Vande Bharat; ಧಾರವಾಡ-ಹುಬ್ಬಳ್ಳಿ ಮಾರ್ಗದ ವೇಗ ಪರೀಕ್ಷೆ ಯಶಸ್ವಿ
ಬೆಂಗಳೂರು, ಡಿಸೆಂಬರ್ 20; 2023ರಲ್ಲಿ ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಓಡುವುದು ಖಚಿತವಾಗಿದೆ. ಈ ಕುರಿತು ಈಗಾಗಲೇ ಘೋಷಣೆ ಮಾಡಿರುವ ರೈಲ್ವೆ ಇಲಾಖೆ ಇದಕ್ಕೆ ಪೂರಕವಾದ ಕಾಮಗಾರಿ ಕೈಗೊಂಡಿದೆ.
ಕರ್ನಾಟಕದ ಮೊದಲ ವಂದೇ ಭಾರತ್ ರೈಲು ಈಗಾಗಲೇ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚಾರ ನಡೆಸುತ್ತಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲನ್ನು 2023ರ ಮಾರ್ಚ್ನಲ್ಲಿ ಓಡಿಸಲಾಗುತ್ತದೆ ರೈಲ್ವೆ ಇಲಾಖೆ ಘೋಷಣೆ ಮಾಡಿದೆ.
ಬೆಂಗಳೂರು-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲನ್ನು ಧಾರವಾಡದ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯೂ ಇದೆ. ಆದರೆ ಈ ಕುರಿತು ರೈಲ್ವೆ ಇಲಾಖೆ ಇನ್ನೂ ಯಾವುದೇ ಆದೇಶ ಪ್ರಕಟಿಸಿಲ್ಲ. ಬೆಂಗಳೂರು-ಹುಬ್ಬಳ್ಳಿ ನಡುವೆ ರೈಲು ಓಡಿಸಲು ಪೂರಕ ಕಾಮಗಾರಿ ನಡೆಯುತ್ತಿದೆ.
ವಂದೇ ಭಾರತ್ ರೈಲು ಸಂಚಾರಕ್ಕೆ ಪೂರಕವಾಗಿ ಹುಬ್ಬಳ್ಳಿ-ಧಾರವಾಡ ರೈಲ್ವೇ ಹಳಿಯಲ್ಲಿ ಮಂಗಳವಾರ ವೇಗದ ಪರೀಕ್ಷೆಯನ್ನು ನಡೆಸಲಾಗಿದೆ. ವೇಗದ ಪರೀಕ್ಷೆ ಯಶಸ್ವಿಯಾಗಿದೆ ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
|
ವಿಡಿಯೋ ಟ್ವೀಟ್ ಮಾಡಿದ ಸಚಿವರು
ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮಂಗಳವಾರ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ರೈಲ್ವೇ ಟ್ರ್ಯಾಕ್ನಲ್ಲಿ ರೈಲಿನ ವೇಗದ ಪರೀಕ್ಷೆ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಈ ಮೂಲಕ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸಂಚಾರ ನಡೆಸಲು ವೇಗದ ಪರೀಕ್ಷೆಯನ್ನು ಭಾರತೀಯ ರೈಲ್ವೆ ಆರಂಭಿಸಿದೆ ಎಂಬುದು ಖಚಿತವಾಗಿದೆ.

ಗಂಟೆಗೆ 120 ಕಿ. ಮೀ. ವೇಗ
ತಮ್ಮ ಟ್ವೀಟ್ನಲ್ಲಿ ಪ್ರಹ್ಲಾದ್ ಜೋಶಿ ಮಾರ್ಚ್ 2023ರಲ್ಲಿ ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ ಪೂರಕವಾಗಿ ಟ್ರ್ಯಾಕ್ ಉನ್ನತೀಕರಿಸಲಾಗಿದ್ದು, ಗಂಟೆಗೆ 120 ಕಿ. ಮೀ. ವೇಗಕ್ಕೆ ಅನುಗುಣವಾಗಿ ಟ್ರ್ಯಾಕ್ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ರೈಲ್ವೆ ತುಮಕೂರು-ಹುಬ್ಬಳ್ಳಿ ನಡುವೆ ಜೋಡಿ ಹಳಿ ಕಾಮಗಾರಿ ನಡೆಸುತ್ತಿದೆ. ಕೆಲವು ಕಡೆ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಬಳಿಕ ವಂದೇ ಭಾರತ್ ರೈಲು ಸಂಚಾರದ ದಿನಾಂಕ ನಿಗದಿಯಾಗಲಿದೆ.

ವೇಗ ನಿಯಂತ್ರಕ ತೆರವು ಕಾರ್ಯ ನಡೆದಿತ್ತು
ಕಳೆದ ವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒಂದು ಟ್ವೀಟ್ ಮಾಡಿ ವಂದೇ ಭಾರತ್ ರೈಲು ಸಂಚಾರದ ಅಪ್ಡೇಟ್ ಕೊಟ್ಟಿದ್ದರು. ನಮ್ಮ ಧಾರವಾಡ- ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅತ್ಯಾಧುನಿಕ, ಅತಿವೇಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ರೇಲ್ವೆ ಸಚಿವಾಲಯ ತೀವ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದರು.
ಹಾವೇರಿ ಮತ್ತು ಬ್ಯಾಡಗಿ ರೈಲು ನಿಲ್ದಾಣಗಳ ನಡುವೆ ಹಳಿಯ ವೇಗ ನಿಯಂತ್ರಕವನ್ನು ತೆಗೆಯುವ ಮತ್ತು ಹೆಚ್ಚಿನ ವೇಗಕ್ಕೆ ಅನಕೂಲವಾಗುವ ಕಾರ್ಯ ಆರಂಭವಾಗಿದೆ. ಇದರಿಂದ ಗಂಟೆಗೆ 130 ಕಿ. ಮೀ. ವೇಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಅನಕೂಲವಾಗಲಿದೆ ಎಂದು ತಿಳಿಸಿದ್ದರು.

ವಂದೇ ಭಾರತ್ ರೈಲಿನ ಬಗ್ಗೆ ಸಚಿವರ ಘೋಷಣೆ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನವೆಂಬರ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ರಾಜ್ಯದ ರೈಲು ಯೋಜನೆಗಳ ವಿವರ ಪಡೆದಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಸಂಚಾರದ ಬಗ್ಗೆ ಮಾತನಾಡಿದ್ದರು.
"ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಜೋಡಿಮಾರ್ಗ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಓಡಿಸಲು ಯೋಜಿಸಲಾಗಿದೆ. ಮಾರ್ಚ್ 2023ರೊಳಗೆ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಈ ಮಾರ್ಗದಲ್ಲಿ ಓಡಿಸಲು ಅನುವಾಗುವಂತೆ ವಿದ್ಯುದ್ದೀಕರಣ ಸಂಬಂಧಿಸಿದ ಕೆಲವು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ದಿನಾಂಕ, ನಿಲ್ದಾಣ ಅಂತಿಮವಾಗಿಲ್ಲ
ರೈಲ್ವೆ ಇಲಾಖೆ ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆಯ ಕಚೇರಿಯಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಕೇಳಿತ್ತು. ಕಳೆದ ತಿಂಗಳು ಈ ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದೆ.
ಕಾಮಗಾರಿಗಳು ಪೂರ್ಣಗೊಂಡ ಬಳಿಕ ರೈಲು ಸಂಚಾರದ ದಿನಾಂಕ, ದರ, ನಿಲ್ದಾಣ ಮುಂತಾದ ಮಾಹಿತಿಗಳು ಲಭ್ಯವಾಗಲಿದೆ. ರಾಜಧಾನಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ರೈಲು ಸಂಚಾರ ಯಾವಾಗ ಆರಂಭವಾಗಲಿದೆ? ಎಂದು ಜನರು ಕಾದು ಕುಳಿತಿದ್ದಾರೆ.












Click it and Unblock the Notifications