ಡಿ.ಕೆ ಶಿವಕುಮಾರ್ಗೆ ಸಿಎಂ ಸ್ಥಾನಕ್ಕೆ ಒತ್ತಾಯ: ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದಿಂದ ಸುದೀರ್ಘ ಸ್ಪಷ್ಟನೆ
ಬೆಂಗಳೂರು, ಜೂನ್ 30: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಆಗಬೇಕೆಂಬ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪತ್ರ ಬರೆದಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠ, ಬೆಂಗಳೂರು ನಗರ ಕಂಠೀರವ ಕ್ರೀಡಾಂಗಣದಲ್ಲಿ ಸರ್ಕಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ ದಿನದಂದು ನಾವು ಮುಖ್ಯಮಂತ್ರಿ ಬದಲಾವಣೆ ಕುರಿತು ಶ್ರೀ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳಾದ ನಾವು ತಮಗೆ ನೀಡುತ್ತಿರುವ ಸೃಷ್ಟಿಕರಣವೇನೆಂದರೆ,

ಸರ್ಕಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ನಾವು ನಮ್ಮ ಸರದಿಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಸರ್ಕಾರಕ್ಕೆ ಮೂರು ಸಲಹೆಗಳನ್ನು ನೀಡಿದ್ದು, ಆ ಮೂರರಲ್ಲಿ ಮುಖ್ಯಮಂತ್ರಿ ಬದಲಾವಣೆಯ ಒಂದು ವಿಷಯ ಸಾಮಾಜಿಕ ಜಾಲತಾಣ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಬಹಳವಾಗಿ ಚರ್ಚೆಯಾಗುತ್ತಿದೆ.
2023ನಲ್ಲಿ ರಚಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಆಗಿರುವ ತೀರ್ಮಾನದಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಂದಿನ ದಿನಗಳಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ ರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಪೂರ್ವನಿಯೋಜಿತವಾಗಿದೆ ಎಂಬ ವಿಷಯವನ್ನು ನಾವು ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳ ಮುಖೇನ ತಿಳಿದುಕೊಂಡಿರುತ್ತೇವೆ.
ಕರ್ನಾಟಕದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷಕ್ಕೆ 133 ಸ್ನಾನಗಳನ್ನು ನೀಡುವ ಮೂಲಕ, ಅದ್ಭುತವಾಗಿ ಆಶೀರ್ವದಿಸಿರುತ್ತಾರೆ. ಈ ಯಶಸ್ಸಿನ ಹಿಂದೆ ಮಾನ್ಯ ಸಿದ್ಧರಾಮಯ್ಯನವರ ಪಾತ್ರ ಎಷ್ಟಿದೆಯೋ ಅಷ್ಟೇ ಮಟ್ಟದ ಪಾಲುದಾರಿಕೆ, ಮಾನ್ಯ ಡಿ.ಕೆ. ಶಿವಕುಮಾರ್ ರವರದೂ ಸಹ ಇದೆ ಎಂಬುದನ್ನು ನಾನು ಬಲ್ಲೆ. ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಟ್ರಬಲ್ ಶೂಟರ್ ಆಗಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು ಬಂದ ತೊಂದರೆಗಳನ್ನಲ್ಲಾ ನಿವಾರಿಸಲು ಅವರು ವಹಿಸಿರುವ ಪಾತ್ರವನ್ನು ಯಾರ ಅಲ್ಲಗಳೆಯಲಾಗುವುದಿಲ್ಲ.
ಮಾನ್ಯ ಡಿ.ಕೆ. ಶಿವಕುಮಾರ್ ರವರಿಗೆ ಆಡಳಿತದಲ್ಲಿ ಸಾಕಷ್ಟು ಅನುಭವವಿರುವದರಿಂದ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೆ ಕನ್ನಡ ನಾಡಿಗೆ, ಅವರಿಂದ ಹೆಚ್ಚಿನ ಸೇವೆ ಲಭ್ಯವಾಗಿ ರಾಜ್ಯಕ್ಕೆ ಒಳಿತಾಗುತ್ತದೆ ಎಂಬ ಆಶಯ ನಮ್ಮದು. ಈ ಕಾರಣದಿಂದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಹಾದಿಯನ್ನು ಸುಗಮಗೊಳಿಸಿಕೊಡಬೇಕೆಂದು ನಾವೇ ಯಾರ ಒತ್ತಡವೂ ಇಲ್ಲದೇ ವೈಯಕ್ತಿಕವಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿರುತ್ತೇವೆ.
ಈ ವಿಷಯ ಕಳೆದ 2-3 ದಿನಗಳಿಂದ ಟಿ.ವಿ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಬಹುಚರ್ಚಿತವಾಗುತ್ತಿದ್ದು, ಮಾನ್ಯ ಡಿ.ಕೆ ಶಿವಕುಮಾರ್ ರವರು ನಮ್ಮ ಮೂಲಕ ವೇದಿಕೆಯಲ್ಲಿಯೇ ಮುಖ್ಯಮಂತ್ರಿ ಬದಲಾವಣೆಯ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿಯೇ ನೀಡಿಸಿದ್ದಾರೆ. ಎಂಬ ವಿಷಯವು ಸತ್ಯಕ್ಕೆ ದೂರವಾದದ್ದು ಎನ್ನುವುದನ್ನು ಈ ಮೂಲಕ ಸ್ಪಷ್ಟನೆ ನೀಡುತ್ತೇವೆ. ಈ ಹೇಳಿಕೆಯು ನನ್ನ ವೈಯಕ್ತಿಕವೇ ಹೊರತು ನನ್ನ ಜೊತೆಯಿದ್ದ ಯಾರ ಪಾತ್ರವೂ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇವೆ ಎಂದಿದ್ದಾರೆ.












Click it and Unblock the Notifications