ವಿಜಯಪುರದಲ್ಲಿ ಭೀಕರ ಅಪಘಾತ, ಕಾರ್ವಿುಕರ ದುರಂತ ಸಾವು
ವಿಜಯಪುರ, ಮಾರ್ಚ್ 27: ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಭಾನುವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಬಾಗಲಕೋಟೆಯ ಗಲಗಲಿ ಭಾಗದಲ್ಲಿ ಕಬ್ಬು ಕಟಾವಿಗೆ ಆಗಮಿಸಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕರು ದುರಂತ ಸಾವನ್ನಪ್ಪಿದ್ದಾರೆ.
ಕಬ್ಬು ಕಟಾವು ಮುಗಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ಹದಿನೈದಕ್ಕೂ ಅಧಿಕ ಕಾರ್ಮಿಕರು ಮಹಾರಾಷ್ಟ್ರಕ್ಕೆ ವಾಪಸ್ ಆಗುತ್ತಿದ್ದರು. ಮಹಾರಾಷ್ಟ್ರದ ಬೀಡ್, ಪರಬನಿ ಜಿಲ್ಲೆಗೆ ಸೇರಿರುವ ಹೆಚ್ಚಿನ ಕಾರ್ಮಿಕರು ನಂದಿ ಸಕ್ಕರೆ ಕಾರ್ಖಾನೆ ಕಾರ್ವಿುಕರು ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಕಂಟೈನರ್ ಟ್ರಕ್ ವೊಂದು ವೇಗವಾಗಿ ಹಿಂಬದಿಯಿಂದ ಟ್ರಾಕ್ಟರ್ ಗೆ ಡಿಕ್ಕಿ ಕೊಟ್ಟಿದೆ. ಭಾನುವಾರ ಮುಂಜಾನೆ 2.45ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 12ಕ್ಕೂ ಅಧಿಕ ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪಿಎಸ್ಐ ನಾಗರಾಜ ಅಂಬಿಗೇರ ಹೇಳಿದ್ದಾರೆ.
ಮೃತಪಟ್ಟವರನ್ನು ಆರೋಹಿ ಡಾಲೇ(2), ಬಿರಾಜ್ ಡಂಬಳ(40), ವಿಮಲ್ ಡಂಬಳ(65), ಮುಮ್ತಾಜ್ ಬೇಗ್(40), ಮೈರೂನ್ ಬೇಗ್(40), ಮುಸ್ತಕಿಮ್ ಬೇಗ್(30) ಎಂದು ಗುರುತಿಸಲಾಗಿದೆ. ಟ್ರಕ್ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.












Click it and Unblock the Notifications