ಕನ್ನಡವನ್ನು ಕೊಳಕು ಭಾಷೆ ಎಂದು ಅವಮಾನಿಸಿದ ಗೂಗಲ್: ಸರಿ ಮಾಡೋದು ಹೇಗೆ?
ಬೆಂಗಳೂರು, ಜೂನ್ 3: ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.
Recommended Video
ಆರೂವರೆ ಕೋಟಿ ಕನ್ನಡಿಗರು ಮಾತನಾಡುವ ಹಾಗೂ 2 ಸಾವಿರ ವರ್ಷಗಳ ಇತಿಹಾಸದ ಹಿನ್ನೆಲೆಯುಳ್ಳ ಸುಂದರ ಕನ್ನಡ ಭಾಷೆಗೆ ಮಸಿ ಬಳಿಯುವ ಕೆಲಸ ಗೂಗಲ್ನಿಂದ ನಡೆದಿದೆ.
ತಂತ್ರಜ್ಞಾನ ದೈತ್ಯ ಎಂದು ಕರೆಯಲ್ಪಡುವ ಗೂಗಲ್ನ ಸರ್ಚ್ ಎಂಜಿನ್ನಲ್ಲಿ ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದೆ. ಆ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನ ಮಾಡಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನವಶ್ಯಕವಾಗಿ ಕನ್ನಡಿಗರ ಬಗ್ಗೆ ಕೀಳರಿಮೆ ಬಿಂಬಿಸುವ ಗೂಗಲ್ ಯತ್ನದ ವಿರುದ್ಧ ಧ್ವನಿ ಎತ್ತಲಾಗುತ್ತಿದೆ.
ಗೂಗಲ್ನಂತಹ ದೊಡ್ಡ ಸಂಸ್ಥೆ ಕನ್ನಡ ಭಾಷೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒತ್ತಾಯಿಸುತ್ತಿದ್ದಾರೆ.

ಸರಿ ಮಾಡೋದು ಹೇಗೆ?
ಗೂಗಲ್ನಲ್ಲಿ ಕನ್ನಡ ಭಾಷೆಯ ಬಗ್ಗೆ ಹೀಗೆ ತೋರಿಸುತ್ತಿರುವುದಕ್ಕೆ ಏನೇ ಕಾರಣಗಳಿರಬಹುದು. ಆದರೆ ಒಂದು ಭಾಷೆಯನ್ನು ಕೊಳಕು ಭಾಷೆಯೆಂಬಂತೆ ತೋರಿಸುತ್ತಿರುವ ಗೂಗಲ್ ಇದನ್ನು ಸರಿಪಡಿಸಿಕೊಳ್ಳಬೇಕಿದೆ. ಹಾಗೆಯೇ ಸರಿಪಡಿಸಿಕೊಳ್ಳಬೇಕಾದರೆ ನಾವು ಗೂಗಲ್ನಲ್ಲಿ ಈ ವಿಚಾರವನ್ನು ರಿಪೋರ್ಟ್ ಮಾಡಬೇಕು.
ಗೂಗಲ್ನಲ್ಲಿ ಬರುವ ರಿಸಲ್ಟ್ನ ಕೆಳಭಾಗದಲ್ಲಿ ಫೀಡ್ಬ್ಯಾಕ್ ಆಯ್ಕೆ ಇದೆ. ಅದನ್ನು ಕ್ಲಿಕ್ ಮಾಡಿ ಅದರಲ್ಲಿ ಮೂರನೇ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಸೆಲೆಕ್ಟ್ ಮಾಡಿದ ನಂತರ ಕೆಳಗೆ ನಿಮ್ಮ ಅಭಿಪ್ರಾಯವನ್ನು ದಾಖಲಿಸಿ ಸೆಂಡ್ ಮಾಡಿದರೆ ಮುಗಿಯಿತು. ಬೇಕಿದ್ದರೆ ಫೀಡ್ಬ್ಯಾಕ್ ಕೂಡ ಟೈಪ್ ಮಾಡಬಹುದಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ರಿಪೋರ್ಟ್ ಮಾಡಿದರೆ ಗೂಗಲ್ ಕನ್ನಡ ಭಾಷೆಗೆ ಮಾಡಿರುವ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲಿದೆ.

ಟಿ.ಎಸ್ ನಾಗಾಭರಣ ಪ್ರತಿಕ್ರಿಯೆ
ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿ, ""ನಾವು ಈ ವಿಚಾರವಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದೇವೆ. ಗೂಗಲ್ನಲ್ಲಿ ಕನ್ನಡವನ್ನು ಅವಮಾನಿಸಿದ್ದನ್ನು ಖಂಡಿಸಿ ಲೀಗಲ್ ನೋಟಿಸ್ ಕಳುಹಿಸಿದ್ದೇವೆ. ನೆಲ, ಜಲ, ಭಾಷೆ, ಸಂಸ್ಕೃತಿಯ ವಿಚಾರದಲ್ಲಿ ಇನ್ನೊಬ್ಬರನ್ನು ಅಪಮಾನ ಮಾಡುವುದನ್ನು ಸಹಿಸಲಾಗದು. ಇದೊಂದು ಬಗೆಯ ವ್ಯವಸ್ಥಿತ ಸಂಚು ಎನ್ನುವುದು ಸ್ಪಷ್ಟವಾಗಿದೆ'' ಎಂದರು.
ಕನ್ನಡಿಗರನ್ನು ಹಾಗೂ ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುವ ಮನಸ್ಥಿತಿಗಳು ಇಂತಹ ಅವಕಾಶ ಸೃಷ್ಟಿಸಲು ಹೊಂಚು ಹಾಕಿ ಕುಳಿತಿರುತ್ತವೆ. ಇದಕ್ಕೆ ಪ್ರತಿರೋಧ ಒಡ್ಡುವುದಷ್ಟೇ ನಮ್ಮ ಕೆಲಸ ಅಲ್ಲ. ಬದಲಾಗಿ ಈ ತೆರನಾದ ಘಟನೆಗಳು ಜರುಗದಂತೆ ಕಾವಲಿರಬೇಕು. ನಮ್ಮತನಕ್ಕೆ ಧಕ್ಕೆಯಾಗುವ ಸಣ್ಣ ವಿಚಾರವನ್ನೂ ಸಹಿಸುವುದಿಲ್ಲ ಎನ್ನುವುದನ್ನು ಕನ್ನಡಿಗರು ಗಟ್ಟಿ ಧ್ವನಿಯಲ್ಲಿ ಹೇಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications