ನೀರು ನೀಲಿ ಬಂಗಾರಕ್ಕೆ ಸಮಾನ: ರೈತರಿಗೆ ಸಿಹಿಸುದ್ದಿ ಕೊಟ್ಟ ಡಿ.ಕೆ.ಶಿವಕುಮಾರ್
ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರೈತರಿಗೆ ನೀರಾವರಿ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರು ರಚಿಸಿರುವ "ನೀರಿನ ಹೆಜ್ಜೆ" ಕೃತಿಯ ಲೋಕಾರ್ಪಣೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಿತು. ಈ ವೇಳೆ ಅವರು ರಾಜ್ಯದ ನೀರಾವರಿ ವಿಚಾರವಾಗಿ ಮಹತ್ವದ ಮಾಹಿತಿ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ನನಗೆ ಸಿಕ್ಕ ಈ ಅವಧಿಯಲ್ಲಿ ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ, ರೈತನ ಬದುಕನ್ನು ಹಸನುಗೊಳಿಸುವುದೇ ನನ್ನ ಗುರಿ ಎಂದಿದ್ದಾರೆ.
ನಾನು ರಚಿಸಿದ "ನೀರಿನ ಹೆಜ್ಜೆ" ಕೃತಿಯಲ್ಲಿ ಬಹಳಷ್ಟು ವಿಚಾರಗಳನ್ನು ಆಳವಾದ ಸಂಶೋಧನೆಯ ಮೂಲಕ ಬರೆಯಲಾಗಿದೆ. ನೀರು ನೀಲಿ ಬಂಗಾರಕ್ಕೆ ಸಮಾನ. ಈ ಕೃತಿಯಲ್ಲಿ ನೀರಿನ ಕುರಿತಾದ ಅಂತಾರಾಷ್ಟ್ರೀಯ ಒಪ್ಪಂದಗಳು, ನಮ್ಮ ರಾಜ್ಯದ ಎಲ್ಲ ಪ್ರಮುಖ ನದಿಗಳ ವಿಚಾರಗಳು, ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಜಲ ವಿವಾದಗಳ ಸಂಬಂಧ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಬಗ್ಗೆ ದಾಖಲಿಸಿದೆ. ಅವರು ಪ್ರಧಾನಿಯಾಗಿದ್ದಾಗ ಕೈಗೊಂಡ ಅಂತರಾಷ್ಟ್ರೀಯ ನೀರಾವರಿ ತೀರ್ಮಾನಗಳಿಗಾಗಿ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ ಎಂದು ವಿವರಿಸಿದ್ದಾರೆ.

ಈ ಹಿಂದೆ ವಿಧಾನಸೌಧದಲ್ಲಿ ನಂಜೇಗೌಡ ಅವರು ನೀರಿನ ವಿಚಾರವಾಗಿ ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಈ ಕುರಿತು ಚರ್ಚೆಯನ್ನೂ ನಡೆಸಿದ್ದೇನೆ. ಈ ನೀರಾವರಿ ವಿವಾದಗಳು ಇವತ್ತಿನದ್ದಲ್ಲ, ಇವು ಹಿಂದಿನ ಕಾಲದಿಂದಲೂ ಬಂದಿರುವ ವಿವಾದಗಳು. ಪುರಾಣಗಳಲ್ಲಿಯೂ ಸಹ ನಾವು ನೀರಿನ ವಿಚಾರದಲ್ಲಿ ವಿವಾದಗಳಿದ್ದ ಬಗ್ಗೆ ಗಮನಿಸಬಹುದು ಎಂದಿದ್ದಾರೆ.
ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರು ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ನೀರಾವರಿ ಇಲಾಖೆಯ ಜವಾಬ್ದಾರಿಯನ್ನು ನನಗೆ ವಹಿಸಿಕೊಟ್ಟಿದ್ದಾರೆ. ನೆನಪಿಡಿ, ನೀರಿಗೆ ಬಣ್ಣವಿಲ್ಲ, ಜಾತಿ ಇಲ್ಲ, ಧರ್ಮ ಇಲ್ಲ. ನಮ್ಮ ಜೀವವೇ ಜಲ ಜೀವ. ನನಗೆ ಸಿಕ್ಕ ಈ ಅವಧಿಯಲ್ಲಿ ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ, ರೈತನ ಬದುಕನ್ನು ಹಸನುಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಬಿಜೆಪಿ ಸಂಸದರಿಂದ ನೀರಾವರಿ ಅಭಿವೃದ್ಧಿ ಇಲ್ಲ
ಕಾವೇರಿ ಆರತಿ ವಿಚಾರದಲ್ಲಿ ಕೆಲವರು ಟೀಕೆಗಳನ್ನು ಮಾಡಿದರು. ನಾನು ಹೇಳುವುದಿಷ್ಟೇ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಕೊಂಡು, ನಾಡಿನಲ್ಲಿ ನೀರಾವರಿ ಅಭಿವೃದ್ಧಿಗಾಗಿ ನನ್ನ ಕೈಯಿಂದ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡುತ್ತಿದ್ದೇನೆ. ಮೇಕೆದಾಟು ವಿಚಾರದಲ್ಲಿ ನಾವು ಮಾಡಿದ ಪಾದಯಾತ್ರೆಯಿಂದ ಹಿಡಿದು ಕಾನೂನು ಹೋರಾಟದವರೆಗೆ ಮಾಡಿದ ಶ್ರಮದ ಫಲವೇ ನಿನ್ನೆ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದ್ದೇ ಇದೆ. ದುರದೃಷ್ಟವಶಾತ್, ರಾಜ್ಯದ ನೀರಾವರಿ ಅಭಿವೃದ್ಧಿಗೋಸ್ಕರ ಬಿಜೆಪಿ ಸಂಸದರು ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದೇ ಅವರ ಕೆಲಸ ಆಗಿದೆ ಎಂದು ಡಿಕೆ ಶಿವಕುಮಾರ್ ಬೇಸರ ಹೊರಹಾಕಿದ್ದಾರೆ.












Click it and Unblock the Notifications