DK Shivakumar: ಪತ್ರಕರ್ತರ ಮೇಲೆ ದರ್ಪ; ಡಿ.ಕೆ. ಶಿವಕುಮಾರ್ ವಿರುದ್ಧ ದೂರು ಕೊಟ್ಟ ಶೋಭಾ ಕರಂದ್ಲಾಜೆ
ಬೆಂಗಳೂರು, ಏಪ್ರಿಲ್ 26: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಭರಾಟೆಯ ಜೊತೆಗೆ ರಾಜಕೀಯ ಪಕ್ಷಗಳು ಮತ್ತು ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪತ್ರಕರ್ತರ ಮೇಲೆ ಕನಕಪುರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ದರ್ಪ ತೋರಿದ್ದಾರೆ ಎಂದು ಆರೋಪಿಸಿ, ರಾಜ್ಯ ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು ಕೊಟ್ಟಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಕರಂದ್ಲಾಜೆ ಸುದ್ದಿಗೋಷ್ಠಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, "ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಗೆ ತಡವಾಗಿ ಬಂದಿದ್ದಲ್ಲದೇ, ಯಾವ ಪತ್ರಕರ್ತರು ಸುದ್ದಿಗೋಷ್ಠಿಯಿಂದ ಹೊರಹೋಗಿದ್ದಾರೆ ಅವರ ಹೆಸರು ಕೊಡಿ. ಅವರ ಮ್ಯಾನೇಜ್ಮೆಂಟ್ ಜೊತೆ ಮಾತನಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ 4ನೇ ಅಂಗಕ್ಕೆ ಮಾಡಿದ ಅವಮಾನ," ಎಂದು ತಿಳಿಸಿದರು.
"ಪತ್ರಕರ್ತರ ಜೊತೆ ನಾವಿದ್ದೇವೆ, ಮ್ಯಾನೇಜ್ಮೆಂಟ್ಗಳಿಂದ ತೊಂದರೆ ಕೊಡುವುದನ್ನು ಜನ ಒಪ್ಪುವುದಿಲ್ಲ. ಪತ್ರಿಕೋದ್ಯಮ ಸ್ವಾತಂತ್ರ್ಯಕ್ಕೆ ಮಾಡಿದ ಅವಮಾನ ಮತ್ತು ಅವಹೇಳನ. ತಕ್ಷಣವೇ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು, ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ," ಎಂದು ಶೋಭಾ ಕರಂದ್ಲಾಜೆ ಹೇಳಿದರು.
ನಂತರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತು ಮುಂದುವರೆಸಿ ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ 58 ಲಕ್ಷ ಬೂತ್ನ ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ. ಆಯಾ ಭಾಗದಲ್ಲಿ ಎಲ್ಇಡಿ ಪರದೆ ಅಳವಡಿಕೆಯ ಮೂಲಕ ಸಂವಾದ ಮಾಡಲಿದ್ದಾರೆ.

"24 ಲಕ್ಷ ಕಾರ್ಯಕರ್ತರಿಗೆ ನರೇಂದ್ರ ಮೋದಿ ಸಂವಾದದ ಆ್ಯಪ್ನ್ ಲಿಂಕ್ ಕಳುಹಿಸಿದ್ದೇವೆ. ಎಲ್ಇಡಿ ಪರದೆ ಹಾಕುವ ಸ್ಥಳದಲ್ಲಿ 1,500 ಕಾರ್ಯಕರ್ತರನ್ನು ಸೇರಿಸಲು ಯೋಚಿಸಲಾಗಿದೆ. ಬೂತ್ ಮಟ್ಟಗಳಲ್ಲಿ ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ. ಅಭ್ಯರ್ಥಿಗಳು ಎಲ್ಲರ ಮನೆಗೆ ಹೋಗುವುದಕ್ಕೆ ಆಗುವುದಿಲ್ಲ. ಆದರೆ ನಮ್ಮ ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಪ್ರಚಾರ ಮಾಡುತ್ತಾರೆ," ಎಂದು ವಿವರಿಸಿದರು.
ಏಪ್ರಿಲ್ 27ರಂದು ಕಾರ್ಯಕರ್ತರೊಂದಿಗೆ ನರೇಂದ್ರ ಮೋದಿ ಸಂವಾದ
ದೇಶದಲ್ಲಿ ಅತಿ ಹೆಚ್ಚಿನ ಕಾರ್ಯಕರ್ತರ ಪಕ್ಷವೆಂದರೆ ಅಂದರೆ ಬಿಜೆಪಿ. ಕಾರ್ಯಕರ್ತರ ಶ್ರಮದಲ್ಲೇ ಗೆಲ್ಲುವ ಪಕ್ಷ ನಮ್ಮದು. ಕರ್ನಾಟಕದಲ್ಲಿ ಮತ್ತೊಮ್ಮೆ ಪೂರ್ಣಪ್ರಮಾಣದ ಸರ್ಕಾರ ಬರಬೇಕು ಎಂಬುದು ಪ್ರಧಾನಿಯವರ ಆಶಯ. ಸರ್ಕಾರ ತರಲು ಕಾರ್ಯಕರ್ತರು ಶ್ರಮಪಡಬೇಕು. ಕಾರ್ಯಕರ್ತರ ಜೊತೆ ನರೇಂದ್ರ ಮೋದಿ ಬೆರೆಯಲು ಸಿದ್ಧರಿದ್ದಾರೆ. ಅವರು ಕೂಡ ಪ್ರವಾಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಗುರುವಾರ, ಏಪ್ರಿಲ್ 27ರಂದು ಸಂವಾದದ ಮೂಲಕ ಕಾರ್ಯಕರ್ತರಿಗೆ ನರೇಂದ್ರ ಮೋದಿ ಶಕ್ತಿ ತುಂಬಲಿದ್ದಾರೆ. ಬೆಂಗಳೂರಿನ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕರ್ತರ ಜೊತೆ ನೇರವಾಗಿ ಪ್ರಧಾನಿ ಮೋದಿ ಮಾತನಾಡುತ್ತಾರೆ. 58 ಸಾವಿರ ಬೂತ್ಗಳಲ್ಲಿ ಈ ಸಂವಾದ ನಡೆಯಲಿದೆ. ಪೂರ್ಣಪ್ರಮಾಣದಲ್ಲಿ ಸರ್ಕಾರ ಬರಲು ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.












Click it and Unblock the Notifications