ಬಿಜೆಪಿ ತೊರೆಯುವ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು?
Recommended Video

ಬಳ್ಳಾರಿ, ಜನವರಿ 26 : 'ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ. ಆದರೆ, ಯಾವ ಪಕ್ಷದಿಂದ ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇನೆ' ಎಂದು ಹೊಸಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ.
ಬಳ್ಳಾರಿಯ ಹೊಸಪೇಟೆ ನಿವಾಸದಲ್ಲಿ ಆನಂದ್ ಸಿಂಗ್ ಗುರುವಾರ ಬೆಂಬಲಿಗರ ಸಭೆ ನಡೆಸಿದರು. 'ಜನವರಿ 27ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ' ಎಂದು ಹೇಳಿದರು. ಇದರಿಂದಾಗಿ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಬಿಜೆಪಿಗೆ ಜಿಲ್ಲೆಯಲ್ಲಿ ಹಿನ್ನಡೆ ಉಂಟಾಗಿದೆ.
ಆನಂದ್ ಸಿಂಗ್ ಬಿಜೆಪಿ ತೊರೆಯುವ ಬಗ್ಗೆ ಹಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದವು. ಹೊಸಪೇಟೆಯಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಗೂ ಅವರು ಗೈರು ಹಾಜರಾಗಿದ್ದರು. ಪಕ್ಷ ತೊರೆಯುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕಳೆದ ವಾರ ಆನಂದ್ ಸಿಂಗ್ ಅವರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಆದರೆ, ಅವರು ಕಾಂಗ್ರೆಸ್ ಸೇರಲಿದ್ದಾರೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ. ಕಾಂಗ್ರೆಸ್ ಸೇರಬಹುದು ಎಂಬುದು ಸದ್ಯದ ಸುದ್ದಿ...

120 ಕೋಟಿ ಅನುದಾನ ತರುವೆ
'ಫೆ.16ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಹೊಸಪೇಟೆ ಕ್ಷೇತ್ರಕ್ಕೆ 120 ಕೋಟಿ ಅನುದಾನವನ್ನು ತರುವೆ. ಗ್ರಾಮೀಣ ಭಾಗಕ್ಕೆ 200 ಕೋಟಿ ಅನುದಾನವನ್ನು ತರುವೆ. ನೀವು ನನ್ನ ಜೊತೆ ಇರಿ' ಎಂದು ಜನರಿಗೆ ಆನಂದ್ ಸಿಂಗ್ ಕರೆ ನೀಡಿದರು.

ಜನರಿಗಾಗಿ ಈ ತೀರ್ಮಾನ
'ಚುನಾವಣೆ ಬಂದಾಗ ಮಾತ್ರ ಕಣ್ಣಿಗೆ ಕಾಣುವ ಜನಪ್ರತಿನಿಧಿ ನಾನಲ್ಲ. ರಾಜ್ಯದ ರಾಜಕಾರಣದಲ್ಲಿ ಬದಲಾವಣೆಯ ಸಮಯ ಬಂದಿದೆ. ನಾನು ಇದುವರೆಗೂ ದ್ವೇಷದ ರಾಜಕಾರಣ ಮಾಡಿಲ್ಲ, ಮಾಡುವುದಿಲ್ಲ. ಜನರಿಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿರುವೆ' ಎಂದು ಹೇಳಿದರು.

ನನ್ನನ್ನು ಗೆಲ್ಲಿಸುವುದು ಖಚಿತ
'ಮುಂದಿನ ಚುನಾವಣೆಯಲ್ಲಿ ಇತಿಹಾಸ ಸೃಷ್ಠಿ ಮಾಡೋಣ. ನೀವೆಲ್ಲ ನನ್ನನ್ನು ಬೆಂಬಲಿಸಿ, ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ಖಚಿತ. ಆದರೆ, ಯಾವ ಪಕ್ಷದಿಂದ ಎಂಬುದನ್ನು ಶೀಘ್ರದಲ್ಲಿಯೇ ತಿಳಿಸುತ್ತೇನೆ' ಎಂದು ಆನಂದ್ ಸಿಂಗ್ ಹೇಳಿದರು.

ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವೆ
'ನನ್ನ ವಿರುದ್ಧ ಧಿಕ್ಕಾರ ಕೂಗಿದವರನ್ನು ಜೊತೆಗೆ ಕರೆದುಕೊಂಡು ಹೋಗುವೆ. ಕ್ಷೇತ್ರದ ಜನರಾದ ನೀವು ನನ್ನ ಜೊತೆ ನಿಲ್ಲಿ' ಎಂದು ಕಾರ್ಯಕರ್ತರಿಗೆ ಅವರು ಕರೆ ಕೊಟ್ಟರು.

ಬಿಜೆಪಿಗೆ ಭಾರೀ ಹಿನ್ನಡೆ
ಆನಂದ್ ಸಿಂಗ್ ಬಿಜೆಪಿ ತೊರೆದರೆ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಲಿದೆ. ಕಾರಣ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿ ಆನಂದ್ ಸಿಂಗ್ ಅವರ ಸಂಬಂಧಿಕರೇ ಇದ್ದಾರೆ. ಆನಂದ್ ಸಿಂಗ್ ಅವರ ಹಿರಿಯ ಸಹೋದರಿ ರಾಣಿ ಸಂಯುಕ್ತಾ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷರು. ತಾಲೂಕು ಅಧ್ಯಕ್ಷ ಸಂದೀಪ್ ಸಿಂಗ್ ಆನಂದ್ ಸಿಂಗ್ ಅವರ ಸೋದರಳಿಯ. ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಆನಂದ್ ಸಿಂಗ್ ಅವರ ಅತ್ತಿಗೆ.

ವಿಜಯನಗರ ಕ್ಷೇತ್ರದ ಫಲಿತಾಂಶ
2013ರ ಚುನಾವಣೆಯಲ್ಲಿ ಆನಂದ್ ಸಿಂಗ್ 69,995 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಎಚ್.ಅಬ್ದುಲ್ ವಾಹಬ್ 39,358 ಮತ, ಜೆಡಿಎಸ್ನ ಕೆ.ಬಸವರಾಜ ಅವರು 611 ಮತಗಳನ್ನು ಪಡೆದಿದ್ದರು.












Click it and Unblock the Notifications