ಬೆಂಗಳೂರು ರೋಡ್ಶೋನಲ್ಲಿ 25,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ಉತ್ತರ ಪ್ರದೇಶ ಸರ್ಕಾರ
ಉತ್ತರ ಪ್ರದೇಶ ಸರ್ಕಾರ ಬೆಂಗಳೂರಿನಲ್ಲಿ ತನ್ನ ಹೂಡಿಕೆ ರೋಡ್ಶೋನಲ್ಲಿ 25,000 ಕೋಟಿ ರೂಪಾಯಿ ಮೌಲ್ಯದ ತಿಳುವಳಿಕೆ ಪತ್ರ (ಎಂಒಯು) ಗೆ ಸಹಿ ಹಾಕಿದೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.
ಬೆಂಗಳೂರು, ಜನವರಿ. 25: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಪೂರ್ವಭಾವಿಯಾಗಿ ಬೆಂಗಳೂರಿನ ರೋಡ್ಶೋನಲ್ಲಿ 33 ಉದ್ಯಮಿಗಳೊಂದಿಗೆ 25,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.
25,000 ಕೋಟಿ ರೂಪಾಯಿ ಮೌಲ್ಯದ ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಮಾಹಿತಿ ತಿಳಿಸಿದೆ.
"ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂಡ ಬಿ2ಜಿ ಸಭೆಗಳ ಮೂಲಕ ಉದ್ಯಮಿಗಳೊಂದಿಗೆ 25,000 ಕೋಟಿ ಮೌಲ್ಯದ ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಿದ್ದಾರೆ" ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ತಂಡವು ಈಗಾಗಲೇ ಮುಂಬೈನಲ್ಲಿ ತನ್ನ ಹೂಡಿಕೆ ರೋಡ್ಶೋಗಳನ್ನು ಪ್ರಾರಂಭಿಸಿದೆ. ಇದುವರೆಗೆ ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ದೆಹಲಿ, ಹೈದರಾಬಾದ್ ಮತ್ತು ಅಹಮದಾಬಾದ್ ಸೇರಿದಂತೆ ಹಲವಾರು ಕಡೆ ರೋಡ್ಶೋಗಳನ್ನು ನಡೆಸಿ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾಪಗಳನ್ನು ತನ್ನತ್ತ ಸೆಳೆದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾರ್ಗದರ್ಶನದಲ್ಲಿ ಅವರ ತಂಡವು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದು, ಇದು ಈವರೆಗೆ 17 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾಪಗಳನ್ನು ಆಕರ್ಷಿಸಿದೆ. ಫೆಬ್ರವರಿ 10 ರಿಂದ 12 ರವರೆಗೆ ಲಕ್ನೋದಲ್ಲಿ ಹೂಡಿಕೆದಾರರ ಶೃಂಗಸಭೆ ನಡೆಯಲಿದೆ.
ಬೆಂಗಳೂರಿನಲ್ಲಿ ತಂಡದ ನೇತೃತ್ವ ವಹಿಸಿದ್ದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಉದ್ಯಮಿಗಳಿಗೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಮುಂದಿನ 25 ವರ್ಷಗಳ ಕಾಲ ಯುಪಿಯಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶ ಎಂದು ಹೇಳಿದ್ದಾರೆ.

"ಕಾನೂನು ಮತ್ತು ಸುವ್ಯವಸ್ಥೆಯ ವಿಷಯದಲ್ಲಿ, ಯುಪಿ ಇಂದು ಗಲಭೆ ಮುಕ್ತ ಮತ್ತು ಅಪರಾಧ ಮುಕ್ತ ರಾಜ್ಯವಾಗಿದೆ. ಪ್ರವಾಸೋದ್ಯಮ, ಕೃಷಿ, ರಕ್ಷಣೆ, ಲಾಜಿಸ್ಟಿಕ್ಸ್, ಮೂಲಸೌಕರ್ಯ, ರಿಯಲ್ ಎಸ್ಟೇಟ್, ಆರೋಗ್ಯ, ಐಟಿ ವಲಯದಲ್ಲಿ ಹೂಡಿಕೆ ಮಾಡಲು ಇದು ಅತ್ಯಂತ ಅನುಕೂಲಕರ ಸಮಯ. ಉತ್ತರ ಪ್ರದೇಶವನ್ನು ಭಾರತದ ಬೆಳವಣಿಗೆಯ ಎಂಜಿನ್ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ" ಎಂದು ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.
"ಉತ್ತರ ಪ್ರದೇಶ ಎಲ್ಲಾ ಅಂಶಗಳಲ್ಲಿ ಹೂಡಿಕೆ ಮಾಡಲು ಉತ್ತಮ ಸ್ಥಳವಾಗಿದೆ. ದೇಶದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲು ರಾಜ್ಯ ಸಿದ್ಧವಾಗಿದೆ. ಪ್ರಧಾನಿಯವರ ಸಂಕಲ್ಪದಂತೆ, ಭಾರತದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಯುಪಿ ಸಿದ್ಧವಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications