ಅರ್ಧ ಮುಂಬೈ ಕರ್ನಾಟಕಕ್ಕೆ ಸೇರಬೇಕು: ವಾಟಾಳ್ ನಾಗರಾಜ್
ಬೆಂಗಳೂರು, ಜನವರಿ 18: ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಶೀಘ್ರದಲ್ಲಿಯೇ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿಕೆ ನೀಡಿರುವುದರ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಡಿದೆದ್ದಿದ್ದಾರೆ. ವಾಸ್ತವವಾಗಿ ಮುಂಬೈನ ಅರ್ಧಭಾಗ ಕರ್ನಾಟಕಕ್ಕೆ ಸೇರ್ಪಡೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಮೊದಲು ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು. ಮುಂಬೈನ ಅರ್ಧಭಾಗ ಕರ್ನಾಟಕ ರಾಜ್ಯಕ್ಕೆ ಸೇರಬೇಕು. ಇದರ ಬಗ್ಗೆ ಅವರು ತೀರ್ಮಾನ ಮಾಡಲಿ. ಬಿಜೆಪಿಯವರಿಂದಾಗಿ ಕರ್ನಾಟಕ ರಾಜ್ಯ ಹಾಳಾಗುತ್ತಿದೆ. ಕನ್ನಡಿಗರ ಪರ ಎಂದು ಮುಖ್ಯಮಂತ್ರಿ ಕೇವಲ ನಾಟಕ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟುಕೊಡುವುದಿಲ್ಲ. ಬಾಳ ಠಾಕ್ರೆ ಮತ್ತೆ ಹುಟ್ಟಿಬಂದರೂ ಬೆಳಗಾವಿಯನ್ನು ಪಡೆಯಲು ಆಗುವುದಿಲ್ಲ ಎಂದಿದ್ದಾರೆ.
ಉದ್ಧವ್ ಠಾಕ್ರೆ ಹೇಳಿಕೆ ವಿಚಾರವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಎಂಇಎಸ್ನವರು ಕ್ಯಾತೆ ತೆರೆದರೆ ಅವರನ್ನು ರಾಜ್ಯದಿಂದ ಹೊರಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿನ ರಾಜಕಾರಣಿಗಳು ಮರಾಠ ಏಜೆಂಟ್ಗಳು. ನಿನ್ನೆ ನಡೆಸಿದ ಸಮಾವೇಶದಲ್ಲಿ ಅಮಿತ್ ಶಾ ಅವರು ಮರಾಠಾ ಪೇಟ ಕಟ್ಟಿದ್ದರು. ಒಬ್ಬರಾದರೂ ಇದರ ಬಗ್ಗೆ ಮಾತನಾಡಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ನಮ್ಮ ಸರ್ಕಾರದವರು ಮರಾಠ ಅಭಿವೃದ್ಧಿ ನಿಗಮ ಮಾಡುತ್ತಾರೆ. ಆದರೆ ಮಹಾರಾಷ್ಟ್ರದವರು ಬೆಳಗಾವಿ ನಮ್ಮದು ಎನ್ನುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬಹಳ ನೀಚ ಕೆಲಸ ಮಾಡುತ್ತಿದ್ದಾರೆ. ಅವರು ಕೂಡಲೇ ಸಂಪುಟ ಸಭೆ ಕರೆಯಬೇಕು. ಈ ವಿಚಾರವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications