ಅಪೌಷ್ಟಿಕತೆ ನಿವಾರಣೆಗಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲು ಆದೇಶ
ಬೆಂಗಳೂರು, ನ.25: ಅಪೌಷ್ಟಿಕತೆ ನಿವಾರಣೆಗಾಗಿ ಏಳು ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಬಹುಪೋಷಕಾಂಶಗಳ ನ್ಯೂನತೆ ಕೊರತೆ ಇರುವುದು ಕಂಡುಬಂದಿದೆ. ಈ ಕಾರಣದಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಒಂದು ತಿಂಗಳಲ್ಲಿ 12 ಬೇಯಿಸಿದ ಮೊಟ್ಟೆ ಕೊಡುವ ಮೂಲಕ ಅವರಲ್ಲಿ ಪೌಷ್ಟಿಕತೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಮೊಟ್ಟೆ ತಿನ್ನಲು ನಿರಾಕರಿಸುವ ಮಕ್ಕಳಿಗೆ ಬಾಳೆಹಣ್ಣು ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್. ವಿಶಾಲ್ ಆದೇಶ ಹೊರಡಿಸಿದ್ದಾರೆ.
ಈ ಜಿಲ್ಲೆಗಳಲ್ಲಿ ಮೊಟ್ಟೆ ವಿತರಣೆ:
ಅಪೌಷ್ಟಿಕತೆ ಹೆಚ್ಚಾಗಿ ಇರುವಂತಹ ಜಿಲ್ಲೆಗಳನ್ನು ಕ್ರಮವಾಗಿ ಗುರುತಿಸಲಾಗಿದೆ. ಯಾದಗಿರಿ, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡಲಾಗುತ್ತದೆ. ಈ ಏಳು ಜಿಲ್ಲೆಗಳು ಸೇರಿ 14,44,322 ವಿದ್ಯಾರ್ಥಿಗಳಿದ್ದಾರೆ.

ಡಿ.1ರಿಂದ ಮೊಟ್ಟೆ ಕೊಡುವ ಯೋಜನೆಯನ್ನು ಪ್ರಾರಂಭಿಸಿ, 2022ರ ಮಾರ್ಚ್ 30ರವರೆಗೂ ಯೋಜನೆ ಮುಂದುವರಿಸಬೇಕು. ಶಾಲಾ ಹಂತದಲ್ಲಿ ಮೊಟ್ಟೆ, ಬಾಳೆಹಣ್ಣು ಖರೀದಿಗೆ ಖರೀದಿ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಎಸ್ಡಿಎಂಸಿ ಮುಖ್ಯಸ್ಥರು ಅಧ್ಯಕ್ಷರಾಗಿರಬೇಕು. ಶಾಲೆಯ ಮುಖ್ಯ ಶಿಕ್ಷಕ, ಇಬ್ಬರು ಪೋಷಕರು, ಇಬ್ಬರು ಹಿರಿಯ ಶಿಕ್ಷಕರು (ಇದರಲ್ಲಿ ಒಬ್ಬ ಶಿಕ್ಷಕಿ ಇರಬೇಕು) ಹಾಗೂ ಇಬ್ಬರು ತಾಯಂದಿರನ್ನು ಒಳಗೊಂಡ ಸಮಿತಿ ರಚಿಸಿ ಗುಣಮಟ್ಟದ ಪದಾರ್ಥಗಳನ್ನು ಖರೀದಿಸಬೇಕು.
ಪ್ರತಿ ವಿದ್ಯಾರ್ಥಿಗೆ 6 ರೂ. ಖರ್ಚು:
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್- ಮಧ್ಯಾಹ್ನದ ಉಪಹಾರದ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60ರಷ್ಟು ಮತ್ತು ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ಹಂಚಿಕೆಯಡಿ ಈ ಯೋಜನೆ ರೂಪಿಸಲಾಗಿದೆ. ಪ್ರತಿ ವಿದ್ಯಾರ್ಥಿಯ ಒಂದು ಮೊಟ್ಟೆಯ ವೆಚ್ಚ 6 ರೂ. ಎಂದು ನಿಗದಿ ಮಾಡಲಾಗಿದೆ. ಅದೇ ರೀತಿ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ 6 ರೂ. ಮೀರದಂತೆ ಒಂದು ಅಥವಾ ಎರಡು ಬಾಳೆಹಣ್ಣು ನೀಡಬೇಕು ಎಂದು ಸೂಚಿಸಲಾಗಿದೆ. ಇದಕ್ಕಾಗಿ 39.86 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಅದನ್ನು ಈ ಏಳು ಜಿಲ್ಲೆಗಳಿಗೆ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಜಿಲ್ಲಾವಾರು ಬಿಡುಗಡೆ ಮಾಡಲಾಗಿದೆ.

ಒಂದು ವಾರಕ್ಕೆ ಬೇಕಾಗುವಷ್ಟು ಅಗತ್ಯ ಪ್ರಮಾಣದಲ್ಲಿ ಮೊಟ್ಟೆ ಮತ್ತು ಬಾಳೆ ಹಣ್ಣು ಖರೀದಿಸಿಟ್ಟುಕೊಳ್ಳಬೇಕು. ಪ್ರತಿ ತಿಂಗಳ ವೇಳಾಪಟ್ಟಿಯಂತೆ ಮೊಟ್ಟೆ ವಿತರಿಸುವಾಗ ಸ್ಥಳೀಯ ಜನರ ಆಹಾರ ಪದ್ಧತಿಯಂತೆ ವಾರದಲ್ಲಿ ಮೊಟ್ಟೆ ವಿತರಿಸುವ ದಿನಗಳನ್ನು ನಿಗದಿಪಡಿಸಿ ಬಿಸಿಯೂಟದ ಜೊತೆಗೆ ಬೇಯಿಸಿ, ಸಿಪ್ಪೆ ಸುಲಿದ ಮೊಟ್ಟೆ ನೀಡಬೇಕು ಎಂದು ಸೂಚಿಸಲಾಗಿದೆ.
ಮೊಟ್ಟೆ ವಿತರಿಸುವ ಮೊದಲು ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯ ಪಡೆಯಬೇಕು. ಮೊಟ್ಟೆ ತಿನ್ನುವ ಬಗ್ಗೆ ಅವರಿಂದ ಒಪ್ಪಿಗೆ ಪಡೆದುಕೊಳ್ಳಬೇಕು. ಮೊಟ್ಟೆ ತಿನ್ನುವುದಿಲ್ಲ ಎಂದಾಗ ಮಾತ್ರ ಅವರಿಗೆ ಬಾಳೆಹಣ್ಣು ವಿತರಿಸಬೇಕು. ಈ ಕುರಿತು ಪ್ರತ್ಯೇಕವಾಗಿ ದಾಖಲೆ ನಿರ್ವಹಿಸಬೇಕು ಎಂದು ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ.

ದಾಖಲೆ ನಿರ್ವಹಣೆ:
ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಆರಂಭವಾಗುವ ಮೊದಲ ವಾರದಲ್ಲಿ ತರಗತಿವಾರು ಎಲ್ಲಾ ವಿದ್ಯಾರ್ಥಿಗಳ ದೇಹತೂಕ ಮತ್ತು ಎತ್ತರದ ವಿವರ ದಾಖಲಿಸಬೇಕು. ಪ್ರತಿ ವಾರವೂ ಇದರ ಮಾಪನ ಮಾಡುತ್ತಿರಬೇಕು. ಮಾರ್ಚ್ ಕೊನೆಯ ವಾರದಲ್ಲಿ ಮಾಪನ ಪಡೆದು ಆರಂಭದಲ್ಲಿ ಮತ್ತು ಕೊನೆಯಲ್ಲಿ ವಿದ್ಯಾರ್ಥಿಗಳ ತೂಕ ಮತ್ತು ಎತ್ತರದಲ್ಲಿ ಆದಂತಹ ವ್ಯತ್ಯಾಸದ ಬಗ್ಗೆ ವಿಶ್ಲೇಷಣಾತ್ಮಕ ವರದಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications