ಅರಿಶಿನ ಗಣೇಶನ ಫೋಟೋ ಕಳಿಸಿ; ಬಹುಮಾನ ಗೆಲ್ಲಿ
ಬೆಂಗಳೂರು, ಸೆಪ್ಟೆಂಬರ್ 06; ಕೋವಿಡ್ ಪರಿಸ್ಥಿತಿ ನಡುವೆಯೂ ಕರ್ನಾಟಕ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತು ಬದ್ಧ ಅನುಮತಿ ನೀಡಿದೆ. ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿಸಲು ಗಣೇಶ ಚೌತಿಯಂದು ಅರಿಶಿನದಿಂದ ಪುಟ್ಟ ಗಣಪತಿ ಮಾಡಿ ಪೂಜಿಸೋಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಈ ಕುರಿತು ರಾಜಾದ್ಯಂತ ಅಭಿಯಾನವನ್ನು ಆರಂಭಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ 'ಅರಿಶಿನ ಗಣೇಶ' ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 8 ರಿಂದ 10ರ ಬೆಳಗ್ಗೆ 6 ಗಂಟೆಯಿಂದ 10 ರವರೆಗೆ ಸಾರ್ವಜನಿಕರು ತಾವು ತಯಾರಿಸಿದ ಅರಿಶಿನ ಗಣೇಶ ವಿಗ್ರಹದ ಫೋಟೋವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳಿಸಬಹುದು. ಅರಿಶಿನ ಗಣೇಶನ ಫೋಟೋವನ್ನು ಅಪ್ಲೋಡ್ ಮಾಡಿ ಆಕರ್ಷಕ ಬಹುಮಾನವನ್ನು ಜನರು ಗೆಲ್ಲಬಹುದಾಗಿದೆ.

ಜಲ ಮಾಲಿನ್ಯ ತಪ್ಪಿಸಲು ಪಿಒಪಿ ಮತ್ತು ಬಣ್ಣದ ಗಣೇಶ ಮೂರ್ತಿಗಳನ್ನು ಬಳಸುವುದನ್ನು ನಿರ್ಬಂಧಿಸಿದ್ದು, ರೋಗ ನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪರಿಚಯಿಸಲಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಮನೆಗಳಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತ ಗೋಧಿ ಹಿಟ್ಟು ಅಥವಾ ರಾಗಿ ಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶ ವಿಗ್ರಹಗಳನ್ನು ಪೂಜೆ ಮಾಡಿದಲ್ಲಿ ಕುಟುಂಬದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಗಣಪತಿಯನ್ನು ಸಿಂಗರಿಸಲು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ತ್ಯಜಿಸಿ. ಹೂವು, ಪತ್ರೆಗಳನ್ನು ಬಳಸುವುದು ಹಾಗೂ ಅರಿಶಿನ ಗಣೇಶನನ್ನು ಕೂರಿಸಲು ಪೀಠವಾಗಿ ತೆಂಗಿನ ಚಿಪ್ಪಿನ ಕರಟವನ್ನು ಉಪಯೋಗಿಸಬಹುದಾಗಿದೆ. ರೋಗನಿರೋಧಕ ಪರಿಕರಗಳನ್ನು ಬಳಸಿ ಮನೆಯಲ್ಲಿಯೇ ಗಣೇಶನ ವಿಗ್ರಹ ಮಾಡಿ ಮನೆಯಲ್ಲೇ ವಿಸರ್ಜಿಸಿದರೆ ಸಾಮಾಜಿಕ ಅಂತರ ಕಾಪಾಡಬಹುದಾಗಿದೆ.
ವಿಸರ್ಜಿತ ನೀರಿನಿಂದ ಮನೆ ಶುಚಿ ಮಾಡಿಕೊಂಡರೆ ಕ್ರಿಮಿನಾಶಕವಾಗಿಯೂ ಬಳಕೆಗೆ ಬರುತ್ತದೆ. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸ್ವಯಂ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು, ನಿವಾಸಿ ಸಂಘಗಳ ಪ್ರತಿನಿಧಿಗಳ ಸಹಕಾರದೊಂದಿಗೆ ಈ ಬಾರಿ ವಿಶಿಷ್ಟ ರೀತಿಯಲ್ಲಿ ಗಣೇಶನನ್ನು ಪೂಜಿಸುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಲಾಗಿದೆ.
ಈ ಬಾರಿ ವಿಶೇಷವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 10 ಲಕ್ಷ ಅರಿಶಿನ ಗಣೇಶ ಮೂರ್ತಿಗಳನ್ನು ನಿಗದಿತ ಸಮಯದಲ್ಲಿ ನಿರ್ಮಿಸುವ ಗುರಿಯೊಂದಿಗೆ ಅಭಿಯಾನ ಆರಂಭಿಸಿದ್ದು, ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಲಾಗಿದೆ.
ಪೋಟೋಗಳನ್ನು ಅಪ್ಲೋಡ್ ಮಾಡಲು ವಿಳಾಸ; http://kspcb.karnataka.gov.in, YouTube@kspcbkarnataka, facebook@kspcbofficial, Twitter@karnatakakspcb, Instagram :kspcb_officeal
ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿರುವ ಸರ್ಕಾರ ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಾಲಯದೊಳಗೆ ಮತ್ತು ತಮ್ಮ-ತಮ್ಮ ಮನೆಗಳಲ್ಲಿ ಅಥವ ಸರ್ಕಾರಿ/ ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬೇಕು ಎಂದು ಹೇಳಿದೆ.
ಗಣೇಶ ಉತ್ಸವ ಆಚರಣೆಯ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಸಾಂಸ್ಕೃತಿಕ/ ನೃತ್ಯ ಮುಖ್ಯವಾಗಿ ಡಿ. ಜೆ. ಯ ಮೂಲಕ ಹಾಗೂ ಇನ್ನಿತರ ಯಾವುದೇ ಮನೋರಂಜನಾ ಕಾರ್ಯಕ್ರಮ ಆಯೋಜನೆ ಮಾಡುವಂತಿಲ್ಲ. ಯಾವುದೇ ಮೆರವಣಿಗೆಯನ್ನು ಮಾಡತಕ್ಕದ್ದಲ್ಲ ಎಂದು ಸರ್ಕಾರ ಹೇಳಿದೆ. 20 ಜನಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.












Click it and Unblock the Notifications