ಬಳ್ಳಾರಿ ರಾಜಕೀಯ : ಬಿಜೆಪಿ ತೊರೆಯಲಿದ್ದಾರೆ ಆನಂದ್ ಸಿಂಗ್?
ಬಳ್ಳಾರಿ, ಜನವರಿ 04 : ಬಳ್ಳಾರಿ ಜಿಲ್ಲಾ ರಾಜಕೀಯ ಚಿತ್ರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಪಕ್ಷದ ಜಿಲ್ಲಾ ಘಟಕದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ತಮ್ಮ ವಿರುದ್ಧ ಮತ್ತೊಬ್ಬ ನಾಯಕನನ್ನು ಬೆಳೆಸಲು ಪಕ್ಷದ ನಾಯಕರು ಮುಂದಾಗಿದ್ದಾರೆ ಎಂಬುದು ಅವರ ಮುನಿಸಿಗೆ ಕಾರಣವಾಗಿದೆ.
ಬಿಜೆಪಿ ನಾಯಕರು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಪಕ್ಷ ಬಿಡುವುದಾಗಿ ಆನಂದ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಜನವರಿ 6ರಂದು ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ಇದ್ದು, ಇದರಲ್ಲಿ ಪಾಲ್ಗೊಳ್ಳಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಆನಂದ್ ಸಿಂಗ್ ಅವರಿಗೆ ಬಿಜೆಪಿಯ ಶಿಸ್ತಿ ಸಮಿತಿ ವತಿಯಿಂದ ಕೆಲವು ದಿನಗಳ ಹಿಂದೆ ನೋಟಿಸ್ ನೀಡಲಾಗಿತ್ತು. ಪಕ್ಷದ ನಿಲುವಿಗೆ ವಿರುದ್ಧವಾಗಿ ಅವರು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ, ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಈಗಾಗಲೇ ಕೂಡ್ಲಗಿ ಕ್ಷೇತ್ರದ ಪಕ್ಷೇತರ ಶಾಸಕ ಮತ್ತು ಬಿ.ಶ್ರೀರಾಮುಲು ಆಪ್ತ ಬಿ.ನಾಗೇಂದ್ರ ಕಾಂಗ್ರೇಸ್ ಸೇರುವ ತಯಾರಿ ನಡೆಸಿದ್ದಾರೆ...

ಎರಡು ಬಾರಿ ಶಾಸಕರಾಗಿದ್ದಾರೆ
ಬಳ್ಳಾರಿಯ ರೆಡ್ಡಿ ಸಹೋದರರ ಜೊತೆ ಗುರುತಿಸಿಕೊಂಡಿದ್ದ ಆನಂದ್ ಸಿಂಗ್, ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. 2008 ಮತ್ತು 2013ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಬಿ.ಶ್ರೀರಾಮುಲು ಅವರು ಬಿಎಸ್ಆರ್ ಕಾಂಗ್ರೆಸ್ ಕಟ್ಟಿದಾಗಲೂ ಪಕ್ಷವನ್ನು ಬಿಟ್ಟು ಹೋಗಿರಲಿಲ್ಲ. ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಸಚಿವರು ಆಗಿದ್ದರು.

ಪಕ್ಷದ ನಾಯಕರ ವಿರುದ್ಧ ಮುನಿಸು
ಗಣಿ ಉದ್ಯಮಿಯಾದ ಪತ್ತಿಕೊಂಡ ಕಿಶೋರ್ ಮುಂದಿನ ಚುನಾವಣೆಯಲ್ಲಿ ನಾನೇ ಪಕ್ಷದ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಕರಪತ್ರ ಹಂಚುತ್ತಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಪರಾಧಿಕಾರಿಗಳು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂಬುದು ಆನಂದ್ ಸಿಂಗ್ ಅವರ ಮುನಿಸಿಗೆ ಕಾರಣವಾಗಿದೆ.

ಜ.6ರಂದು ಪಕ್ಷದ ಸಮಾವೇಶ
ವಿಜಯನಗರದಲ್ಲಿ ಜನವರಿ 6ರಂದು ಪಕ್ಷದ ಪರಿವರ್ತನಾ ಯಾತ್ರೆ ಇದೆ. ಈ ಬಗ್ಗೆ ಚರ್ಚಿಸಲು ಬಿ.ಶ್ರೀರಾಮುಲು ಕರೆದಿದ್ದ ಸಭೆಗೆ ಆನಂದ್ ಸಿಂಗ್ ಗೈರಾಗಿದ್ದಾರೆ. ತಮ್ಮ ಅಸಮಾಧಾನ ಬಗೆಹರಿಸಿದರೆ ಮಾತ್ರ ಸಮಾವೇಶ ನಡೆಸಲು ಸಹಕಾರ ನೀಡುವೆ ಎಂಬ ಸಂದೇಶವನ್ನು ಆನಂದ್ ಸಿಂಗ್ ರವಾನೆ ಮಾಡಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆನಂದ್ ಸಿಂಗ್ ಅವರನ್ನು ಲೋಕಾಯುಕ್ತ ವಿಶೇಷ ತನಿಖಾ ತಂಡ ಬಂಧಿಸಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆನಂದ್ ಸಿಂಗ್ 2015ರಲ್ಲಿ ಜೈಲಿನಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ರಾಜೀನಾಮೆ ವಾಪಸ್ ಪಡೆದಿದ್ದರು.

ಆನಂದ್ ಸಿಂಗ್ ಬಿಟ್ಟರೆ ಭಾರೀ ಹಿನ್ನಡೆ
ಆನಂದ್ ಸಿಂಗ್ ಅವರು ಪಕ್ಷ ಬಿಟ್ಟರೆ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಲಿದೆ. ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿ ಆನಂದ್ ಸಿಂಗ್ ಅವರ ಸಂಬಂಧಿಕರೇ ಇದ್ದಾರೆ.
ಆನಂದ್ ಸಿಂಗ್ ಹಿರಿಯ ಸಹೋದರಿ ರಾಣಿ ಸಂಯುಕ್ತಾ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷರು. ತಾಲೂಕು ಅಧ್ಯಕ್ಷ ಸಂದೀಪ್ ಸಿಂಗ್ ಆನಂದ್ ಸಿಂಗ್ ಅವರ ಸೋದರಳಿಯ. ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಆನಂದ್ ಸಿಂಗ್ ಅವರ ಅತ್ತಿಗೆ. ಶಾಸಕರ ಹಿರಿಯ ಸಹೋದರ ರತನ್ ಸಿಂಗ್ ಈಗ ಪಕ್ಷ ಸೇರಿದ್ದಾರೆ.

ದೀಪಕ್ ಮತ್ತು ಪ್ರವೀಣ್ ಸಿಂಗ್
ಆನಂದ್ ಸಿಂಗ್ ದೊಡ್ಡಪ್ಪನ ಮಕ್ಕಳಾದ ದೀಪಕ್ ಸಿಂಗ್ ಮತ್ತು ಪ್ರವೀಣ್ ಸಿಂಗ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. 2008ರ ಚುನಾವಣೆಯಲ್ಲಿ ದೀಪಕ್ ಸಿಂಗ್ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಪ್ರವೀಣ್ ಸಿಂಗ್ ಜಿಲ್ಲಾ ಪಂಚಾಯಿತಿ ಸದಸ್ಯರು.












Click it and Unblock the Notifications