ಕರ್ನಾಟಕದಲ್ಲಿ ಅಕಾಲಿಕ ಮಳೆಗೆ ಕಾರಣ 'ಲಾ ನಿನಾ': ಇಲ್ಲಿದೆ ವಿವರ
ಬೆಂಗಳೂರು, ನ.20: ರಾಜ್ಯದಲ್ಲಿ ಈ ವೇಳೆಗಾಗಲೇ ಚಳಿಗಾಲ ಪ್ರಾರಂಭವಾಗಬೇಕಿತ್ತು. ಆದರೆ, ಎಲ್ಲೆಡೆ ಅಕಾಲಿಕವಾಗಿ ಭಾರೀ ಮಳೆ ಸುರಿದು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುತ್ತದೆ. ಆದರೆ, ಇದಕ್ಕೆ ವಿಜ್ಞಾನ ಏನು ಹೇಳುತ್ತದೆ ಎಂದು ಹುಡುಕಿದಾಗ ಹವಾಮಾನ ತಜ್ಞರು ವೈಜ್ಙಾನಿಕ ಕಾರಣವನ್ನು ಪತ್ತೆಹಚ್ಚಿದ್ದಾರೆ.
ಹವಾಮಾನದ ವಾಡಿಕೆ ಪ್ರಕಾರ ಜೂನ್ನಿಂದ ಸೆಪ್ಟಂಬರ್ವರೆಗೂ ಮುಂಗಾರು ಅವಧಿ ಇರುತ್ತದೆ. ಬಳಿಕ ಹಿಂಗಾರು ಅವಧಿ ಆರಂಭವಾಗುತ್ತದೆ. ಹಿಂಗಾರು ಅವಧಿಯ ಬೆಳೆಗಳಿಗೆ ಈ ಅವಧಿಯಲ್ಲೂ ಅಲ್ಪಸ್ವಲ್ಪ ಮಳೆ ಅವಶ್ಯಕ. ಆದರೆ, ಈ ರೀತಿ ಕೆಡುಕು ಉಂಟುಮಾಡುವಂತಹ ಮಳೆಯನ್ನು ಯಾರೂ ಬಯಸುವುದಿಲ್ಲ. ವಾಸ್ತವವಾಗಿ ಚಳಿಗಾಲ ಪ್ರಾರಂಭವಾಗಬೇಕಿದ್ದ ಈ ಅವಧಿಯಲ್ಲಿ ಎಲ್ಲೆಡೆ ಧಾರಾಕಾರ ಮಳೆ, ಪ್ರವಾಹ, ಬೆಳೆನಷ್ಟ, ಬೆಟ್ಟ ಗುಡ್ಡಗಳ ಕುಸಿತದಂತಹ ಅವಾಂತರಗಳು ಸೃಷ್ಟಿಸುತ್ತಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರಗಳನ್ನು ಸೃಷ್ಟಿಸುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಕೆರೆ ಕಟ್ಟೆಗಳು ತುಂಬಿಕೊಳ್ಳುತ್ತಿವೆ. ಮಳೆ ಇಲ್ಲದೆ ಒಣಗಿ ಹೋಗಿದ್ದ ಕೆರೆಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಚಿತ್ರಾವತಿ, ಪಾಲಾರ್ ನದಿಗಳಲ್ಲಿ ಈ ಹಿಂದೆ ಕಾಣದಷ್ಟು ನೀರು ಹರಿಯುತ್ತಿವೆ. ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ರೈತರ ಅಂತರ್ಜಲ ಬಳಿಕೆ ಕಡಿಮೆ ಮಾಡಿದೆ. ಅಧಿಕ ಮಳೆಯಿಂದ ಒಳಿತೂ ಸಹ ಮತ್ತೊಂದು ಆಯಾಮದಲ್ಲಿ ನಡೆಯುತ್ತಿದೆ.
ರಾಜ್ಯದಲ್ಲಿ ಬಹುತೇಕ ಹಿಂಗಾರು ಅವಧಿಯ ಮಳೆ ಉತ್ತರ ಒಳನಾಡಿನಲ್ಲಿ ಹೆಚ್ಚಾಗಿ ಇರುತ್ತದೆ. ಉತ್ತರ ಭಾಗದ ಜಿಲ್ಲೆಗಳು ಈ ಮಳೆಯನ್ನು ಅವಲಂಬಿಸಿ ಹಿಂಗಾರು ಬೆಳೆ ಬೆಳೆಯುತ್ತಾರೆ. ಆದರೆ, ಈ ವರ್ಷ ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಕೋಲಾರ ಸಹಿತ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಉಂಟುಮಾಡಿದೆ. ಬೆಂಗಳೂರಿನಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಸೂರ್ಯನನ್ನು ನೋಡುವುದೇ ಅಪರೂಪವಾಗಿದೆ.
ನಮಗೆ ಮಳೆಯಾಗಬೇಕಾದರೆ ಬಂಗಾಳಕೊಲ್ಲಿ ಅಥವಾ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಮಳೆ ಬರುತ್ತದೆ. ಕೆಲವೊಮ್ಮೆ ಅತಿಯಾದ ಉಷ್ಣಾಂಶದಿಂದಲೂ ಸ್ಥಳೀಯವಾಗಿ ಮೋಡಗಟ್ಟಿ ಮಳೆಯಾಗುತ್ತದೆ. ಆದರೆ, ಇದರೊಂದಿಗೆ ಮತ್ತೊಂದು ವೈಜ್ಞಾನಿಕ ಸತ್ಯವೂ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು, ಮಳೆಯ ಮುನ್ಸೂಚನೆ ಬಗ್ಗೆ ಮತ್ತಷ್ಟು ವೈಜ್ಞಾನಿಕ ಮುನ್ಸೂಚನೆಗಳನ್ನು ನೀಡಲು ಸರ್ಕಾರ ಸ್ಥೂಲವಾದ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕಾದ ಅಗತ್ಯವಿದೆ.
ಅಕಾಲಿಕ ಮಳೆಗೆ 'ಲಾ ನಿನಾ' ಕಾರಣ
"ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಮಳೆ ಇರುತ್ತದೆ. ಆದರೆ, ಈ ಮಟ್ಟಿಗೆ ಮಳೆ ಇರುವುದಿಲ್ಲ. ವೈಜ್ಞಾನಿಕವಾಗಿ 'ಎಲ್ ನಿನೊ' (EL Nino) ಮತ್ತು ಲಾ ನಿನಾ (LA Nina) ಎಂಬ ಅಂಶಗಳು ಇವೆ. ನವೆಂಬರ್ ತಿಂಗಳಲ್ಲಿ ಸುರಿಯುತ್ತಿರುವ ಈ ಧಾರಾಕಾರ ಮಳೆಗೆ ಲಾ ನಿನೊ ಕಾರಣ" ಎಂದು ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ, ಹವಾಮಾನ ತಜ್ಞ ವಿ.ಎಸ್. ಪ್ರಕಾಶ್ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
'ಎಲ್ ನಿನೊ' ಇದ್ದಾಗ ಭಾರತದ ದಕ್ಷಿಣ ಭಾಗದಲ್ಲಿ ಅಂದರೆ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಮಳೆ ಇರುವುದಿಲ್ಲ. ಎಲ್ಲೆಡೆ ಬಿಸಿಲು ಸಾಕಷ್ಟು ಇರುತ್ತದೆ. ಅಗತ್ಯದಷ್ಟು ಮಳೆ ಬಾರದೆ ಬೆಳೆಗಳು ಒಣಗಿ ಬರಗಾಲದ ಛಾಯೆ ಸೃಷ್ಟಿಸಿರುತ್ತದೆ. ಅದೇ ರೀತಿ 'ಲಾ ನಿನಾ' ಇದ್ದಾಗ ಈ ರೀತಿ ಧಾರಾಕಾರ ಮಳೆಯಾಗಿ ಅವಾಂತರಗಳನ್ನು ಸೃಷ್ಟಿಸುತ್ತದೆ. ಸಮುದ್ರದ ಉಷ್ಣಾಂಶ ಮತ್ತು ಭೂಮಿಯ ಉಷ್ಣಾಂಶ ಸೇರಿ ಒಂದು ರೀತಿಯಲ್ಲಿ ನಿರೀಕ್ಷೆಗೂ ಮೀರಿದ, ಯಾವುದೇ ಮುನ್ಸೂಚನೆಯನ್ನೂ ಕೊಡುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ ಮಳೆ ತರುತ್ತದೆ. ಈ ಬಗ್ಗೆ ಇನ್ನೂ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಸರ್ಕಾರಗಳು ಮುಂದಾಗಬೇಕಿದೆ. ಆಗ ಮಾತ್ರ ಈ ರೀತಿಯ ಪ್ರಕೋಪಗಳಿಗೆ ಮತ್ತಷ್ಟು ತಯಾರಾಗಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪ್ರಕಾಶ್.
2009ರಲ್ಲೂ ಭಾರೀ ಮಳೆ:
ರಾಜ್ಯದಲ್ಲಿ 2009ರ ಸೆಪ್ಟೆಂಬರ್ 29-30ರಂದು ಸುರಿದ ಭಾರಿ ಮಳೆಗೆ ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರಿಸಿ ಹೋಗಿದ್ದವು. ಈಗಿನ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಜನರು ಮನೆಮಠಗಳನ್ನು ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದರು. ಸರ್ಕಾರಗಳು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಮಾಡಿದರೂ ಸಾಕಷ್ಟು ಸಾವು ನೋವು ಸಂಭವಿಸಿದರು. ಸಾವಿರಾರು ಕೋಟಿ ನಷ್ಟ ಸಂಭವಿಸುತ್ತು. ಆಗಲೂ ಸಹ ಲಾ ನಿನಾ ಕಾರಣವಾಗಿತ್ತು.
50 ವರ್ಷದಲ್ಲೇ ಅತ್ಯಧಿಕ ಮಳೆ:
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯ ಪ್ರಕಾರ ಅ.1ರಿಂದ ನ.19ರವರೆಗೆ ರಾಜ್ಯದಲ್ಲಿ 164 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ವರ್ಷ 281 ಮಿ.ಮೀ. ಮಳೆಯಾಗಿದ್ದು, ಶೇ 78ರಷ್ಟು ಅಧಿಕ ಮಳೆ ಬಿದ್ದಿದೆ. ಇದು 50 ವರ್ಷಗಳಲ್ಲೇ ಅತ್ಯಧಿಕ ಮಳೆ ಎನ್ನಲಾಗಿದೆ.