ಕೇಂದ್ರ ಬಜೆಟ್ 2019 ಹೊಸ ಭಾರತಕ್ಕೆ ಬುನಾದಿ : ಜೋಶಿ
ಬೆಂಗಳೂರು, ಜುಲೈ 05 : 'ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಚೊಚ್ಚಲ ಬಜೆಟ್ ಹೊಸ ಭಾರತಕ್ಕೆ ಬುನಾದಿಯಾಗಲಿದೆ' ಎಂದು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಶುಕ್ರವಾರ ಬಜೆಟ್ ಮಂಡನೆ ಮಾಡಿದ ಬಳಿಕ ಮಾತನಾಡಿದ ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, '2ನೇ ಅವಧಿಯ ಮೊದಲ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ' ಎಂದರು.
'ಈ ಬಜೆಟ್ ನರೇಂದ್ರ ಮೋದಿ ಅವರ ನವ ಭಾರತದ ಕಲ್ಪನೆಗೆ ಬಹುದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಮುಖ್ಯವಾಗಿ ದೇಶದಲ್ಲಿ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಬೇಕು, ಅದರ ಮೂಲಕ ಆರ್ಥಿಕತೆ ಅಭಿವೃದ್ಧಿಗೊಳ್ಳಬೇಕು' ಎಂದು ತಿಳಿಸಿದರು.

'ಬಡವರು, ಕೂಲಿ ಕಾರ್ಮಿಕರು, ರೈತರು ಇವರ ಯೋಗಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳಬೇಕು. 2022ರೊಳಗಾಗಿ ವಿಶೇಷವಾಗಿ ರೈತರ ಆದಾಯ ದ್ವಿಗುಣವಾಗಬೇಕು ಈ ಎಲ್ಲಾ ಅಂಶಗಳನ್ನು ನೋಡಿಕೊಂಡು ಬಜೆಟ್ ಮಂಡಿಸಲಾಗಿದೆ' ಎಂದು ಜೋಶಿ ಹೇಳಿದರು.
'ಮೂಲ ಸೌಕರ್ಯಕ್ಕೆ ಹೆಚ್ಚು ಆದ್ಯತೆಯನ್ನು ಕೊಟ್ಟು, ಜೊತೆಗೆ ಆರ್ಥಿಕತೆ ಸುಧಾರಣೆಗೂ ಒತ್ತು ಕೊಟ್ಟಿದ್ದಾರೆ. ಬಡವರು ಮತ್ತು ಬಡವರ ಅವಶ್ಯಕತೆ ಮನೆ, ಶೌಚಾಲಯ, ವಿದ್ಯುತ್, ಅಡುಗೆ ಅನಿಲ ಇವುಗಳಿಗೆ ಆದ್ಯತೆಯನ್ನು ಕೊಡುವ ಮೂಲಕ ಬಜೆಟ್ ಮಂಡಿಸಲಾಗಿದೆ' ಎಂದರು.












Click it and Unblock the Notifications