ಉಡುಪಿಯಲ್ಲಿ ಅಧಿಕಾರಿಗಳ ವಿರುದ್ಧ ಉಗ್ರಪ್ಪ ಉಗ್ರ ಪ್ರತಾಪ
ಉಡುಪಿ, ಮೇ 27 : ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಸಂಗ್ರಹಿಸುವುದಕ್ಕಿಂತ ಜಿಲ್ಲೆಯ ಅಧಿಕಾರಿಗಳ ವಿರುದ್ಧ 'ಉಗ್ರ ಪ್ರತಾಪ' ತೋರಿಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿತು.
ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ 'ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ, ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ' ಸಭೆ ನಡೆಯಿತು. [ಉಗ್ರಪ್ಪ ವಿರುದ್ಧ FIR]

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿ.ಎಸ್.ಉಗ್ರಪ್ಪ ಅವರು, 'ಈ ಸಮಿತಿ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷವಾಗಿದ್ದು, ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು, ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡು ಅಲ್ಲಿನ ಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ತಯಾರಿಸುವ ಜವಾಬ್ದಾರಿ ನೀಡಲಾಗಿದೆ' ಎಂದರು. [ಬೆಂಗಳೂರು: ಪಿಜಿ ಎದುರೆ ಯುವತಿ ಅಪಹರಣ ಯತ್ನ]
ಅಧಿಕಾರಿಗಳಿಗೆ ಎಚ್ಚರಿಕೆ : 'ಸರಕಾರ ಸಮಿತಿಯನ್ನು ನೇಮಿಸಿದ್ದು, ತನಗೆ ಕ್ಯಾಬಿನೆಟ್ ಸಚಿವ ದರ್ಜೆಯ ಸ್ಥಾನಮಾನವಿದೆ. ನಮಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರವಿಲ್ಲದಿದ್ದರೂ ನಿಮ್ಮ ವಿರುದ್ಧ ವ್ಯತಿರಿಕ್ತ ವರದಿ ಬರೆಯುವ ಅಧಿಕಾರವಿದೆ. ಆದ್ದರಿಂದ, ನಮಗೆ ಉತ್ತರ ನೀಡುವಾಗ ಜಾಗೃತರಾಗಿರಿ' ಎಂದು ಉಗ್ರಪ್ಪ ಪದೇ ಪದೇ ಅಧಿಕಾರಿಗಳಿಗೆ ಎಚ್ಚರಿಸಿದರು. [ಅತ್ಯಾಚಾರ ಎಸಗಿದವರ ಕೈಕಾಲು ಕತ್ತರಿಸಿ: ಮೋಟಮ್ಮ]
2011ರ ಜನಗಣತಿಯಂತೆ ಉಡುಪಿ ಜಿಲ್ಲೆಯ ಲಿಂಗಾನುಪಾತ ಹಾಗೂ ಕಳವಳಕರವಾಗಿ ಕುಸಿಯುತ್ತಿರುವ 0-6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತವನ್ನು ಸರಿಯಾಗಿ ಗ್ರಹಿಸದ ಸಮಿತಿ, ಜಿಲ್ಲಾಧಿಕಾರಿ ಹಾಗೂ ವಿವಿಧ ಸರಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಈ ಬಗ್ಗೆ ನೀಡಿದ ವಿವರವಾದ ಸಮಜಾಯಿಷಿಯನ್ನು ಅರ್ಥೈಸಿಕೊಳ್ಳದೇ ಅಧಿಕಾರಿಗಳ ವಿರುದ್ಧ ಕೆಂಡಕಾರಿತು.
ಮೋಟಮ್ಮರಿಗೆ ಎಸಿ ಕಾರಿನ ಚಿಂತೆ : ಸಭೆಗೆ ತಡವಾಗಿ ಆಗಮಿಸಿದ ಮೋಟಮ್ಮ ಅವರು, 'ತನಗೆ ಎಸಿ ಗಾಡಿಯನ್ನು ನೀಡದ ಕುರಿತು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಹನಕ್ಕಾಗಿ ಕಾಯುವಂತಾಯಿತು. ನಮ್ಮ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ. ಅವರು ಜೀಪನ್ನು ನೀಡಿದ್ದಾರೆ. ಉಡುಪಿಯಲ್ಲಿ ಎಸಿ ಕಾರು ಇಲ್ಲದೇ ಹೇಗೆ ತಿರುಗುವುದು' ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಉಗ್ರಪ್ಪ ಸೇರಿದಂತೆ ಉಳಿದ ಸದಸ್ಯರು ಜಿಲ್ಲೆಯಲ್ಲಿ ಅಧಿಕಾರಿಗಳು ಸರಿಯಾದ ಗೌರವ ತೋರುತ್ತಿಲ್ಲ. ನಾವು ಗೃಹ ಇಲಾಖೆಯಡಿಯಲ್ಲಿ ಬಂದರೂ ಪೊಲೀಸ್ ಇಲಾಖೆ ನಮಗೆ ಯಾವುದೇ ವ್ಯವಸ್ಥೆ ಏರ್ಪಾಡು ಮಾಡಿಲ್ಲ. ನಮಗೆ ಎಸ್ಕಾರ್ಟ್ ಸಹ ನೀಡಿಲ್ಲ ಎಂದು ದೂರಿದರು.












Click it and Unblock the Notifications