Breaking: ಮೈಲಾರಲಿಂಗೇಶ್ವರ ಕಾರ್ಣಿಕ 2022: 'ಮಳೆ ಬೆಳೆ ಸಂಪಾಯಿತಲೇ ಪರಾಕ್'
ವಿಜಯನಗರ, ಫೆಬ್ರವರಿ 18: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕ ಫೆಬ್ರವರಿ 18ರಂದು ಹೊರಬಿದ್ದಿದ್ದು, 'ಮಳೆ ಬೆಳೆ ಸಂಪಾಯಿತಲೆ ಪರಾಕ್' ಎಂದು ಗೊರವಪ್ಪ ನುಡಿದಿದ್ದಾನೆ.
ಈಶ್ವರನೇ ಗೊರವಪ್ಪನ ರೂಪದಲ್ಲಿ ದೈವವಾಣಿ ನುಡಿಯುತ್ತಾನೆಂದು ಈ ಭಾಗದಲ್ಲಿ ನಂಬಲಾಗುವ ಈ ಕಾರ್ಣಿಕದ ನಿಜವಾದ ಅರ್ಥ ಏನೇ ಇರಲಿ, ಭಕ್ತರು ತಮಗೆ ಬೇಕಾದ ಹಾಗೇ ಅರ್ಥೈಸಿಕೊಳ್ಳುತ್ತಿರುವುದಕ್ಕೂ ದಶಕಗಳ ಇತಿಹಾಸವಿದೆ. ಮುಂದೆ ಓದಿ..
ಕೋವಿಡ್ ಮಾರ್ಗಸೂಚಿಯನ್ವಯ ವಿಜಯನಗರ ಜಿಲ್ಲಾಡಳಿತ ಜಾತ್ರೆ ಹಾಗೂ ಭಕ್ತರ ಪ್ರವೇಶಕ್ಕೆ ಈ ಸಲ ನಿರ್ಬಂಧವನ್ನು ಹೇರಿದ್ದರಿಂದ, ಸರಳವಾಗಿ ಕಾರ್ಣಿಕೋತ್ಸವವನ್ನು ಆಚರಿಸಲಾಯಿತು. ಸಾಮಾನ್ಯವಾಗಿ, ಈ ಉತ್ಸವಕ್ಕೆ ಲಕ್ಷಾಂತರ ಭಕ್ತರು ಹರಿದು ಬರುತ್ತಿದ್ದರು.

ಈ ಜಾತ್ರೆಯಲ್ಲಿ ನುಡಿಯಲಾಗುವ ಕಾರ್ಣಿಕ ಒಟ್ಟಾರೆಯಾಗಿ ದೇಶದ ಮುಂದಿನ ಭವಿಷ್ಯ ಎನ್ನುವ ಅವಿರತ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಹಾಗಾಗಿ, ಮೈಲಾರ ಉತ್ಸವದಲ್ಲಿ ನುಡಿಯಲಾಗುವ ಭವಿಷ್ಯದ ಬಗ್ಗೆ ಜನರಿಗೆ ಎಲ್ಲಿಲ್ಲದ ಕುತೂಹಲ.
ಈ ಬಾರಿಯೂ ದೇವಾಯಲದ ಸಂಪ್ರದಾಯದಂತೆ, ಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರಣಿಕ ನುಡಿಯುವ ಸ್ಥಳಕ್ಕೆ ಪ್ರದಕ್ಷಿಣೆ ಹಾಕಿದ ನಂತರ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಈ ಬಾರಿ 'ಮಳೆ ಬೆಳೆ ಸಂಪಾಯಿತಲೇ ಪರಾಕ್' ಎನ್ನುವ ಕಾರಣಿಕ ಹೊರಬಿದ್ದಿದೆ.
'ಮಳೆ ಬೆಳೆ ಸಂಪಾಯಿತಲೇ ಪರಾಕ್' ಎಂಬ ಕಾರಣಿಕವನ್ನು ಈ ವರ್ಷ ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿದೆ. ರೈತರ ಬಾಳು ಹಸನಾಗಲಿದೆ ಎಂಬ ಅರ್ಥದಲ್ಲಿ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದರು. ಹದಿನೈದು ಅಡಿ ಬಿಲ್ಲನ್ನು ಏರಿ ರಾಮಪ್ಪ ಗೊರವಯ್ಯ ಭವಿಷ್ಯವಾಣಿ ನುಡಿದರು.
ಕಾರಣಿಕ ನುಡಿಯುವ ಗೊರವಯ್ಯ ರಾಮಣ್ಣ, ವಿಜಯನಗರದ ಸಾಮ್ರಾಟರು ನೀಡಿದ್ದ ವಿಗ್ರಹಗಳೊಂದಿಗೆ ಹನ್ನೊಂದು ದಿನ ಉಪವಾಸವನ್ನು ಮಾಡುತ್ತಾರೆ. ದೇವಾಲಯದ ಸಿಂಹಾಸನ ಕಟ್ಟೆಯಿಂದ ಕಾರಣಿಕ ನುಡಿಯಲಾಗುವ ಸ್ಥಳಕ್ಕೆ ಸ್ವಾಮಿಯ ಜಯ ಘೋಷದೊಂದಿಗೆ ಕರೆತರಲಾಗುತ್ತದೆ. ಬಿಲ್ಲನ್ನು ಏರುವ ಗೊರವಯ್ಯ 'ಸದ್ದಲೇ' ಎಂದು ಕಾರ್ಣಿಕ ನುಡಿದು ಹಿಮ್ಮುಖವಾಗಿ ಬೀಳುತ್ತಾರೆ.












Click it and Unblock the Notifications