ಬಡವರಿಗೆ ಬಟ್ಟೆ ನೀಡಲು ಬಂತು 'ವಸ್ತ್ರ ಭಾಗ್ಯ' ಯೋಜನೆ
ಬೆಂಗಳೂರು, ಜೂ. 12 : ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿರುವ ಕರ್ನಾಟಕ ಸರ್ಕಾರ ಸದ್ಯ 'ವಸ್ತ್ರಭಾಗ್ಯ' ಯೋಜನೆ ಜಾರಿಗೆ ತರಲು ಮುಂದಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳ ಸದಸ್ಯರಿಗೆ ವಸ್ತ್ರ ನೀಡುವ ಯೋಜನೆ ಇದಾಗಿದೆ.
ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜವಳಿ ಸಚಿವ ಬಾಬೂರಾವ್ ಚಿಂಚನಸೂರ ಅವರು ಈ ಕುರಿತು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಅನ್ವಯ ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. [ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ]

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳ ಸದಸ್ಯರಿಗೆ ವಸ್ತ್ರ ನೀಡುವ ಯೋಜನೆ ಇದಾಗಿದ್ದು, ವಸ್ತ್ರಭಾಗ್ಯ ಎಂದು ಹೆಸರಿಡಲು ಚಿಂತನೆ ನಡೆಸಲಾಗಿದೆ. ಮಹಿಳೆಯರಿಗೆ ಸೀರೆ ಮತ್ತು ರವಿಕೆ, ಪುರುಷರಿಗೆ ಪಂಚೆ, ಶಲ್ಯ ಮತ್ತು ಅಂಗಿಯನ್ನು ಯೋಜನೆಯಡಿ ನೀಡಲಾಗುತ್ತದೆ ಎಂದರು.
ತಮಿಳುನಾಡು ರಾಜ್ಯದಲ್ಲಿ ಉಚಿತವಾಗಿ ಬಟ್ಟೆ ನೀಡುವ ಇಂತಹ ಯೋಜನೆ ಜಾರಿಯಲ್ಲಿದೆ. ಆದರೆ, ರಾಜ್ಯದಲ್ಲಿ ಬಟ್ಟೆಯನ್ನು ಬಡವರಿಗೆ ರಿಯಾಯಿತಿ ದರದಲ್ಲಿ ನೀಡಬೇಕೋ? ಅಥವಾ ಸಂಪೂರ್ಣ ಉಚಿತವಾಗಿ ನೀಡಬೇಕೋ? ಎಂದು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವರು ವಿವರಣೆ ನೀಡಿದರು.
ಈ ಯೋಜನೆಗೆ ಅಂದಾಜು 100 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ ಎಷ್ಟು ಜೊತೆ ವಸ್ತ್ರ ನೀಡಬೇಕು? ಎಂದು ಇನ್ನೂ ತಿರ್ಮಾನ ಕೈಗೊಂಡಿಲ್ಲ ಎಂದರು. ವಸ್ತ್ರವನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳುವುದಿಲ್ಲ, ನಮ್ಮ ನೇಕಾರರಿಂದಲೇ ಸಿದ್ಧಪಡಿಸಬೇಕು ಎಂದು ಉದ್ದೇಶವಿದೆ ಎಂದು ಹೇಳಿದರು.












Click it and Unblock the Notifications