ಕರ್ನಾಟಕದ ಕಾಂಗ್ರೆಸ್ ಗೆಲುವು 2019ರ ಚುನಾವಣೆಗೆ ಅಡಿಗಲ್ಲು: ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 25: ಕರ್ನಾಟಕದ ಗೆಲುವು 2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಾಲಿನ ಅಡಿಗಲ್ಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಅವರು, "ಕರ್ನಾಟಕದ ಯುವ ಜನರು ರಾಹುಲ್ ಗಾಂಧಿ ಜೊತೆಗಿದ್ದಾರೆ. ಅವರು ರಾಜ್ಯದಲ್ಲಿ ಮಾಡಿರುವ ಪ್ರಚಾರ ಯುವಕರ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕರ್ನಾಟಕದ ಗೆಲುವು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಅಡಿಗಲ್ಲಾಗಲಿದೆ," ಎಂದಿದ್ದಾರೆ.
ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ: ವಿಭಾಗವಾರು ಯಾರಿಗೆ ಹೆಚ್ಚು ಸ್ಥಾನ?
"ನಾನು ಗೇಮ್ ಚೇಂಜರ್ ಅಲ್ಲ. ನಮ್ಮ ಕಾರ್ಯಕ್ರಮಗಳು ಗೇಮ್ ಚೇಂಜರ್. ನಾನು ಸರಕಾರದ ಸಾಂಕೇತಿಕ ಮುಖ್ಯಸ್ಥ ಅಷ್ಟೆ. ಜನರು ನಮ್ಮ ಬಗ್ಗೆ ಖುಷಿಯಾಗಿದ್ದಾರೆ. ನಾವು ನೀಡಿದ ಭರವಸೆಗಳನ್ನು ಇಡೇರಿಸಿದ್ದೇವೆ," ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
"ಇದೇ ಸಂದರ್ಭದಲ್ಲಿ ಅಮಿತ್ ಶಾ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, ಅಮಿತ್ ಶಾ ಉತ್ತಮ ರಣತಂತ್ರಗಾರರೇನಲ್ಲ. ಕರ್ನಾಟಕದಲ್ಲಿ ಕೋಮು ಗಲಭೆ ಬಿಟ್ಟು ಅವರು ಮಾಡಿರುವ ರಣತಂತ್ರಗಳೇನು? ಯಾವುದೂ ಇಲ್ಲ," ಎಂದು ಟೀಕಿಸಿದ್ದಾರೆ.
"ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವುದಿಲ್ಲ ಇದರ ಬಗ್ಗೆ ನಾನು ಸ್ಪಷ್ಟವಾಗಿದ್ದೇನೆ. ಹೀಗಾಗಿ ಮೈತ್ರಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಶೇಕಡಾ 100ರಷ್ಟು ನಾನು ಗೆಲ್ಲುತ್ತೇನೆ. ಎರಡೂ ಕಡೆಗಳಲ್ಲಿ ನನಗೆ ಗಟ್ಟಿಯಾದ ಎದುರಾಳಿಗಳು ಇಲ್ಲ," ಎಂದು ಅವರು ತಿಳಿಸಿದ್ದಾರೆ.
ಟೈಮ್ಸ್ ನೌ ಸಮೀಕ್ಷೆ: ಸಿಎಂ ಹುದ್ದೆಗೆ ಸಿದ್ದರಾಮಯ್ಯ ಬೆಸ್ಟ್ ಎಂದ ಜನ
ಬಿಜೆಪಿ ವಿರುದ್ಧ ಪಕ್ಷಗಳ ಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಕೋಮು ಶಕ್ತಿಗಳನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳನ್ನು ಒಟ್ಟಾಗಬೇಕು ಎಂಬುದ ನನ್ನ ಆಶಯ," ಎಂದರು.
ಜೆಡಿಎಸ್ ಶಕ್ತಿಗಳು ಕಾಂಗ್ರೆಸ್ ನಲ್ಲಿ ಪ್ರಬಲವಾಗಿವೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, "ಪಕ್ಷದಿಂದ ದೇವೇಗೌಡರು ನನ್ನ ಉಚ್ಛಾಟನೆ ಮಾಡಿದರು. ನಾನು ಅವರ ಜೊತೆಗೆ ಸಂಬಂಧ ಹೊಂದಿರಲು ಹೇಗೆ ಸಾಧ್ಯ? ನಾನು ನೂರು ಪ್ರತಿಶತ ಕಾಂಗ್ರೆಸಿಗ. ನನ್ನ ಗೆಳೆಯರೂ ಕಾಂಗ್ರೆಸಿಗರು. ಅವರೆಲ್ಲಾ ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತತೆಗೆ ಬದ್ಧವಾಗಿದ್ದಾರೆ," ಎಂದಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರಲ್ಲದವರು ಬಂದು ಪ್ರಚಾರ ಮಾಡುವುದಕ್ಕೆ ಜನರು ಒಪ್ಪುತ್ತಾರಾ ಎಂಬ ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ಸಿಎಂ, "ಇದು ಪ್ರಧಾನಿ ನರೇಂದ್ರ ಮೋದಿಯವರಿಗೂ ಅನ್ವಯಿಸುತ್ತದೆ. ಅವರ (ರಾಹುಲ್ ಗಾಂಧಿ) ಪ್ರಚಾರ ದೊಡ್ಡ ಮಟ್ಟಕ್ಕೆ ಪರಿಣಾಮ ಬೀರಿದೆ," ಎಂದು ಹೇಳಿದರು.
"ಭ್ರಷ್ಟಾಚಾರ ಒಂದು ವಿಷಯ. ಆದರೆ ನಮ್ಮ ಸರಕಾರದ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ರಾಜಕೀಯ ಕಾರಣಗಳಿಗಾಗಿ ಅವರು (ಬಿಜೆಪಿ), ಅದರಲ್ಲೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಇಂಥಹ ಆರೋಪ ಮಾಡುತ್ತಾರೆ. ಅವರು ನನ್ನನ್ನು ಸಿದ್ದರೂಪಯ್ಯ ಎಂದು ಕರೆಯುತ್ತಾರೆ. ಇದೊಂದು ಪ್ರಧಾನಿಯವರ ಬೇಜವಾಬ್ದಾರಿ ಹೇಳಿಕೆ. ಜನರ ಕಣ್ಣಲ್ಲಿ ಅವರ ಇಮೇಜ್ ಕುಂದಿದೆ," ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.