ಕನ್ನಡದಲ್ಲೇ ಯುಪಿಎಸ್ಸಿ ಬರೆದ ಭೈರಪ್ಪ ಸಂದರ್ಶನ
ಬೆಂಗಳೂರು, ಮೇ 12: ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆ ಬರೆದು ರಾಜ್ಯಕ್ಕೆ ಹೆಮ್ಮೆ ತಂದ ಕೋಲಾರದ ಭೈರಪ್ಪ ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ್ದಾರೆ. ತಮ್ಮ ಸಾಧನೆಗೆ ಕಾರಣರಾದವರನ್ನು ನೆನೆಯುತ್ತ ಮುಂದಿನ ಹೆಜ್ಜೆಗಳ ಬಗ್ಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯಾಗುವ ಕನಸು ಹೊತ್ತುಕೊಂಡಿರುವ ಭೈರಪ್ಪ ಕೋಲಾರ ಜಿಲ್ಲೆ ಮಾಲೂರು ತಾಲೂಕು ಪಡುವನಹಳ್ಳಿಯವರು. ರಸಾಯನಶಾಸ್ತ್ರವನ್ನು ಸಹ ಕನ್ನಡದಲ್ಲೇ ಬರೆದ ಭೈರಪ್ಪ ಬೆಂಗಳೂರಿನ ವಿಜಯನಗರದಲ್ಲಿ ವಿದ್ಯಾರ್ಥಿಗಳಿಗೆ ಕೆಪಿಎಸ್ ಸಿ ಕೋಚಿಂಗ್ ನೀಡುತ್ತಿದ್ದಾರೆ.[ಯುಪಿಎಸ್ಸಿಯಲ್ಲಿ 56ನೇ ಶ್ರೇಯಾಂಕ ಪಡೆದ ಮೈಸೂರಿನ ಹುಡುಗ]
ತಹಶೀಲ್ದಾರ್ ಹುದ್ದೆ: 2012 ರಲ್ಲೇ ಭೈರಪ್ಪ ಕೆ ಪಿ ಎಸ್ ಸಿಯಲ್ಲಿ ಉತ್ತೀರ್ಣರಾಗಿ ತಹಶೀಲ್ದಾರ್ ಹುದ್ದೆಗೆ ನೇಮಕವಾಗಿದ್ದರು. ಆದರೆ ಕೆಪಿಎಸ್ ಸಿ ಗೊಂದಲಗಳು ಅವರಿಗೆ ಅಡಚಣೆ ಉಂಟುಮಾಡಿದವು. ಛಲಬಿಡದ ಭೈರಪ್ಪ 2015 ರಲ್ಲಿ ಯುಪಿಎಸ್ಸಿ ಬರೆದು 1037 ನೇ ಶ್ರೇಯಾಂಕ ತಮ್ಮದಾಗಿರಿಸಿಕೊಂಡಿದ್ದಾರೆ.

ನಿಲ್ಲದ ಓದಿನ ಹಸಿವು: ಆದರೆ ಭೈರಪ್ಪ ಓದಿನ ಹಸಿವು, ಡಿಸಿಯಾಗುವ ಹಂಬಲ ಇಲ್ಲಿಗೆ ನಿಲ್ಲುವುದಿಲ್ಲ. ಮುಂಬರುವ ಅಂದರೆ 2016ರ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಇನ್ನು ಹೆಚ್ಚಿನ ಶ್ರೇಯಾಂಕ ಪಡೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ.
ಯಾಕೆ ಡಿಸಿಯಾಗಬೇಕು?: ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವುದು ನನ್ನ ಮುಂದಿರುವ ಗುರಿ. ಇದೇ ಕಾರಣಕ್ಕೆ ಜಿಲ್ಲಾಧಿಕಾರಿಯಾಗಬೇಕು ಎಂದು ಭೈರಪ್ಪ ಹೇಳುತ್ತಾರೆ.[ನಿಡ್ಡೋಡಿಯ ರೈತನ ಮಗಳು ಮಿಶಲ್ ಯುಪಿಎಸ್ಸಿ ಸಾಧಕಿ!]
ಕನ್ನಡದಲ್ಲೇ ಬರೆದದ್ದಕ್ಕೆ ಸಂತೃಪ್ತಿಯಿದೆ: ರಸಾಯನಶಾಸ್ತ್ರವನ್ನು ಕನ್ನಡದಲ್ಲಿಯೇ ಬರೆದು ಉತ್ತೀರ್ಣನಾಗಿದ್ದೇನೆ. ಕನ್ನಡದಲ್ಲಿ ಬೇರೆಯವರು ಬರೆಯಬೇಕು ಎಂಬ ಆಸೆ ಇದೆ ಎಂದು ಭೈರಪ್ಪ ಹೇಳುತ್ತಾರೆ.[ಯುಪಿಎಸ್ಸಿ: ಕರ್ನಾಟಕದ ಸಾಧಕರ ಪಟ್ಟಿ]
ವಿಜಯನಗರದಲ್ಲಿ ಟೀಚರ್: ಸದ್ಯ ಭೈರಪ್ಪ ವಿಜಯನಗರದ ಜೈಸ್ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳಿಗೆ ಕೆ ಪಿಎಸ್ ಸಿ ತರಬೇತಿಯನ್ನು ನೀಡುತ್ತಿದ್ದಾರೆ. ನಾನು ತರಬೇತಿ ನೀಡಿದ 159 ವಿದ್ಯಾರ್ಥಿಗಳು ಯುಪಿಎಸ್ ಸಿ ಬರೆಯಲು ಆಯ್ಕೆಯಾಗಿದ್ದಾರೆ ಎನ್ನುವಾಗ ಅವರ ಮುಖದಲ್ಲಿ ಸಂತೃಪ್ತಿಯ ಕಳೆ.
ಧನ್ಯವಾದ ಹೇಳಲು ಮರೆಯಲ್ಲ: ನನಗೆ ಸ್ಫೂರ್ತಿ ತುಂಬಿದ ಸಂಪಿಗೆ ಹಳ್ಳಿಯ ಇನ್ಸ್ ಪೆಕ್ಟರ್ ಜಿ ಕೇಶವ್ ಮೂರ್ತಿ, ತಮ್ಮ ಅಣ್ಣ ಮತ್ತು ಕುಟುಂಬದವರ ಸಹಕಾರಕ್ಕೆ ಧನ್ಯವಾದ ಹೇಳಲು ಮರೆಯಲ್ಲ.












Click it and Unblock the Notifications