ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶರಣರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ಚಿತ್ರದುರ್ಗ, ಸೆಪ್ಟೆಂಬರ್ 01: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಎದುರುಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರಘಾ ಶರಣರನ್ನು ಬಂಧಿಸಬೇಕೆಂದು ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ.
ಅಕ್ಕಮಹಾದೇವಿ ವಸತಿ ನಿಲಯದಲ್ಲಿನ ವಿದ್ಯಾರ್ಥಿನಿಯರ ಮೇಲೆ ಲೌಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿ ಐದಾರು ದಿನ ಕಳೆದರೂ ಇನ್ನೂ ಸ್ವಾಮೀಜಿಯನ್ನು ಬಂಧಿಸದ ಕಾರಣ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಬಂಧನಕ್ಕೆ ಆಗ್ರಹಿಸಿವೆ.
ಚಿತ್ರದುರ್ಗದಲ್ಲಿ ಓಬವ್ವ ವೃತ್ತದಲ್ಲಿ ರಾಷ್ಟ್ರೀಯ ಪ್ರಬುದ್ಧ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುರುಘಾ ಶರಣರು ಹಾಗೂ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Breaking: ಮುರುಘಾ ಶ್ರೀ ವಿರುದ್ಧ NCPCR ಸ್ವಯಂಪ್ರೇರಿತ ದೂರು
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಐದು ದಿನ ಕಳೆದಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ, ಇದು ಪೊಲೀಸ್ ಇಲಾಖೆ ಆರೋಪಿಗಳ ಪರ ನಿಂತಿದ್ದಾರೆ ಎಂಬ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಕಾನೂನು ಎಲ್ಲರಿಗೂ ಒಂದೇ, ಸಂವಿಧಾನದಲ್ಲಿ ಎಲ್ಲರೂ ಸಮಾನರು ಎನ್ನುತ್ತಿದ್ದ ಮುರುಘಾ ಶರಣರ ಪ್ರಕರಣದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ತಕ್ತಪಡಿಸಿದರು.
ಸರಕಾರದ ವಿರುದ್ಧ ಆಕ್ರೋಶ
ಪೋಕ್ಸೊ ಮತ್ತು ಎಸ್ಸಿ/ಎಸ್ಟಿ ತನಿಖೆಯನ್ನು ಹಳಿ ತಪ್ಪಿಸುವ ಮೂಲಕ ರಾಜ್ಯ ಬಿಜೆಪಿ ಸರಕಾರ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಸ್ವಾಮೀಜಿಯನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ದಲಿತ ಸಂಘಟನೆಗಳು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದು, ತಕ್ಷಣೆವೇ ಸ್ವಾಮೀಜಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪೋಕ್ಸೋ ಪ್ರಕರಣ ದಾಖಲಾದರೂ ಇನ್ನೂ ಸ್ವಾಮೀಜಿಗಳನ್ನು ಬಂಧಿಸದಿರುವ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳು ನಗರದ ಟೌನ್ ಹಾಲ್ನ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದ್ದು, ಸ್ವಾಮೀಜಿ ಬಂಧನಕ್ಕೆ ಒತ್ತಾಯ ಮಾಡಿದರು.
ಸೆ.2ರಂದು ಬೃಹತ್ ಪ್ರತಿಭಟನೆ
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಶರಣರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೆಪ್ಟೆಂಬರ್ 2 (ನಾಳೆ) ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದಲಿತ, ವಿದ್ಯಾರ್ಥಿ, ಮಹಿಳಾ, ರೈತ, ಕಾರ್ಮಿಕ ಕೃಷಿ ಕೂಲಿಕಾರ, ಅಲ್ಪಸಂಖ್ಯಾತ, ನೌಕರರ ಹಾಗೂ ವಕೀಲ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಬೃಹತ್ ಪ್ರತಿ ಭಟನೆ ಹಮ್ಮಿಕೊಂಡಿವೆ.
ಸೆಪ್ಟೆಂಬರ್ 2 ಕ್ಕೆ ಮುಂದೂಡಿಕೆ
ಪೋಕ್ಸೋ ಕಾಯ್ದೆ ಪ್ರಕರಣ ಹಿನ್ನಲೆಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನುಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಸೆಪ್ಟೆಂಬರ್ 2 ಕ್ಕೆ ಮುಂದೂಡಿದೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಅರ್ಜಿಯನ್ನು ನ್ಯಾಯಾಧೀಶರು ಕೈಗೆತ್ತಿಕೊಂಡರು. ಸಂತ್ರಸ್ತ ಬಾಲಕಿಯರನ್ನು ಕೋರ್ಟ್ಗೆ ಹಾಜರುಪಡಿಸಲಾಯಿತು. ಬೆಳಗ್ಗೆ 11.40 ಸರಿಯಾಗಿ ವಿಚಾರಣೆ ಆರಂಭವಾಯಿತು. ಸಂತ್ರಸ್ತ ಬಾಲಕಿಯರ ಪರವಾಗಿ ಹೈಕೋರ್ಟ್ ವಕೀಲ ಶ್ರೀನಿವಾಸ್ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವಕೀಲರು ಹಾಜರಾದರು. ಸಂತ್ರಸ್ತ ಬಾಲಕಿಯರು ಹಾಗೂ ಅವರ ತಂದೆಯ ಅಭಿಪ್ರಾಯ ಪರಿಗಣಿಸಿ ಜಾಮೀನು ತಕರಾರು ಅರ್ಜಿ ಸಲ್ಲಿಕೆಗೆ ಒಂದು ದಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಲಾಯಿತು.
ಸುಮೋಟೋ ಕೇಸ್
ಪೋಕ್ಸೋ ಪ್ರಕರಣ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಸ್ವಾಮೀಜಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ. ಮುರುಘಾ ಶರಣ ಸ್ವಾಮೀಜಿ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಪ್ರಕರಣದ ವರದಿಯನ್ನು ವಾರದೊಳಗೆ ನೀಡುವಂತೆ ಚಿತ್ರದುರ್ಗದ ಎಸ್ಪಿಗೆ ನೋಟಿಸ್ ನೀಡಿದೆ. ಈಗಾಗಲೇ ಸ್ವಾಮೀಜಿ ವಿರುದ್ಧ ಪೋಕ್ಸೋ ಮತ್ತು ಅಟ್ರಾಸಿಟಿ ಪ್ರಕರಣ ಕೂಡ ದಾಖಲಾಗಿದೆ.