ಉಡುಪಿ; ಪರಶುರಾಮ ಥೀಮ್ ಪಾರ್ಕ್ ಪ್ರಶ್ನಿಸಿದ್ದ ಪಿಐಎಲ್ ವಜಾ
ಬೆಂಗಳೂರು, ಅಕ್ಟೋಬರ್ 12; ಉಡುಪಿ ಜಿಲ್ಲೆಯ ಕಾರ್ಕಳದಲ್ಲಿನ ಪರುಶರಾಮ ಥೀಮ್ ಪಾರ್ಕ್ ಕಾಮಗಾರಿ ಆಕ್ಷೇಪಿಸಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಪ್ರಮೋದ್ ಮುತಾಲಿಕ್ ಹಾಗೂ ಬೆಂಗಳೂರಿನ ಎಸ್. ಭಾಸ್ಕರನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಈ ಅರ್ಜಿಯು ಕಲ್ಪನೆಗಳು, ಊಹೆಗಳು ಮತ್ತು ಅರ್ಜಿದಾರರ ಸ್ವಂತ ಅನಿಸಿಕೆಗಳ 'ಬಂಡಲ್' (ಕಟ್ಟು) ಆಗಿದ್ದು, ಸಾರಸಗಟಾಗಿ ತಳ್ಳಿ ಹಾಕುವಂತಹದ್ದಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಈಗಾಗಲೇ ಥೀಮ್ ಪಾರ್ಕ್ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಈ ಹಿಂದೆ ಯಾವತ್ತೂ ಆಕ್ಷೇಪವೆತ್ತದ ಅರ್ಜಿದಾರರು ಈಗ ಏಕಾಏಕಿ ಕೋರ್ಟ್ಗೆ ಬಂದಿದ್ದಾಾರೆ. ಅಷ್ಟಕ್ಕೂ ಅರ್ಜಿದಾರರಿಬ್ಬರೂ ಸ್ಥಳೀಯರಲ್ಲ. ಒಬ್ಬರು ಧಾರವಾಡದವರು ಮತ್ತೊಬ್ಬರು ಬೆಂಗಳೂರಿನವರು. ಸ್ಥಳೀಯ ಗ್ರಾಮಸ್ಥರು ಕೋರ್ಟ್ಗೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿತು.
ಗೋಮಾಳ ಜಾಗವನ್ನು ಥೀಮ್ ಪಾರ್ಕ್ಗೆ ಬಳಕೆ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾಾರೆ. ಆದರೆ, ಇದರಿಂದ ಪಶುಸಂಗೋಪನೆಗೆ ತೊಂದರೆ ಆಗಲಿದೆ ಎಂದು ಗ್ರಾಮಸ್ಥರಾಗಲಿ ಅಥವಾ ನೆರೆಯ ಗ್ರಾಮಸ್ಥರು ಯಾರೂ ಆತಂಕ ವ್ಯಕ್ತಪಡಿಸಿಲ್ಲ. ಅರ್ಜಿಯಲ್ಲಿ ವಿಚಾರಣೆಗೆ ಪರಿಗಣಿಸುವಂತದ್ದೇನೂ ಇಲ್ಲ. ಅಲ್ಲದೇ ಬಹಳ ತಡವಾಗಿ ಅರ್ಜಿದಾರರು ಕೋರ್ಟ್ ಮೆಟ್ಟಿಲು ಹತ್ತಿದ್ದಾಾರೆ ಎಂದು ನ್ಯಾಯಾಲಯ ಹೇಳಿತು.
ಈ ಪ್ರಕರಣದಲ್ಲಿ ಪ್ರಮೋದ್ ಮುತಾಲಿಕ್ಗೆ ಹಿನ್ನಡೆಯಾಗಿದೆ. ಅಲ್ಲದೇ 'ನಿಮ್ಮ ಬಳಿ ಗೋವುಗಳು ಇದ್ದಾವೆಯೇ?' ಎಂದು ಅರ್ಜಿದಾರರನ್ನು ಪ್ರಶ್ನಿಸಿದ ನ್ಯಾಯಪೀಠ ಗೋವುಗಳನ್ನು ಸಾಕದವರು ಗೋಮಾಳ ರಕ್ಷಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು 10 ವರ್ಷಗಳ ಹಿಂದೆ ಇದೇ ಹೈಕೋರ್ಟ್ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ ಎಂಬ ವಿಚಾರವನ್ನೂ ಇದೇ ವೇಳೆ ಅರ್ಜಿದಾರರ ಗಮನಕ್ಕೆ ತಂದಿತು.
ಏನಿದು ಪ್ರಕರಣ?: ಎರ್ಲಪಾಡಿಯ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಪರಶುರಾಮ ಥೀಮ್ ಪಾರ್ಕ್ ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ. ಪರುಶುರಾಮನ ಪ್ರತಿಮೆಗೆ ಕಳಪೆ ಗುಣಮಟ್ಟದ ತಾಮ್ರವನ್ನು ಬಳಸಲಾಗಿದೆ. ಮೂರ್ತಿಯ ತಲೆ, ಕೈ, ಕಾಲುಗಳು ಮತ್ತು ಕೈಯಲ್ಲಿ ಹಿಡಿದುಕೊಳ್ಳುವ ಕತ್ತಿಯನ್ನು ಪ್ರತ್ಯೇಕವಾಗಿ ತಂದು ಕೆಟ್ಟ ರೀತಿಯಲ್ಲಿ ಜೋಡಿಸಲಾಗಿದೆ. ಇದಕ್ಕಾಗಿ ನಿರ್ಮಿಸಿರುವ ರಸ್ತೆಯೂ ಕಳಪೆ ಗುಣಮಟ್ಟದ್ದಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಪಾರ್ಕ್ ನಿರ್ಮಾಣಕ್ಕೆ ನಿಗದಿಪಡಿಸಿರುವ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೇ ಸಂಖ್ಯೆ 329/1ರ 1.58 ಎಕರೆ ಭೂಮಿ ಗೋಮಾಳಕ್ಕಾಗಿ ಮೀಸಲಿಟ್ಟಿದ್ದಾಗಿದೆ. ಈ ಜಮೀನಿನಲ್ಲಿ ಯಾವುದೇ ಥೀಮ್ ಪಾರ್ಕ್ ನಿರ್ಮಾಣದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದಾರೆ. ಆದರೂ ಕಾಮಗಾರಿ ನಡೆಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಗೋಮಾಳದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡುವುದಕ್ಕಾಗಿ ಸರ್ಕಾರದ ತೆರಿಗೆ ಹಣವನ್ನು ವ್ಯಯ ಮಾಡಲಾಗುತ್ತಿದ್ದು, ಇದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದ್ದರು. ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ, ಹಾಗಾಗಿ ಕಾಮಗಾರಿ ರದ್ದು ಮಾಡಬೇಕು. ಈ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವುದಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.












Click it and Unblock the Notifications