ಯಡಿಯೂರಪ್ಪ ಸರಕಾರಕ್ಕೂ ಮಳೆಗೂ ಯಾಕಿಷ್ಟು ವಿಶೇಷ ನಂಟು?
Recommended Video
ಬೆಂಗಳೂರು, ಆಗಸ್ಟ್ 07 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತದಲ್ಲಿ ಸೋಲು ಕಂಡು ಪತನಗೊಂಡಿತು. ಜುಲೈ 26ರ ಶುಕ್ರವಾರ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದರೂ ಯಡಿಯೂರಪ್ಪಗೆ ಶುಭ ಸಿಗಲಿಲ್ಲ. ಸರ್ಕಾರ ರಚನೆಯಾದ ದಿನದಿಂದ ಸಂಕಷ್ಟಗಳೇ ಅವರನ್ನು ಸ್ವಾಗತಿಸುತ್ತಿವೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಬಗ್ಗೆ ಈಗ ಟೀಕಾ ಪ್ರಹಾರಗಳನ್ನು ಆರಂಭಿಸಿವೆ.

ಪ್ರಮಾಣ ವಚನ ಸ್ವೀಕಾರ ಮಾಡಿ 13 ದಿನಗಳು ಕಳೆದರೂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ. ಸದ್ಯ ಸರ್ಕಾರದಲ್ಲಿ ಯಡಿಯೂರಪ್ಪ ಏಕಾಂಗಿ. ಆದರೂ ಅವರು ಸುಮ್ಮನೆ ಕುಳಿತಿಲ್ಲ. ಅಧಿಕಾರಿಗಳ ಸರಣಿ ಸಭೆ ನಡೆಸುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ಆಗುತ್ತಲೇ ಇದೆ.
ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಯಡಿಯೂರಪ್ಪ ದೆಹಲಿಗೆ ತೆರಳಿದ್ದರು. ಆದರೆ, ಸುಷ್ಮಾ ಸ್ವರಾಜ್ ವಿಧಿವಶರಾದ ಹಿನ್ನಲೆಯಲ್ಲಿ ಹೈಕಮಾಂಡ್ ನಾಯಕರ ಜೊತೆ ಸಭೆ ನಡೆಸದೇ ಅವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ.
ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ವಿರುದ್ಧ ವಾಗ್ದಾಳಿ ಆರಂಭಿಸಿವೆ. "ಸರ್ಕಾರ ಕಾಣೆಯಾಗಿದೆ" ಎಂದು ಜೆಡಿಎಸ್ ಟೀಕೆ ಮಾಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯೂ ಇಲ್ಲ, ಮಂತ್ರಿ ಮಂಡಲವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಯಡಿಯೂರಪ್ಪ
ತೋರಿಸಿದ ಅತಿ ಅವಸರವನ್ನು ಸಂಪುಟ ವಿಸ್ತರಣೆಗೆ ತೋರುತ್ತಿಲ್ಲವೇಕೆ? ಅತೀವೃಷ್ಟಿ-ಅನಾವೃಷ್ಟಿಯಿಂದ ರಾಜ್ಯದ ಜನರು ಸಂಕಟದಲ್ಲಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪಗೆ ಮಳೆಯ ನಂಟು : ಯಡಿಯೂರಪ್ಪಗೂ ಮಳೆಗೂ ಅದೇನೋ ನಂಟು. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದ ನಂಟು ಎಂದು ಹೇಳಬಹುದು. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
2009ರಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಲೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಆದರೆ, ಆಗ ಅವರ ಜೊತೆ ಸಚಿವ ಸಂಪುಟವಿತ್ತು. ಸಚಿವರು ಸಹ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿದ್ದರು.
ಈಗ ಸಚಿವ ಸಂಪುಟ ವಿಸ್ತರಣೆ ಆಗದ ಕಾರಣ ಯಡಿಯೂರಪ್ಪ ಏಕಾಂಗಿಯಾಗಿದ್ದಾರೆ. ಆದರೆ, ಅವರು ಕೈ ಕಟ್ಟು ಕುಳಿತಿಲ್ಲ. ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಭಾಗಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ.
ಮುಂದಿದೆ ಇನ್ನೂ ಸವಾಲು : ಯಡಿಯೂರಪ್ಪ ಸರ್ಕಾರ ರಚನೆ ಮಾಡಿ ಎರಡು ವಾರಗಳು ಕಳೆಯುತ್ತಿವೆ. ಅವರ ಮುಂದೆ ಇನ್ನೂ ಸಾಲು-ಸಾಲು ಸವಾಲುಗಳಿವೆ. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬರ ಪರಿಸ್ಥಿತಿ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಯಡಿಯೂರಪ್ಪ ಆರೋಪಿಸಿದ್ದರು.
ರೈತರ ಸಾಲಮನ್ನಾ ಯೋಜನೆ ಸರಿಯಾಗಿ ಜಾರಿಯಾಗಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ದರು. ಬದಲಾದ ಸನ್ನಿವೇಶದಲ್ಲಿ ಯಡಿಯೂರಪ್ಪ ಇವುಗಳನ್ನು ಹೇಗೆ ನಿಭಾಯಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಅನ್ನಭಾಗ್ಯ ಯೋಜನೆ, ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ಯಡಿಯೂರಪ್ಪ ವಿರೋಧಿಸಿದ್ದರು. ಎಸಿಬಿ ರಚನೆ ಲೋಕಾಯುಕ್ತವನ್ನು ಮುಚ್ಚಲು ಮಾಡಿರುವ ತಂತ್ರ ಎಂದು ಟೀಕಿಸಿದ್ದರು.
ಈಗ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಎಸಿಬಿ, ರೈತರ ಸಾಲಮನ್ನಾ ವಿಚಾರಳು ಕುರಿತು ಅವರು ಯಾವ ನಿಲುವು ತಳೆಯಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications