ವಿಧಾನಸಭೇಲಿ ನೋಡಿದ್ದು, ಸಾರ್ವಜನಿಕ ಸಮಾರಂಭದಲ್ಲಿ ನೋಡೋದು ಒಂದೇ ಅಲ್ಲ
ಬೆಂಗಳೂರು, ನವೆಂಬರ್ 11: 'ಬಿಜೆಪಿ ಶಾಸಕರು ಪೋಲಿ ವಿಡಿಯೋ ನೋಡಿದ್ದು ವಿಧಾನಸಭೆಯಲ್ಲಿ. ಆದರೆ ಇದು ಸಾರ್ವಜನಿಕ ಕಾರ್ಯಕ್ರಮ. ಇವೆರಡೂ ಒಂದೇ ಅಲ್ಲ. ನಾನು ಸೇಠ್ ಅವರ ಪರ ವಹಿಸ್ತಿಲ್ಲ, ಏನು ವ್ಯತ್ಯಾಸ ಅಂತ ವಿವರಿಸೋಕೆ ಪ್ರಯತ್ನಿಸ್ತಿದೀನಿ'-ಸಂಪುಟ ಸಹೋದ್ಯೋಗಿ, ಶಿಕ್ಷಣ ಸಚಿವ ತನ್ವೀರ್ ಶೇಟ್ ಅವರ ಮೇಲೆ ಬಂದಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರವಿದು.
2012ರಲ್ಲಿ ಬಿಜೆಪಿ ಶಾಸಕರ ವಿರುದ್ಧ ಇಂಥದೇ ಪ್ರಕರಣದಲ್ಲಿ ಕ್ರಮಕ್ಕೆ ಒತ್ತಾಯಿಸಿದ್ದ ಸಿದ್ದರಾಮಯ್ಯ, ಈಗ ತಮ್ಮ ಸಚಿವರ ಮೇಲೆ ಕ್ರಮ ತೆಗೆದುಕೊಳ್ತಾರಾ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಹೀಗಿತ್ತು. ರಾಯಚೂರಿನಲ್ಲಿ ಟಿಪ್ಪು ಜಯಂತಿ ವೇಳೆ ತನ್ವೀರ್ ಸೇಠ್ ಅವರು ಮೋಬೈಲ್ ನಲ್ಲಿ ಅರೆ ನಗ್ನ ಹೆಣ್ಣುಮಕ್ಕಳ ಚಿತ್ರಗಳನ್ನು ನೋಡಿದ್ದರು.[ತನ್ವೀರ್ ಅರೆನಗ್ನ ಚಿತ್ರ ವೀಕ್ಷಣೆ, ಸಿದ್ದರಾಮಯ್ಯ, ಪರಂ ಗರಂ]

ಸಿಎಂ ಸಿದ್ದರಾಮಯ್ಯ ಅವರ ಪ್ರಕಾರ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ನೀಲಿಚಿತ್ರ ನೋಡಿದ ಪ್ರಕರಣ ಹಾಗೂ ಸೇಠ್ ನೋಡಿದ ಚಿತ್ರಗಳ ಸನ್ನಿವೇಶಕ್ಕೂ ತಳುಕು ಹಾಕುವುದು ಸರಿಯಿಲ್ಲ. ಇದರ ಜತೆಗೆ, ನಾನೇನೂ ಸಚಿವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ ಸಿದ್ದರಾಮಯ್ಯ.
ಸೇಠ್ ಅವರು ವಾಟ್ಸ್ ಅಪ್ ಮೆಸೇಜ್ ನೋಡುವಾಗ ಆ ಚಿತ್ರಗಳ ಬಂದಿವೆ. 'ನಿನ್ನೆ ಸೇಠ್ ಅವರ ಜತೆ ಮಾತನಾಡಿದ್ದೀನಿ. ಮೆಸೇಜ್ ಓದುವಾಗ ಆ ಚಿತ್ರಗಳು ಮೇಲಕ್ಕೆ ಬಂದಿವೆ. ನಾಳೆ ಸೇಠ್ ಅವರು ಅಧಿಕೃತ ಹೇಳಿಕೆ ನೀಡಲಿದ್ದಾರೆ. ಅವರು ಅದನ್ನು ಕೊಡಲಿ. ಆಮೇಲೆ ಸತ್ಯ ಏನು ಅಂತ ಪರಾಮರ್ಶೆ ಮಾಡೋಣ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.['ಅಶ್ಲೀಲ ಮಂತ್ರಿ' ಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ: ಪುಟ್ಟಣ್ಣ]
ಕಾಂಗ್ರೆಸ್ ಸರಕಾರದ ಸಚಿವರೊಬ್ಬರು ಹೀಗೆ ಆಕ್ಷೇಪಾರ್ಹ ಚಿತ್ರಗಳನ್ನು ನೋಡ್ತಾ ಸಿಕ್ಕಿಬಿದ್ದಿರುವುದರಿಂದ ಬಿಜೆಪಿಗೆ ಸರಕಾರ ಹಾಗೂ ನಾಯಕತ್ವದ ವಿರುದ್ಧ ದಾಳಿ ಮಾಡುವುದಕ್ಕೆ ಸರಿಯಾದ ಕಾರಣ ಸಿಕ್ಕಂತಾಗಿದೆ. ಬಿಜೆಪಿಯ ಸೈಯದ್ ಮಸ್ತಾನ್ ಅಲಿ ಮಾತನಾಡಿ, ಸಚಿವರು ತಮ್ಮ ಇಂಥ ನಡವಳಿಕೆಯಿಂದ ಇಡೀ ಕರ್ನಾಟಕವನ್ನು ಅವಮಾನಿಸಿದ್ದಾರೆ. ಸಂಪುಟದಿಂದ ಅವರನ್ನು ಕಿತ್ತೊಗೆಯಬೇಕು ಎಂದಿದ್ದಾರೆ.
ತನ್ವೀರ್ ಸೇಠ್ ನ ತಕ್ಷಣದಿಂದಲೇ ಸಂಪುಟದಿಂದ ಕೈ ಬಿಡಬೇಕು ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವುದಕ್ಕೆ ತನ್ವೀರ್ ಸೇಠ್ ಅವರಿಗೆ ಶನಿವಾರದವರೆಗೆ ಕಾಲಾವಕಾಶ ನೀಡಲಾಗಿದೆ. ಅದರೆ ಈ ಘಟನೆಯೀಮ್ದ ಸರಕಾರಕ್ಕೆ ಮುಜುಗರ ಆಗುವುದಂತೂ ನಿಜ.












Click it and Unblock the Notifications