಿನ ವಾಗಿದ್ದು, ಅದನ್ನು ಸ್ವಚ್ಛಗೊಳಿಸಲು ಸರ್ಕಾರ ಮುಂದಾಗಿದೆ.
ದುನಿಯಾ ವಿಜಯ್ ಅಭಿನಯದ 'ಮಾಸ್ತಿಗುಡಿ' ಚಿತ್ರದ ಚಿತ್ರೀಕರಣದ ವೇಳೆ ಜಲಾಶಯದಲ್ಲಿ ದುರಂತ ನಡೆದಿತ್ತು. ಸಹ ನಟರಾದ ಅನಿಲ್ ಮತ್ತು ಉದಯ್ ಹೆಲಿಕಾಪ್ಟರ್ ಮೇಲಿಂದ ಜಲಾಶಯಕ್ಕೆ ಹಾರುವ ಸನ್ನಿವೇಶ ಚಿತ್ರೀಕರಿಸುವಾಗ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.