ನಿಮ್ಮ ಕೈಯಲ್ಲಿ ಅದೆಷ್ಟು ಶಕ್ತಿ ಇದೆ? ತೋರಿಸಿಬಿಡಿ ಒಂದ್ಸಾರಿ ನೋಡೋಣ: ಕಾಂಗ್ರೆಸ್ ನಾಯಕರಿಗೆ ಜೋಶಿ ಸವಾಲ್
ಹುಬ್ಬಳ್ಳಿ, ಮಾರ್ಚ್ 26: ಪ್ರಧಾನಿ ಮೋದಿ ಅವರನ್ನು ದ್ವೇಷಿಸುತ್ತಲೇ ಇದ್ದೀರಿ. ನಿಮ್ಮ ಕೈಯಲ್ಲಿ ಅದೆಷ್ಟು ಶಕ್ತಿ ಇದೆ? ತೋರಿಸಿಬಿಡಿ ಒಂದ್ಸಾರಿ ನೋಡೋಣ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಜೋಶಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಒಬ್ಬೊಬ್ಬರೇ ನಾಯಕರು ನರೇಂದ್ರ ಮೋದಿ ಅವರ ಮೇಲೆ ದ್ವೇಷ ಕಾರುತ್ತಿದ್ದಾರೆ. ಸೇಡಿನ ಮನೋಭಾವ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಅಂದು ಸಿಎಂ ಸಿದ್ದರಾಮಯ್ಯ ಅವರು ಮೋದಿ ಅವರನ್ನು ದೇಶದ ಪ್ರಧಾನಿ ಎಂದೂ ನೋಡದೆ, ಏಕ ವಚನದಲ್ಲಿ ಮಾತನಾಡಿದರು. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮೋದಿ ಮೋದಿ ಎಂದೂ ಜೈಕಾರ ಹಾಕುವ ಯುವ ಪಡೆಗೆ ಕಪಾಳಕ್ಕೆ ಹೊಡೆಯಿರಿ ಎಂದು ಪ್ರಚೋದನಕಾರಿ ಕರೆ ಕೊಟ್ಟಿದ್ದಾರೆ. ಈ ಮೂಲಕ ಕರುನಾಡ ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಶೇ.80ರಷ್ಟು ಯುವ ಪಡೆ ಮೋದಿಗೆ ಜೈಕಾರ ಹಾಕುತ್ತಿದ್ದಾರೆ, ದೇಶದಲ್ಲಿ ಶೇ.70-80ರಷ್ಟು ಯುವಕರು ಮೋದಿ ಮೋದಿ ಎಂದು ಕೂಗುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಾರ್ಯಕ್ರಮದಲ್ಲೂ ಸ್ವಯಂ ಪ್ರೇರಣೆಯಿಂದ ಮೋದಿ ಮೋದಿ ಎಂದು ಘೋಷಣೆ ಹಾಕುತ್ತಾರೆ. ಕಾಂಗ್ರೆಸ್'ನವರು ತಮ್ಮ ಕೈಯಲ್ಲಿ ಅದೆಷ್ಟು ಶಕ್ತಿಯಿದೆ ತೋರಿಸಲಿ ಎಂದು ಸಚಿವ ಜೋಶಿ ಸವಾಲು ಹಾಕಿದರು.
ಪ್ರಧಾನಿ ವಿರುದ್ಧ ಹೊಡಿ-ಬಡಿ ಸಂಸ್ಕಾರ ಹುಟ್ಟು ಹಾಕುತ್ತಿರುವ ಕಾಂಗ್ರೆಸ್ಸಿಗರಿಗೆ ದೇಶದ ಜನರೇ ಬುದ್ಧಿ ಕಲಿಸತ್ತಾರೆ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು. ಇನ್ನು, ಕಾಂಗ್ರೆಸ್ಸಿಗರಿಗೆ ಯಾವಾಗಲೂ ಹೊಡಿ-ಬಡಿ ಸಂಸ್ಕೃತಿಯೇ ಇದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಶಿವರಾಜ್ ತಂಗಡಗಿ ವಿರುದ್ಧ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಇದ್ದುಕೊಂಡು ಹೀಗೆ ಹೊಡಿ ಬಡಿಯುವ ರೀತಿ ಪ್ರಚೋದನೆ ನೀಡುವುದು ಅವರ ವ್ಯಕ್ತಿತ್ವ ಮತ್ತು ಹುದ್ದೆಗೆ ಘನತೆ, ಗೌರವ ತರುವಂಥದ್ದಲ್ಲ ಎಂದು ಖಂಡಿಸಿದರು.
ಮೋದಿ ಬಗ್ಗೆ ದ್ವೇಷ ಕಾರುವುದೇಕೆ? ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ದ್ವೇಷ ಕಾರುವ ಮನೋಭಾವವಿದೆ. ಇದಕ್ಕೆಲ್ಲ ಜನರೇ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.
ಪ್ರಧಾನಿ ಮೋದಿ ಅವರನ್ನು ಹಳಿದರೆ ವರ್ಚಸ್ಸು ಕುಗ್ಗುವಂತೆ ಮಾಡಬಹುದು ಎಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆ. ನೀವೆಷ್ಟು ಮೋದಿ ಅವರನ್ನು ದ್ವೇಷಿಸುತ್ತೀರಿ ಮತ್ತು ಸೇಡಿನ ಭಾವನೆಯಿಂದ ವರ್ತಿಸುತ್ತಿರೋ? ಅಷ್ಟೇ ಪ್ರೀತಿಯಿಂದ ಜನ ಮೋದಿ ಅವರನ್ನು ಕಾಣುತ್ತಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಕಿವಿಮಾತು ಹೇಳಿದರು.












Click it and Unblock the Notifications