ಮತ್ತೊಂದು ಬಂದ್ ಕರೆ ಕೊಟ್ಟ ವಾಟಾಳ್ ನಾಗರಾಜ್!
ಬೆಂಗಳೂರು, ಡಿಸೆಂಬರ್ 10 : ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮತ್ತೊಂದು ಬಂದ್ಗೆ ಕರೆ ನೀಡಿದ್ದಾರೆ. ಈಗಾಗಲೇ ಕರ್ನಾಟಕ ಬಂದ್, ರೈತರ ಪ್ರತಿಭಟನೆ ರಾಜ್ಯದಲ್ಲಿ ನಡೆದಿದೆ. ಜನವರಿ 9ಕ್ಕೆ ಮತ್ತೊಂದು ಬಂದ್ ನಡೆಯಲಿದೆ.
ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಗುರುವಾರ ಈ ಕುರಿತು ಮಾಹಿತಿ ನೀಡಿದರು. "ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವುದನ್ನು ವಿರೋಧಿಸಿ ಜನವರಿ 9ರಂದು ರೈಲು ಬಂದ್ ನಡೆಯಲಿದೆ" ಎಂದರು.

"ಮುಂಜಾನೆ 9 ಗಂಟೆಯಿಂದ ರಾತ್ರಿ 9 ಗಂಟೆ ತನಕ ರಾಜ್ಯದಲ್ಲಿ ರೈಲು ಬಂದ್ ಮಾಡಲಾಗುತ್ತದೆ. ರೈಲ್ವೆ ಸಂಚಾರ ಸಂಪೂರ್ಣ ಬಂದ್ ಮಾಡುತ್ತೇವೆ. ಈ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ" ಎಂದು ವಾಟಾಳ್ ನಾಗರಾಜ್ ಹೇಳಿದರು.
ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಡಿಸೆಂಬರ್ 5ರಂದು ಕನ್ನಡ ಒಕ್ಕೂಟ ಕರ್ನಾಟಕ ಬಂದ್ ಕರೆ ನೀಡಿತ್ತು. ಆದರೆ, ರಾಜ್ಯದಲ್ಲಿ ಬಂದ್ಗೆ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಬಂದ್ ಸಂಪೂರ್ಣ ವಿಫಲವಾಗಿತ್ತು.
ಡಿಸೆಂಬರ್ 5ರ ಬಂದ್ನ ಮುಂದಾಳತ್ವವನ್ನು ವಾಟಾಳ್ ನಾಗರಾಜ್ ವಹಿಸಿದ್ದರು. ಆದರೆ, ರಕ್ಷಣಾ ವೇದಿಕೆಯ ನಾರಾಯಣ ಗೌಡ, ವಾಟಾಳ್ ನಾಗರಾಜ್ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದಾಗಿ ಪ್ರತಿಭಟನೆ ಜಾಥಾ ಸಹ ನಡೆಸಲು ಅವಕಾಶ ಸಿಕ್ಕಿರಲಿಲ್ಲ.
ಮರಾಠ ಪ್ರಾಧಿಕಾರ ರಚನೆ ವಾಪಸ್ ಪಡೆಯಬೇಕು, ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಜನವರಿ 9ರಂದು ರೈಲು ಬಂದ್ಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಸರ್ಕಾರ ನೇರ ಕಾರಣ; "ಡಿಸೆಂಬರ್ 5ರ ಕರ್ನಾಟಕ ಬಂದ್ ವಿಫಲವಾಗಲು ಸರ್ಕಾರ ನೇರ ಕಾರಣ. ಬಂದ್ ವಿಫಲಗೊಳಿಸಲು ಸರ್ಕಾರ ಪಣ ತೊಟ್ಟಿತ್ತು. ಪೊಲೀಸರು ದಬ್ಬಾಳಿಕೆ ನಡೆಸಿದರು" ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
"ಇಲ್ಲಿರುವ ತಮಿಳರು, ಮಲಯಾಳಿಗಳು, ಗುಜರಾತಿಗಳು ಬಿಜೆಪಿಯ ಏಜೆಂಟ್ಗಳು. ಜನವರಿ 9ರಂದು ಕನ್ನಡ ಪರ ಸಂಘಟನೆಗಳ ಸದಸ್ಯರು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತೇವೆ" ಎಂದು ವಾಟಾಳ್ ನಾಗರಾಜ್ ಹೇಳಿದರು.












Click it and Unblock the Notifications