ಸುಮಲತಾರನ್ನು ನೋಡಿ ಜೆಡಿಎಸ್ ಸಾಕಷ್ಟು ಕಲಿಯಬೇಕು : ಡಿವಿಎಸ್
Recommended Video
ಬೆಂಗಳೂರು, ಜೂನ್ 09 : 'ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರ ಪ್ರಬುದ್ಧತೆಯನ್ನು ನೋಡಿ ಜೆಡಿಎಸ್ನವರು ಕಲಿಯಬೇಕು' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಯಾವ ಪಕ್ಷಕ್ಕೂ ಸೇರಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ ಎಂದು ಸುಮಲತಾ ಹೇಳಿದ್ದಾರೆ. ಇದನ್ನು ನೋಡಿ ಜೆಡಿಎಸ್ನವರು ಕಲಿಯಬೇಕು' ಎಂದರು.
'ಜೆಡಿಎಸ್ ಈ ಜನ್ಮ ಪೂರ್ತಿ ಸುಮಲತಾ ಅವರಿಂದ ಕಲಿಯಲು ಸಾಧ್ಯವಿಲ್ಲ. ಆದರೆ, ಸ್ವಲ್ಪವಾದರೂ ಕಲಿಯಿರಿ. ಮಂಡ್ಯದಲ್ಲಿ ಜನರು ಕಪಾಳಮೋಕ್ಷ ಮಾಡಿದರೂ ಬುದ್ಧಿ ಬಂದಿಲ್ಲ' ಎಂದು ಟೀಕಿಸಿದರು.

'ನಿಖಿಲ್ ಕುಮಾರಸ್ವಾಮಿ ಇಷ್ಟು ದೊಡ್ಡ ರಾಜಕಾರಣಿ ಆದರಲ್ಲ ನನಗೆ ಆಶ್ಚರ್ಯ ಆಗುತ್ತಿದೆ. ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವರು ನಿಖಿಲ್. ಸಿನಿಮಾದಲ್ಲಿ ರಾಜಕಾರಣ ಮಾಡಿರಬಹುದು. ಆದರೆ, ರಾಜಕಾರಣವನ್ನು ಸಿನಿಮಾ ರೀತಿ ಮಾಡಲು ಸಾಧ್ಯವಿಲ್ಲ' ಎಂದು ಸಲಹೆ ನೀಡಿದರು.
'ಸಂಪುಟ ವಿಸ್ತರಣೆ ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳಲು ಅಡಿಗಲ್ಲು ಹಾಕಿದ ಹಾಗೆ. ಅವರವರು ಜಗಳ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಉಳಿಸಲು ಹೋಗುವ ಅವರ ಸಾಹಸವೇ ಅವರನ್ನು ಮುಳುಗಿಸುತ್ತದೆ' ಎಂದು ಸದಾನಂದ ಗೌಡರು ಭವಿಷ್ಯ ನುಡಿದರು.
'ಬರಗಾಲದಿಂದಾಗಿ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಕ್ಷೇತ್ರಗಳಿಗೆ ಭೇಟಿ ನೀಡಿದರೆ ಇದರ ಅರಿವಾಗುತ್ತದೆ. ರಾಜ್ಯ ಸರ್ಕಾರ ಜನರ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ್ಲ. ಇದನ್ನು ಗಮನಿಸಿಯೇ ಲೋಕಸಭಾ ಚುನಾವಣೆಯಲ್ಲಿ ಜನರು ಅವರನ್ನು ರಿಜೆಕ್ಟ್ ಮಾಡಿದ್ದಾರೆ' ಎಂದು ಹೇಳಿದರು.












Click it and Unblock the Notifications