ಧರ್ಮ ಸಂಸತ್ತಿನಲ್ಲಿ ಅಷ್ಟಮಠದ ನಿಯಮಕ್ಕೆ ಪೇಜಾವರರಿಂದ ಅಪಚಾರ?
Recommended Video
ವಿಶ್ವ ಹಿಂದೂ ಪರಿಷದ್ ಆಯೋಜಿಸಿರುವ 'ಧರ್ಮ ಸಂಸದ್ ಉಡುಪಿ - 2017'ರಲ್ಲಿ ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೀಠಾಧಿಪತಿ ಪೇಜಾವರ ವಿಶ್ವೇಶ್ವರತೀರ್ಥ ಶ್ರೀಗಳಿಂದ, ಆಚಾರ್ಯ ಮಧ್ವರು ಹಾಕಿಕೊಟ್ಟಿದ್ದ ಅಷ್ಟಮಠದ ನಿಯಮಗಳಿಗೆ ಅಪಚಾರವಾಗಿದೆಯೆ?
ಈ ಬಗ್ಗೆ ಉಡುಪಿಯಲ್ಲಿ ಪೇಜಾವರ ಶ್ರೀಗಳ ಪರ ಮತ್ತು ವಿರೋಧ ಚರ್ಚೆಗಳು ಚಾಲ್ತಿಯಲ್ಲಿದೆ. ಕನಕದಾಸನ ಭಕ್ತಿಗೊಲಿದು ಶ್ರೀಕೃಷ್ಣ ಪಶ್ಚಿಮಕ್ಕೆ ತಿರುಗಿದ, ಈ ಬಗ್ಗೆ ಯಾವುದೇ ಚರ್ಚೆಗೆ ನಾನು ಸಿದ್ದ ಎಂದು ಇತ್ತೀಚೆಗೆ ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆಯೂ ಭಾರೀ ಚರ್ಚೆಗೊಳಗಾಗಿತ್ತು.
ಪೇಜಾವರಶ್ರೀಗಳ ಕಣ್ಣ ಮುಂದೆಯೇ ರಾಮ ಮಂದಿರ ನಿರ್ಮಾಣ
ಪರ್ಯಾಯ ಪೀಠದಲ್ಲಿರುವ ಶ್ರೀಗಳು ಕೃಷ್ಣಮಠದ ರಥಬೀದಿ ಆವರಣವನ್ನು ಬಿಟ್ಟು ಹೊರಗೆ ಹೋಗುವ ಪದ್ದತಿಯಿಲ್ಲ, ಆದರೆ ಪೇಜಾವರ ಶ್ರೀಗಳು ಧರ್ಮ ಸಂಸತ್ತಿನ ಪೂರ್ವಭಾವಿ ಸಭೆ, ಹಿಂದೂ ವೈಭವ ಪ್ರದರ್ಶನ ಮತ್ತು ಶುಕ್ರವಾರದ (ನ 25) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೇಜಾವರ ಶ್ರೀಗಳ ಈ ನಡೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತೇ ಎನ್ನುವ ಚರ್ಚೆ ಮಾಧ್ವ ಸಾಂಪ್ರದಾಯಿಕರ ವಲಯದಲ್ಲಿ ಮತ್ತು ಉಡುಪಿಯಲ್ಲಿ ಆರಂಭವಾಗಿದೆ. ರಥಬೀದಿಯಿಂದ ಐದಾರು ಕಿ.ಮೀ ದೂರದಲ್ಲಿರುವ ಮಣಿಪಾಲದ ಆಸ್ಪತ್ರೆಯಲ್ಲಿ ಪೇಜಾವರ ಶ್ರೀಗಳು ಹರ್ನಿಯ ಶಸ್ತ್ರಚಿಕಿತ್ಸೆಗೆ ಇತ್ತೀಚೆಗೆ ಒಳಗಾಗಿದ್ದರು.
ಆಚಾರ್ಯ ಮಧ್ವರ ಸಹೋದರ ವಿಷ್ಣುತೀರ್ಥರು ಬರೆದ ಗ್ರಂಥದ ಪ್ರಕಾರ, ರಥಬೀದಿಯಿಂದ ನಾಲ್ಕು ಕಿ,ಮೀ ದೂರದೊಳಗೆ ಪರ್ಯಾಯ ಶ್ರೀಗಳು ಸಂಚರಿಸಬಹುದು ಎನ್ನುವ ಅಂಶ ಉಲ್ಲೇಖವಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಮುಂದೆ ಓದಿ..
ಉಡುಪಿಯ ಕಲ್ಸಂಕದ ಬಳಿಯಿರುವ ರಾಯಲ್ ಗಾರ್ಡನ್ ಮೈದಾನ
ಧರ್ಮ ಸಂಸತ್ತು ನಡೆಯುತ್ತಿರುವ ನಗರದ ಕಲ್ಸಂಕದ ಬಳಿಯಿರುವ ರಾಯಲ್ ಗಾರ್ಡನ್ ಮೈದಾನ ರಥಬೀದಿಯಿಂದ ಸುಮಾರು ಅರ್ಥ ಕಿ.ಮೀ ದೂರದಲ್ಲಿದೆ. ವಿಷ್ಣುತೀರ್ಥರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದಂತೆ, ಕಾಲು ಯೋಜನೆ ದೂರವನ್ನು (ನಾಲ್ಕು ಕಿ.ಮೀ) ಧಾರ್ಮಿಕ ಕೆಲಸ ಮತ್ತು ಧರ್ಮ ಪ್ರಚಾರಕ್ಕಾಗಿ ಸಂಚರಿಸಬಹುದು.
ರಥಬೀದಿ ಬಿಟ್ಟು ಹೋಗಬಾರದು ಎನ್ನುವ ನಿಯಮ
ಶ್ರೀಕೃಷ್ಣ, ಮುಖ್ಯಪ್ರಾಣನ ಪೂಜಾ ವಿಧಿವಿಧಾನ ಸಾಂಗವಾಗಿ ನಡೆಯಲು ರಥಬೀದಿ ಬಿಟ್ಟು ಹೋಗಬಾರದು ಎನ್ನುವ ನಿಯಮವನ್ನು ಹಾಕಲಾಗಿದೆ, ಅಷ್ಠಮಠದ ನಿಯಮದ ಪ್ರಕಾರವೇ ನಾನು ನಡೆದುಕೊಂಡಿದ್ದೇನೆ. ನಮ್ಮಿಂದ ಯಾವುದೇ ಅಪಚಾರವಾಗಿಲ್ಲ ಎಂದು ಪೇಜಾವರ ಶ್ರೀಗಳ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಕೆಲವೊಂದು ಪೂಜೆಗಳನ್ನು ಪರ್ಯಾಯ ಪೀಠಾಧಿಪತಿಗಳೇ ಮಾಡಬೇಕು
ಶ್ರೀಕೃಷ್ಣನಿಗೆ ಮುಂಜಾನೆಯ ನೈರ್ಮಲ್ಯ ವಿಸರ್ಜನೆ ಸೇವೆಯಿಂದ ಹಿಡಿದು ರಾತ್ರಿಯ ತೊಟ್ಟಿಲು ಸೇವೆಯವರೆಗೆ 21 ವಿವಿಧ ಪೂಜೆ ನಡೆಯಬೇಕಿದೆ. ಅದರಲ್ಲಿ ಕೆಲವೊಂದು ಪೂಜೆಗಳನ್ನು ಪರ್ಯಾಯ ಪೀಠಾಧಿಪತಿಗಳೇ ಮಾಡಬೇಕಾಗುತ್ತದೆ. ಈ ಪೂಜೆಗಳಿಗೆ ತೊಂದರೆ ಬರಬಾರದು ಎನ್ನುವ ನಿಟ್ಟಿನಲ್ಲಿ ರಥಬೀದಿ ಬಿಟ್ಟುಹೋಗಬಾರದು ಎನ್ನುವ ನಿಯಮವನ್ನು ಹಾಕಲಾಗಿದೆ ಎಂದು ಪೇಜಾವರ ಶ್ರೀಗಳನ್ನು ಹಲವರು ಸಮರ್ಥಿಸಿಕೊಂಡಿದ್ದಾರೆ.
ಅಷ್ಠಮಠದ ಪೀಠಾಧಿಪತಿಗಳೇ ವಿರೋಧ ವ್ಯಕ್ತ ಪಡಿಸಿದ್ದರು
ಈ ಹಿಂದೆ ಮಠದ ಪದ್ದತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪುತ್ತಿಗೆ ಮಠದ ಶ್ರೀಗಳು ಮಧ್ಯಾಹ್ನ ನಡೆಯುವ ಮಹಾಪೂಜೆ ಮತ್ತು ಗರ್ಭಗುಡಿಯ ಕೃಷ್ಣನ ಮೂರ್ತಿಯನ್ನು ಮುಟ್ಟಿ ಪೂಜೆ ನಡೆಸಬಾರದು ಎಂದು ಅಷ್ಠಮಠದ ಪೀಠಾಧಿಪತಿಗಳೇ ವಿರೋಧ ವ್ಯಕ್ತ ಪಡಿಸಿದ್ದರು. ಈಗ ಪರ್ಯಾಯ ಯತಿಗಳು ರಥಬೀದಿ ಬಿಟ್ಟು ಹೋಗಬಾರದು ಎನ್ನುವ ನಿಯಮವನ್ನು ಪೇಜಾವರ ಶ್ರೀಗಳು ಉಲ್ಲಂಘಿಸಿದ್ದು ಸರಿಯೇ ಎನ್ನುವ ಪ್ರಶ್ನೆಯೂ ಕೇಳಿಬರುತ್ತಿದೆ.
ಪೇಜಾವರ ಶ್ರೀಗಳ ಮೇಲೆ ಅಪಾರ ಗೌರವ ಹೊಂದಿರುವ RSS ಮತ್ತು ವಿಎಚ್ಪಿ
ವಿಶ್ವಹಿಂದೂ ಪರಿಷತ್ತಿನ ಮಾರ್ಗದರ್ಶಕರಾಗಿರುವ ಪೇಜಾವರ ಶ್ರೀಗಳ ಮೇಲೆ ಅಪಾರ ಗೌರವ ಹೊಂದಿರುವ RSS ಮತ್ತು ವಿಎಚ್ಪಿ, 'ಧರ್ಮ ಸಂಸತ್' ಸಭೆ ಪೇಜಾವರ ಶ್ರೀಗಳ ಪರ್ಯಾಯದ ಅವಧಿಯಲ್ಲಿ ಉಡುಪಿಯಲ್ಲೇ ನಡೆಯಬೇಕೆಂದು ಕಾರ್ಯಕ್ರಮವನ್ನು ಹಿಂದೆಯೇ ರೂಪಿಸಿತ್ತು. ಹೀಗಿರುವಾಗ ಈ ಬೃಹತ್ ಕಾರ್ಯಕ್ರಮದಲ್ಲಿ ಪೇಜಾವರರು ಭಾಗವಹಿಸದೇ ಇದ್ದಲ್ಲಿ, ಹಿಂದೂ ಸಮಾಜದಲ್ಲಿ ಬೇರೆ ಸಂದೇಶ ರವಾನಿಸಿದಂತಾಗುತ್ತದೆ, ಹಾಗಾಗಿ ತಪ್ಪೋ, ಸರಿಯೋ ಪೇಜಾವರ ಶ್ರೀಗಳ ನಿಲುವು ಸಮರ್ಥನೀಯ ಎನ್ನುವ ಮಾತು ಚಾಲ್ತಿಯಲ್ಲಿದೆ.