B Khata: ಇದೇ ಕಾರಣಕ್ಕೆ ಬಿ -ಖಾತಾ ಕೊಡ್ತಿದ್ದಾರೆ ಎಂದ ಎಚ್.ಡಿ ಕುಮಾರಸ್ವಾಮಿ!
B Khata: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅನಧಿಕೃತ ಬಡಾವಣೆ ಹಾಗೂ ನಿವೇಶನಗಳಿಗೆ ತರಾತುರಿಯಲ್ಲಿ ಬಿ - ಖಾತಾ ನೀಡುತ್ತಿದೆ. ಈ ರೀತಿ ರಾಜ್ಯ ಸರ್ಕಾರವು ಬಿ - ಖಾತಾ ನೀಡುತ್ತಿರುವುದರ ಹಿಂದೆ ಬೇರೆ ಕಾರಣವೇ ಇದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಅನಧಿಕೃತ ಬಡಾವಣೆಗಳಿಗೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಬಿ ಖಾತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವಿಚಾರವಾಗಿ ಎಚ್.ಡಿ ಕುಮಾರಸ್ವಾಮಿ ಅವರು ಸ್ಫೋಟಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಅನಧಿಕೃತ ಬಡಾವಣೆಗಳಲ್ಲಿನ ನಿವೇಶನ ಮತ್ತು ಮನೆಗಳಿಗೆ ಇಷ್ಟೊಂದು ತರಾತುರಿಯಲ್ಲಿ ಬಿ- ಖಾತಾ ನೀಡುತ್ತಿರುವುದು ಯಾಕೆ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಈ ಸರ್ಕಾರವು ಜನರ ಮೇಲಿರುವ ಪ್ರೀತಿಯಿಂದ ಈ ಕ್ರಮಕ್ಕೆ ಮುಂದಾಗಿಲ್ಲ. ಈಗಾಗಲೇ ಈ ವಿಚಾರವಾಗಿ ಕೋರ್ಟ್ನಲ್ಲಿ ವ್ಯಾಜ್ಯ ಇದೆ. ಖಾತಾ ನೀಡುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇಷ್ಟಾದರೂ ತರಾತುರಿಯಲ್ಲಿ ಬಿ - ಖಾತಾ ನೀಡಲಾಗುತ್ತಿದೆ. ಇದಕ್ಕೆಲ್ಲ ಕಾರಣ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿರುವುದು ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲದೆ ಇರುವುದರಿಂದಾಗಿ ಇದೀಗ ಅಕ್ರಮ ಮತ್ತು ಸಕ್ರಮ ಯೋಜನೆ ಜಾರಿ ಮಾಡುವುದಕ್ಕೆ ಮುಂದಾಗಿದ್ದಾರೆ. ದರ ಏರಿಕೆ ಹಾಗೂ ತೆರಿಗೆ ಹೇರಿಕೆ ಮಾಡಿದ್ದಾರೆ ಇದರ ಮೂಲಕ ಮಾತ್ರವೇ ಈ ಸರ್ಕಾರ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಅನಧಿಕೃತ ನಿವೇಶನಗಳಿಗೆ ಮೂರು ತಿಂಗಳಿನಲ್ಲಿ ಬಿ ಖಾತಾ ನೀಡಬೇಕು ಅಂತ ಸರ್ಕಾರ ಹೇಳಿರುವ ನಡುವೆ ಕುಮಾರಸ್ವಾಮಿ ಅವರು ಹೇಳಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
40ರಿಂದ 50 ಲಕ್ಷ ಆಸ್ತಿಗಳಿಗೆ ಬಿ ಖಾತಾ: ಇನ್ನು ರಾಜ್ಯದಲ್ಲಿ ಅಂದಾಜು 40ರಿಂದ 50 ಲಕ್ಷ ಆಸ್ತಿಗಳಿಗೆ ಬಿ ಖಾತಾ ಸಿಗಲಿದೆ ಎಂದು ಹೇಳಲಾಗಿದೆ. ಸಹಜವಾಗಿಯೇ ಈ ಆಸ್ತಿಗಳೆಲ್ಲವೂ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆ ಆಗಲಿದ್ದು, ಇದರಿಂದ ರಾಜ್ಯ ಸರ್ಕಾರದ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಗಲಿದೆ.
ಕೇಂದ್ರ ಸರ್ಕಾರ ನೆರವು ಕೊಡುತ್ತಿದೆ: ಇನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೆರವು ನೀಡುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇಲಾಖಾವಾರು ವಿಂಗಡಣೆಯಲ್ಲಿ ಪ್ರತಿ ರಾಜ್ಯಗಳಿಗೂ ಹಣ ಹಂಚಿಕೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಈ ರೀತಿ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗಲೂ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಬದಲಾವಣೆ ಆಗಿಲ್ಲ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ಅಪಪ್ರಚಾರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications