ಸೋಸಲೆ ಶ್ರೀ ಬಂಧನ ಕುರಿತು ಪೇಜಾವರಶ್ರೀ ಹೇಳಿದ್ದೇನು?
ರಾಯಚೂರು, ಅ 26: ಎಂಬತ್ತರ ಇಳಿ ವಯಸ್ಸಿನಲ್ಲೂ ಸದಾ ಸುದ್ದಿಯಲ್ಲಿರುವ ಉಡುಪಿ ಪೇಜಾವರ ಶ್ರೀಗಳು ಸೋಸಲೆ ಮಠದ ಶ್ರೀಗಳ ಬಂಧನ ತಪ್ಪು ಎನ್ನುವ ಹೇಳಿಕೆಯನ್ನು ನೀಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ನಗರದಲ್ಲಿ ಭಾನುವಾರ (ಅ 25) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಶ್ರೀಗಳು, ಬೆಳ್ಳಿರಥ ಕಳವು ಮತ್ತು ಮಠದ ಇತರ ಆಸ್ತಿಗಳನ್ನು ಅಡಮಾನವಿಟ್ಟ ಘಟನೆಗೆ ಸಂಬಂಧಿಸಿದಂತೆ ಸೋಸಲೆ ವ್ಯಾಸರಾಜ ಮಠದ ವಿದ್ಯಾ ಮನೋಹರ ತೀರ್ಥರನ್ನು ಬಂಧಿಸಿರುವುದು ಖಂಡನೀಯ ಎಂದಿದ್ದಾರೆ. (ಸೋಸಲೆ ಶ್ರೀಗಳ ಬಂಧನ)
ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಇರಬೇಕು. ಹಿಂದೂಗಳಿಗೆ ಕಠಿಣ ಧೋರಣೆ ಮತ್ತು ಮುಸ್ಲಿಮರ ಪರವಾಗಿ ಮೃದು ಧೋರಣೆ ತಾಳುವುದು ತಪ್ಪು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ.
ಸೋಸಲೆ ವ್ಯಾಸರಾಜ ಮಠ ಅಸಂಖ್ಯಾತ ಭಕ್ತ ಸಮುದಾಯವನ್ನು ಹೊಂದಿದೆ. ಶ್ರೀಗಳ ಬಂಧನದಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಯಾವುದೇ ಧಾರ್ಮಿಕ ಮುಖಂಡರನ್ನು ಬಂಧಿಸುವ ಮೊದಲು ಸತ್ಯಾಸತ್ಯತೆಯನ್ನು ಪರಾಮರ್ಶಿಸಬೇಕು. ತನಿಖೆ ನಡೆದ ನಂತರ ಮತ್ತು ತಪ್ಪಿತಸ್ಥ ಎಂದು ಸಾಬೀತಾದ ನಂತರ ಶ್ರೀಗಳನ್ನು ಬಂಧಿಸುವುದು ಸೂಕ್ತ ಹೆಜ್ಜೆಯಾಗಿರುತ್ತಿತ್ತು ಎಂದು ಪೇಜಾವರ ಶ್ರೀಗಳು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. (ಪೇಜಾವರ ಶ್ರೀಗಳ ಸಂದರ್ಶನ)
ಸಾಹಿತಿಗಳು, ರಾಘವೇಶ್ವರ ಶ್ರೀಗಳು, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಡಿಸಿಎಂ ಪಟ್ಟದ ಆಕಾಂಕ್ಷೆಯ ಬಗ್ಗೆ ಪೇಜಾವರ ಶ್ರೀಗಳು ಹೇಳಿಕೆಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಸೋಸಲೆ ಶ್ರೀಗಳ ಬಂಧನ
ತಿರಮಕೂಡಲು ನರಸೀಪುರದ ವ್ಯಾಸರಾಜ (ಸೋಸಲೆ) ಮಠಕ್ಕೆ ಸೇರಿರುವ ಬೆಳ್ಳಿ ರಥ ಕದ್ದು ಮಾರಾಟ ಮಾಡಿದ ಆರೋಪದ ಹೊತ್ತಿರುವ ವಿದ್ಯಾಮನೋಹರತೀರ್ಥ ಸ್ವಾಮೀಜಿ ಅವರನ್ನು ಪೊಲೀಸರು ಶನಿವಾರ (ಅ 24) ಬಂಧಿಸಿದ್ದರು. ಇದನ್ನು ವಿರೋಧಿಸಿ ಪೇಜಾವರ ಶ್ರೀಗಳು ಹೇಳಿಕೆಯನ್ನು ನೀಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಮಧ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದು ಉತ್ತಮ ಬೆಳವಣಿಗೆಯಲ್ಲ - ಪೇಜಾವರ ಶ್ರೀಗಳು.
ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುತ್ತಿರುವುದರ ಬಗ್ಗೆ
ಕಲಬುರ್ಗಿ ಹತ್ಯೆ ಖಂಡಿಸಿ ಪ್ರಶಸ್ತಿ ಹಿಂತಿರುಗಿಸುವ ಮೂಲಕ ಸಾಹಿತಿಗಳು ಪ್ರತಿಭಟನೆ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಆದರೂ, ಏನೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಹೋರಾಟದ ಮೂಲಕ ಬಗೆಹರಿಸಿಕೊಳ್ಳಬೇಕೇ ವಿನಃ ಸಾಹಿತಿಗಳ ಮೇಲೆ ಹಲ್ಲೆ ನಡೆಸುವುದು ತಪ್ಪು ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ಮತ್ತು ಮುಸ್ಲಿಮರು
ಹಿಂದಿನಿಂದಲೂ ಕಾಂಗ್ರೆಸ್ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದೆ. ನಾಡಿನ ಬುದ್ದಿಜೀವಿಗಳೂ ತೂಕಬದ್ದವಾದ ಹೇಳಿಕೆಯನ್ನು ನೀಡಬೇಕು. ಜಾತ್ಯಾತೀತ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡಿಸುವುದು ತಪ್ಪು ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ರಾಘವೇಶ್ವರ ಶ್ರೀಗಳ ಬಗ್ಗೆ
ರಾಘವೇಶ್ವರ ಭಾರತಿ ಶ್ರೀಗಳು ತಪ್ಪು ಮಾಡಿಲ್ಲ ಎನ್ನುವ ಹೇಳಿಕೆಯನ್ನು ಪದೇಪದೇ ನೀಡುತ್ತಿದ್ದಾರೆ. ಸರಕಾರ ಹೇಗೂ ತನಿಖೆಯನ್ನು ಸಿಐಡಿಗೆ ವಹಿಸಿದೆ. ಸಿಐಡಿ ವರದಿ ಬರಲಿ, ಸತ್ಯ ಹೊರಬರಲಿ ಅಲ್ಲಿಯವರೆಗೆ ರಾಘವೇಶ್ವರ ಶ್ರೀಗಳು ಪೀಠತ್ಯಾಗ ಮಾಡುವುದು ಬೇಡ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಪರಮೇಶ್ವರ್
ಕಾಂಗ್ರೆಸ್ ಪಕ್ಷ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ಕೊಡುವುದು ಸೂಕ್ತ. ಈ ಮೂಲಕ ರಾಜ್ಯದಲ್ಲಿ ದಲಿತ ಸಮುದಾಯಕ್ಕೂ ಸೂಕ್ತ ಸ್ಥಾನಮಾನ ನೀಡಿದಂತಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.