ಬಾಗಲಕೋಟೆಯ ಐತಿಹಾಸಿಕ ಮಚಮಂಡಿ ಕೆರೆಗೆ ಹರಿದು ಬಂತು ನೀರು
ಬಾಗಲಕೋಟೆ, ಆಗಸ್ಟ್ 18: 1882 ರಲ್ಲಿ ಬ್ರಿಟಿಷರು ನಿರ್ಮಿಸಿದ್ದ 751 ಎಕರೆ ವಿಸ್ತಾರದ ಬೃಹತ್ ಮುಚಖಂಡಿ ಕೆರೆಗೆ ಕೊನೆಗೂ ನೀರು ಹರಿದು ಬಂದಿದೆ. ಕೆರೆ ತುಂಬಿಸುವ ಕೆಲಸವನ್ನು ಸರಕಾರ ಪ್ರಯೋಗಿಕವಾಗಿ ಕೈಗೆತ್ತಿಕೊಂಡಿದೆ.
ಬಾಗಲಕೋಟೆ ಹಾಗೂ ಬಾದಾಮಿ ತಾಲೂಕಿನ ಹಲವು ಗ್ರಾಮಗಳಿಗೆ ಆಸರೆಯಾಗಿದ್ದ ಮಚಖಂಡಿ ಕೆರೆ ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿತ್ತು. ಕೆರೆಯ ತುಂಬಾ ಹೂಳು ತುಂಬಿಕೊಂಡಿತ್ತು. ಕೆಲವು ಪ್ರಭಾವಿ ವ್ಯಕ್ತಿಗಳು ಕೆರೆಯನ್ನು ಒತ್ತುವರಿ ಕೂಡಾ ಮಾಡಿಕೊಂಡಿದ್ದರು.
ಈ ಕೆರೆ ಒತ್ತುವರಿ ತೆರವುಗೊಳಿಸಬೇಕು ಮತ್ತು ಕೆರೆಗೆ ನೀರು ತುಂಬಿಸಬೇಕು ಎಂದು ರೈತರು ಮತ್ತು ಕನ್ನಡ ಪರ ಸಂಘಟನೆಗಳ ಹೋರಾಟ ನಡೆಸಿದ್ದರು. ಇದೀಗ ಕೊನೆಗೂ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೆರೆ ಒತ್ತುವರಿ ತೆರವುಗೊಳಿಸಿ, ನೀರು ತುಂಬಿಸಲು ಕೆಲಸ ಕೈಗೆತ್ತಿಕೊಂಡಿದೆ.
ಮುಚಖಂಡಿ ಕೆರೆಗೆ ನೀರು ತುಂಬಿಸಲು ರಾಜ್ಯ ಸರ್ಕಾರ 12.50 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಸಿತ್ತು. ಈ ಹಣದಲ್ಲಿ ಕಾರಿ ಹಳ್ಳದ ಕ್ವಾರಿ ಬಳಿಯಿಂದ ಬೃಹತ್ ಪೈಪ್ ಜೋಡನೆ ಮಾಡಿ 250 ಎಚ್ಪಿಯ ಎರಡು ಮೋಟಾರ್ ಅಳವಡಿಸಿ ನೀರು ತುಂಬಿಸುವ ಕಾರ್ಯಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.