ಕೆಪಿಜೆಪಿ ಸ್ಥಾಪನೆ ಮಾಡಿದ ಉಪೇಂದ್ರ : ಯಾರು, ಏನು ಹೇಳಿದರು?
ಬೆಂಗಳೂರು, ಅಕ್ಟೋಬರ್ 31 : ನಟ, ನಿರ್ದೇಶಕ ಉಪೇಂದ್ರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವನ್ನು ಮಂಗಳವಾರ ಸ್ಥಾಪನೆ ಮಾಡಿದ್ದಾರೆ. ಉಪೇಂದ್ರ ಪಕ್ಷ ಸ್ಥಾಪನೆ ಬಗ್ಗೆ ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಮಂಗಳವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ಕ್ಕೆ ಚಾಲನೆ ನೀಡಿದರು. ನವೆಂಬರ್ 10ರಂದು ಪಕ್ಷದ ವೆಬ್ ಸೈಟ್, ಅಪ್ಲಿಕೇಶನ್ ಬಿಡುಗಡೆಯಾಗಲಿದ್ದು, ಎಲ್ಲಾ ಯೋಜನೆಗಳು ಅದರಲ್ಲಿ ಸಿಗಲಿವೆ.
'ರಾಜಕಾರಣ ಮಾಡಿದರೆ ಶತ್ರುಗಳು ಹುಟ್ಟುಕೊಳ್ಳುತ್ತಾರೆ. ನಮ್ಮದು ಪ್ರಜಾಕೀಯ, ಎಲ್ಲರೂ ಒಟ್ಟಿಗೆ ಮುಂದುವರಿಯುವುದು. ಪಾರದರ್ಶಕ ಆಡಳಿತಕ್ಕೆ ಮುಂದಾಗುವುದೇ ಪಕ್ಷದ ಸಿದ್ಧಾಂತ' ಎಂದು ಉಪೇಂದ್ರ ಹೇಳಿದರು.
ವಿವಿಧ ರಾಜಕೀಯ ಪಕ್ಷದ ಮುಖಂಡರು ಉಪೇಂದ್ರ ಅವರು ಪಕ್ಷ ಸ್ಥಾಪನೆ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ಬಗ್ಗೆ ಪ್ರತಿಕ್ರಿಯೆ ನೀಡಲು ಇದು ಸರಿಯಾದ ಸಮಯವಲ್ಲ ಎಂದು ಹೇಳಿದ್ದಾರೆ. ಯಾರು, ಏನು ಹೇಳಿದರು ಚಿತ್ರಗಳಲ್ಲಿ ನೋಡಿ...

ಪರಮೇಶ್ವರ ಹೇಳಿದ್ದೇನು?
'ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಎಷ್ಟೊಂದು ಪಕ್ಷಗಳು ಆರಂಭ ಆಗುತ್ತಿವೆ. ಉಪೇಂದ್ರ ಅವರ ಪಕ್ಷದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆ ಪಕ್ಷದ ಅಧ್ಯಕ್ಷರು ಉಪೇಂದ್ರ ಅಂತ ಗೊತ್ತು. ಸದಸ್ಯರು ಯಾರು?' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪ್ರಶ್ನೆ ಮಾಡಿದರು.

'ದೇಶ ಮೊದಲು ಎಂಬುವುದು ಗುರಿಯಾಗಲಿ'
ಒನ್ ಇಂಡಿಯಾ ಕನ್ನಡದ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಅವರು, 'ನಮ್ಮ ಸಂವಿಧಾನ ವ್ಯವಸ್ಥೆಯಲ್ಲಿ ಪಕ್ಷ ಕಟ್ಟಲು ಸ್ವತಂತ್ರವಿದೆ. ಕಲಾವಿದರಾಗಿ ಉಪೇಂದ್ರರನ್ನು ನಾವು ಗೌರವಿಸಿದ್ದೇವೆ. ಪಕ್ಷದ ಬಗ್ಗೆ ಪ್ರತಿಕ್ರಿಯೆ ನೀಡಲು ಸಮಯ ಇನ್ನೂ ಪಕ್ವವಾಗಿಲ್ಲ. ಟೀಕೆ ಮಾಡಲು ಅಥವ ಹೊಗಳಲು ಏನೂ ಮಾಡಿಲ್ಲ. ಬಿಜೆಪಿ ದೇಶ ಮೊದಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ಉಪೇಂದ್ರ ಅವರ ಪಕ್ಷವೂ ಅದೇ ಉದ್ದೇಶದಿಂದ ಕೆಲಸ ಮಾಡಲಿ' ಎಂದರು.

ರಾಜಕಾರಣಕ್ಕೆ ಅಪ್ರಸ್ತುತ
'ಕರ್ನಾಟಕದ ರಾಜಕಾರಣಕ್ಕೆ ಉಪೇಂದ್ರ ಅವರು ಅಪ್ರಸ್ತುತ. ಪಕ್ಷ ಸ್ಥಾಪನೆ ಬಗ್ಗೆ ಪ್ರತಿಕ್ರಿಯೆ ನೀಡಲು ಇದು ಸಕಾಲವಲ್ಲ' ಎಂದು ಜೆಡಿಎಸ್ ವಕ್ತಾರ, ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಒನ್ ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದರು.

‘224 ಕ್ಷೇತ್ರದಲ್ಲಿ ಸ್ಪರ್ಧಿಸುವ ಚಿಂತನೆ ಇದೆ'
ಪಕ್ಷ ಸ್ಥಾಪನೆ ಮಾಡಿದ ಉಪೇಂದ್ರ ಅವರು '224 ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಲೋಚನೆ ಇದೆ. ಈಗಾಗಲೇ ನೂರಾರು ಅಭ್ಯರ್ಥಿಗಳು ಸಂಪರ್ಕದಲ್ಲಿದ್ದಾರೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು? ಎಂಬುದು ಇನ್ನೂ ಖಚಿತವಾಗಿಲ್ಲ' ಎಂದು ಹೇಳಿದರು.












Click it and Unblock the Notifications