ಮಾಗಡಿ ಬ್ರಹ್ಮರಥೋತ್ಸವದ ತೇರು ಎಳೆದ ಡಿಕೆ ಶಿವಕುಮಾರ್
ರಾಮನಗರ, ಮಾರ್ಚ್ 13: ಮಾಗಡಿ ತಾಲೂಕಿನ ಭಕ್ತ ಮುನೇಶ್ವರ ನಗರದ ಮಾದಿಗೊಂಡನಹಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ. ಶ್ರೀ ನಂದೀಶ್ವರ ಸ್ವಾಮಿಯ 10ನೇ ವರ್ಷದ ಶಿವ ಪಾರ್ವತಿ ಪರಿವಾರ ಬ್ರಹ್ಮರಥೋತ್ಸವದ ನಿಮಿತ್ತ ರಾಮನಗರ ಜಿಲ್ಲೆಯ ಮಾದಿಗೊಂಡನಹಳ್ಳಿ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿತ್ತು.
ಮಾರ್ಚ್ 11 ರಂದು ನಡೆದ ಬ್ರಹ್ಮರಥೋತ್ಸವಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತೇರು ಎಳೆಯುವ ಮೂಲಕ ಚಾಲನೆ ನೀಡಿದರು. ನಂದೀಶ್ವರಸ್ವಾಮಿ ದೇವಾಲಯದ ಧರ್ಮಾಧಿಕಾರಿ ಶ್ರೀ ರಂಗನಾಥಾನಂದ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ನಿತ್ಯ ನೂರಾರು ಜನರು ಬಂದು ತಮ್ಮ ಇಷ್ಟದೈವದ ಆಶೀರ್ವಾದ ಪಡೆಯುತ್ತಿದ್ದಾರೆ.

ಈಗಾಗಲೇ ಒಂದು ವಾರದಿಂದ ಜಾತ್ರೆಯ ಕಳೆಯಲ್ಲಿ ಮಿಂದೇಳುತ್ತಿರುವ ರಾಮನಗರ ಜಿಲ್ಲೆಯ ಮಾದಿಗೊಂಡನಹಳ್ಳಿಯಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ನಾಟಕಗಳು, ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರಿಗೆ ಮನರಂಜನೆ ನೀಡುತ್ತಿವೆ.

ಮಾರ್ಚ್ 14 ರಂದು ತೆಪ್ಪೋತ್ಸವ, ಮಾರ್ಚ್ 24 ರಂದು ಕಾಳಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು ಭಕ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀ ನಂದೀಶ್ವರ ಸ್ವಾಮಿ ಸೇವಾ ಟ್ರಸ್ಟ್(ರಿ.) ಆಡಳಿತ ಮಂಡಳಿ ತಿಳಿಸಿದೆ.












Click it and Unblock the Notifications