ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಕೇಂದ್ರವೇ ಕಾರಣ ಎಂದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ವಿಜಯೇಂದ್ರ
ಬೆಂಗಳೂರು, ಜೂನ್ 18: ಪೆಟ್ರೋಲ್, ಡಿಸೇಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಸೃಷಿಯಾಗಲು ಕೇಂದ್ರ ಸರ್ಕಾರವೇ ಕಾರಣ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಜಯೇಂದ್ರ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಅಸಮರ್ಥ ಆಡಳಿತ, ಆರ್ಥಿಕ ಸಮತೋಲನದ ವೈಫಲ್ಯ, ಮಹರ್ಷಿ ವಾಲ್ಮೀಕಿ ನಿಗಮದ ಹಣ ದೋಚುವಿಕೆಯಂತಹ ಪ್ರಕರಣಗಳು, ಮತ ಬ್ಯಾಂಕ್ ಆಧಾರಿತ ಯೋಜನೆಗಳಿಗೆ ಜನರ ತೆರಿಗೆಗಳಿಂದ ಸಂಗ್ರಹವಾದ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿದ್ದೀರಿ ಎಂದು ಕಿಡಿಕಾರಿದ್ದಾರೆ.

ಗತ್ಯಂತರವಿಲ್ಲದೆ ರಾಜಕೀಯ ಅರಾಜಕತೆ ಸೃಷ್ಟಿಸುವತ್ತ ನಿಮ್ಮ ಆಡಳಿತ ಮುನ್ನಡೆದಿದೆ, ನೀವು ಅಧಿಕಾರದಲ್ಲಿ ಇರಲೇಬೇಕೆಂದರೆ "ತೆರಿಗೆಯ ಮೇಲೆ ತೆರಿಗೆ, ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ" ಮಾಡಿ ಜನರನ್ನು ಸುಲಿಗೆ ಮಾಡುವುದೊಂದೇ ಉಳಿದಿರುವ ಮಾರ್ಗವಾಗಿದೆ. ವಸ್ತು ಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಬೆಲೆ ಏರಿಕೆ ಆರೋಪದಿಂದ ನುಣುಚಿಕೊಳ್ಳುವ ನಿಮ್ಮ ಪ್ರಯತ್ನ ರಾಜ್ಯದ ಜನತೆಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಸುಳ್ಳುಗಳ ಸರಮಾಲೆ ಕಟ್ಟಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ನಿಮ್ಮ ಆಟ ಮುಗಿಯುತ್ತಾ ಬರುತ್ತಿದೆ, ಸತ್ಯ ಏನೆಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರದ ಅನುದಾನದಿಂದಲೇ ರಾಜ್ಯ ಸರ್ಕಾರ ನಡೆಯುತ್ತಿದೆ ಎಂದು ನೀವು ಹೇಳುತ್ತಿರುವಂತಿದೆ, ವಿತ್ತ ಖಾತೆಯನ್ನು ಹೊತ್ತ ನೀವು 15 ಬಾರಿ ರಾಜ್ಯದ ಬಜೆಟ್ ಮಂಡಿಸಿರುವ ಹೆಗ್ಗಳಿಕೆಯನ್ನು ತಗುಲಿಸಿಕೊಂಡಿದ್ದೀರಿ, ಆದರೆ ಕೇಂದ್ರದ ಅನುದಾನದತ್ತಲೇ ನಿಮ್ಮ ಆರ್ಥಿಕ ತಜ್ಞತೆ ಗಿರಕಿ ಹೊಡೆಯುತ್ತಿರುವುದನ್ನು ನೋಡಿದರೆ ನೀವು ಸರ್ಕಾರ ನಡೆಸುತ್ತಿದ್ದೀರೋ ಅಥವಾ ನಿಗಮವೊಂದರ ಮುಖ್ಯಸ್ಥರಾಗಿದ್ದೀರೋ ಎನ್ನುವ ಅನುಮಾನದ ಪ್ರಶ್ನೆ ಕಾಡುತ್ತಿದೆ.
ಮಾನ್ಯ ಮುಖ್ಯಮಂತ್ರಿ @siddaramaiah ಅವರೇ,
— Vijayendra Yediyurappa (@BYVijayendra) June 18, 2024
ನಿಮ್ಮ ಅಸಮರ್ಥ ಆಡಳಿತ, ಆರ್ಥಿಕ ಸಮತೋಲನದ ವೈಫಲ್ಯ, ಮಹರ್ಷಿ ವಾಲ್ಮೀಕಿ ನಿಗಮದ ಹಣ ದೋಚುವಿಕೆಯಂತಹ ಪ್ರಕರಣಗಳು, ಮತ ಬ್ಯಾಂಕ್ ಆಧಾರಿತ ಯೋಜನೆಗಳಿಗೆ ಜನರ ತೆರಿಗೆಗಳಿಂದ ಸಂಗ್ರಹವಾದ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿದ್ದೀರಿ.
ಗತ್ಯಂತರವಿಲ್ಲದೆ ರಾಜಕೀಯ ಅರಾಜಕತೆ ಸೃಷ್ಟಿಸುವತ್ತ ನಿಮ್ಮ… pic.twitter.com/UPUgq2A5ih
ಭಾರತದಲ್ಲಿ ಸಂಪನ್ಮೂಲ ಸಮೃದ್ಧತೆ ಹೊಂದಿರುವ ಮುಂಚೂಣಿ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಸದಾ ಮುಂದು,ಇಂತಹ ಸಂಪತ್ಭರಿತ ಕರ್ನಾಟಕವನ್ನು ಬರಡು ಮಾಡಲು ಹೊರಟಿರುವ ನಿಮ್ಮ ಆಡಳಿತ ವೈಖರಿ ಇತಿಹಾಸದ ಕಪ್ಪು ಚುಕ್ಕೆಯಾಗುತ್ತಿದೆ.
ರಸ್ತೆಯಲ್ಲಿ ತರಕಾರಿಯಂತೆ ಚಿನ್ನ ಮಾರುತ್ತಿದ್ದ ಕೃಷ್ಣದೇವರಾಯರಾಳಿದ ನಾಡಿದು, ರಾಮ ರಾಜ್ಯವನ್ನು ಅಕ್ಷರಶಃ ನಿರ್ಮಾಣ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರು ಆಳಿದ ನಾಡಿದು, ಕೆರೆ-ಕಟ್ಟೆಗಳನ್ನು ನಿರ್ಮಿಸಿ ಸಮೃದ್ಧ ನಾಡು ಕಟ್ಟಿದ ಕೆಂಪೇಗೌಡರ ಬೀಡಿದು, ಕರುನಾಡು ಎಂದೂ ಯಾರ ಮುಂದೆಯೂ ಕೈಚಾಚಿಲ್ಲ, 'ನೀಡುವ ಕೈ ಕರ್ನಾಟಕ' ಎಂದು ಖ್ಯಾತಿಯಾಗಿದೆ. ಆದರೆ ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಈ ರಾಜ್ಯದ ಕೀರ್ತಿಯನ್ನು ಕಸಿಯುತ್ತಿದೆ ಅದರ ರೂವಾರಿ ನಿಮ್ಮ ಕಾಂಗ್ರೆಸ್ ಸರ್ಕಾರವೇ ಆಗಿರುವುದು ಈ ರಾಜ್ಯದ ದುರಂತವೇ ಸರಿ.
ಹಾಲಿನ ದರ 2 ರೂ ಹೆಚ್ಚಳ, ಉದ್ಯೋಗದಾತರ ಮೇಲೆ ಏರಿಸಿದ ವಿದ್ಯುತ್ ದರದಿಂದ ಬಂದ ಆದಾಯ, ಶೇಕಡ 40 ರಿಂದ 50 ರಷ್ಟು ಏರಿಸಿದ ಮುದ್ರಾಂಕ ಶುಲ್ಕ, ಮೋಟಾರ್ ವಾಹನ ತೆರಿಗೆ ದರ ಹೆಚ್ಚಳ, ಅಬಕಾರಿ ಶುಲ್ಕ ಹೀಗೆ ಏರಿಸಿದ ಆದಾಯದ ಮೂಲಗಳು ಎಲ್ಲಿ ಹೋಯಿತು? ಎಲ್ಲಿ ಹೋಗುತ್ತಿದೆ? ಇದೀಗ ಪೆಟ್ರೋಲ್ - ಡಿಸೇಲ್ ದರ ಏರಿಸಿದ್ದೀರಿ, ಇನ್ನೂ ಯಾವ್ಯಾವುದರ ಮೇಲೆ ದರ ಏರಿಕೆಯಾಗಲಿದೆಯೋ ಎಂದು ರಾಜ್ಯದ ಜನ ಆತಂಕಿತರಾಗಿದ್ದಾರೆ.
ಜನರ ಕಿಸೆಯನ್ನು ಬರಿದು ಮಾಡದೇ ಆಡಳಿತ ನಡೆಸುವ ಮಾರ್ಗವಿದ್ದರೆ ಮುನ್ನಡೆಯಿರಿ, ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸುವ ಸರಮಾಲೆ ಹೆಣೆಯುವ ವಸೂಲಿ ಯೋಜನೆಗಳಿದ್ದರೆ ಈ ಕೂಡಲೇ ರಾಜೀನಾಮೆ ಕೊಟ್ಟು ಹೊರಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications