ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹ : ಕಾರಣವೇನು?
ಬೆಂಗಳೂರು, ಜನವರಿ 10: ನ್ಯಾಯಾಂಗ ವ್ಯವಸ್ಥೆಯನ್ನು ಬದಿಗೊತ್ತಿ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ರಕ್ಷಣೆಗೆ ಮುಂದಾಗಿದ್ದ ಗುಜರಾತ್ ಸರ್ಕಾರವನ್ನು ವಜಾಗೊಳಿಸಬೇಕು ಹಾಗೂ ಗುಜರಾತ್ ಸರ್ಕಾರದ ಜತೆ ಕೈಜೋಡಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು. ಈ ಪ್ರಕರಣದಲ್ಲಿ ಮೌನವಹಿಸಿರುವ ಪ್ರಧಾನಮಂತ್ರಿಗಳು ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಉಗ್ರಪ್ಪ, ಕೋಮು ಗಲಭೆ ಸಂದರ್ಭದಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದಾಗ ಬಿಲ್ಕಿಸ್ ಬಾನು ಅವರ ಮೇಲೆ ಈ 11 ಅಪರಾಧಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದು, 2 ತಿಂಗಳ ಮಗು ಸೇರಿದಂತೆ ಆಕೆಯ ಕುಟುಂಬದ 7 ಜನರನ್ನು ಹತ್ಯೆ ಮಾಡಿದ್ದರು.

ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮುಂಬೈ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. 2008ರಲ್ಲಿ ಈ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಇವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ರಾಧೆ ಶಾಮ್ ಭಗವಾನ್ ಶಾ ಎಂಬುವವರು ಕ್ಷಮೆಧಾನ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗೆ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ವಜಾ ಮಾಡಿರುತ್ತದೆ. ಈ ವಿಚಾರವನ್ನು ಮರೆಮಾಚಿ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಲಾಗುತ್ತದೆ.
ಈ ಅಪರಾಧಿಗಳನ್ನು ಕ್ಷಮೆ ನೀಡಬೇಕಾದ ಅಧಿಕಾರ ಈ ಪ್ರಕರಣದ ತನಿಖೆ ನಡೆದ ರಾಜ್ಯದಲ್ಲಿ. ಈ ಪ್ರಕರಣದ ವಿಚಾರಣೆಯನ್ನು ಬಾಂಬೆ ವಿಶೇಷ ನ್ಯಾಯಾಲಯ ವಿಚಾರಣೆ ಮಾಡಿತ್ತು. ಹೀಗಾಗಿ ಈ ಅಪರಾಧಿಗಳಿಗೆ ಕ್ಷಮಾಧಾನ ನೀಡುವ ಅಧಿಕಾರ ಕೇವಲ ಮಹಾರಾಷ್ಟ್ರ ಸರ್ಕಾರಕ್ಕೆ ಮಾತ್ರ ಇತ್ತು. ಆದರೆ ಗುಜರಾತ್ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ಒಬ್ಬರ ಅರ್ಜಿ ಆಧಾರದ ಮೇಲೆ 11 ಅಪರಾಧಿಗಳಿಗೂ ಕ್ಷಮಾಧಾನ ನೀಡಿ ಜೈಲಿಂದ ಬಿಡುಗಡೆ ಮಾಡಿತ್ತು.
ಗುಜರಾತ್ ಸರ್ಕಾರದ ಈ ನಡೆಯನ್ನು ಸುಪ್ರೀಂ ಕೋರ್ಟ್ ಟೀಕಿಸಿ, ಬಿಡುಗಡೆಯಾಗಿದ್ದ ಅಪರಾಧಿಗಳ ಬಂಧನಕ್ಕೆ ಆದೇಶ ನೀಡಿದೆ. ಆ ಮೂಲಕ ಗುಜರಾತ್ ಬಿಜೆಪಿ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಪ್ರಧಾನಮಂತ್ರಿಗಳು ಹಾಗೂ ದೇಶದ ಗೃಹ ಸಚಿವರು ಗುಜರಾತಿನವರೇ ಆಗಿದ್ದು ಇವರ ಅಣತಿ ಇಲ್ಲದೆ ಗುಜರಾತ್ ರಾಜ್ಯದಲ್ಲಿ ಯಾವುದೇ ನಿರ್ಧಾರ ಸಾಧ್ಯವಿಲ್ಲ.

ಇಂತಹ ಹೀನಕೃತ್ಯ ಮಾಡಿದವರನ್ನು ಬಿಡುಗಡೆ ಮಾಡಿರುವುದನ್ನು ನೋಡಿದರೆ ಕೇಂದ್ರ ಹಾಗೂ ಗುಜರಾತ್ ಸರ್ಕಾರ ಈ ವಿಚಾರದಲ್ಲಿ ಅಪರಾಧಿಗಳ ಜತೆ ಶಾಮೀಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟಾದರೂ ಅವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಗುಜರಾತಿನಲ್ಲಿ ನ್ಯಾಯಾಂಗ ವ್ಯವಸ್ಥೆ ನಾಶವಾಗಿದ್ದು, ಅವರ ಇಷ್ಟಾನುಸಾರ ಕಾನೂನನ್ನು ತಮ್ಮ ಕೈಗೆತೆಗೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಅಪರಾಧಿಗಳ ರಕ್ಷಣೆಗೆ ಮುಂದಾಗಿರುವ ಗುಜರಾತ್ ಸರ್ಕಾರವನ್ನು ವಜಾಗೊಳಿಸಲು ಕೇಂದ್ರ ಸರ್ಕಾರ ಹಾಗೂ ಗುಜರಾತ್ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು. ಈ ಶಿಫಾರಸ್ಸನ್ನು ರಾಷ್ಟ್ರಪತಿಗಳು ಅನುಮೋದಿಸಿ ಗುಜರಾತ್ ಸರ್ಕಾರವನ್ನು ವಜಾಗೊಳಿಸಬೇಕು. ಗಾಂಧಿ ಹುಟ್ಟಿದ ಪುಣ್ಯಭೂಮಿಯಲ್ಲಿ ಇಂತಹ ದುರ್ಘಟನೆ ನಡೆದರೆ ಇದರ ಅಪರಾಧಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಕ್ಷಣೆ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.












Click it and Unblock the Notifications